ಕರ್ನಾಟಕ

ಪ್ರಿಯಕರನಿಗಾಗಿ ಹೆತ್ತ ಮಗುವನ್ನೇ ಹತ್ಯೆ ಮಾಡಿ ಪರಾರಿಯಾದ ತಾಯಿ; ತಾಯಿ, ಪ್ರಿಯಕರ ಸೆರೆ

Pinterest LinkedIn Tumblr

arrest

ಬಳ್ಳಾರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಿದೆ ಎಂಬ ಕಾರಣಕ್ಕೆ ಹೆತ್ತ ಮಗುವನ್ನೇ ಹತ್ಯೆ ಮಾಡಿ ಪರಾರಿಯಾಗಿದ್ದ ತಾಯಿ ಹಾಗೂ ಆಕೆಯ ಪ್ರಿಯಕರನನ್ನು ಹೊಸಪೇಟೆ ಪೊಲೀಸರು ಬಂಧಿಸಿದ್ದಾರೆ.

ನಾಲ್ಕು ವರ್ಷಗಳ ಮುಗ್ಧ ಮಗು ಪ್ರದೀಪ್‍ನನ್ನು ಹತ್ಯೆ ಮಾಡಿ, ಬೆಂಗಳೂರಿನಲ್ಲಿ ಪ್ರಿಯಕರನೊಂದಿಗೆ ತಲೆ ಮರೆಸಿಕೊಂಡಿದ್ದ ನಿಂಗಮ್ಮ ಹಾಗೂ ಕುಮಾರ್ ಈಗ ಪೊಲೀಸರ ಅತಿಥಿಗಳಾಗಿದ್ದಾರೆ.

ತಮ್ಮಿಬ್ಬರ ಪ್ರಣಯದಾಟಕ್ಕೆ ಮಗು ಅಡ್ಡಿಯಾಗಬಾರದು ಎಂದು ಹತ್ಯೆ ಮಾಡಿದ್ದಾಗಿ ಆರೋಪಿಗಳಾದ ಹೊಸಪೇಟೆ ಗವಿಸಿದ್ದೇಶ್ವರ ನಗರದ ನಿಂಗಮ್ಮ (27) ಹಾಗೂ ಆಕೆಯ ಪ್ರಿಯಕರ ಕುಮಾರ್ (22) ಪೊಲೀಸರ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಎಸ್ಪಿ ಆರ್. ಚೇತನ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹೊಸಪೇಟೆ ತಾಲೂಕಿನ ಡಣಾನಾಯಕನ ಕೆರೆ ನಿವಾಸಿ ವಿರೂಪಾಕ್ಷಿ ಎಂಬುವರನ್ನು ಮದುವೆಯಾಗಿದ್ದ ನಿಂಗಮ್ಮ, ಇದೇ ಗ್ರಾಮದ ಲಾರಿ ಕ್ಲೀನರ್ ಎಚ್.ಜೆ. ಕುಮಾರ್ ಜತೆ ಅಕ್ರಮ ಸಂಬಂಧ ಹೊಂದಿದ್ದಳು. ಗಂಡನನ್ನು ತೊರೆದು ಹೊಸಪೇಟೆ ನಗರದ ಜಂಬುನಾಥ ರಸ್ತೆಯ ಗವಿಸಿದ್ದೇಶ್ವರ ನಗರದಲ್ಲಿ ನಿಂಗಮ್ಮ ಹಾಗೂ ಕುಮಾರ್ ವಾಸವಾಗಿದ್ದರು.

ತಮ್ಮ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದ ಮಗುವಿನ ಮೇಲೆ ಸೆ. 28ರಂದು ನಿರ್ದಯವಾಗಿ ಹಲ್ಲೆ ಮಾಡಿ, ಪರಾರಿಯಾಗಿದ್ದರು. ತೀವ್ರ ಗಾಯಗಳಿಂದ ಒದ್ದಾಡುತ್ತಿದ್ದ ಮಗುವನ್ನು ಅಜ್ಜಿಯೇ ಸ್ಥಳಿಯರ ನೆರವಿನಿಂದ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೆ ಸೆ. 29ರಂದು ಪ್ರದೀಪ್ ಮೃತಪಟ್ಟಿದ್ದ. ಮಗುವನ್ನು ನಿಂಗಮ್ಮ ಹಾಗೂ ಕುಮಾರ್ ಸೇರಿ ಹತ್ಯೆ ಮಾಡಿದ್ದಾರೆ ಎಂದು ಪ್ರದೀಪ್‍ನ ಅಜ್ಜಿ ಹೊಸಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದರು.

Write A Comment