ಕರ್ನಾಟಕ

25 ಕಿ.ಮೀ. ರಸ್ತೆ; ಒಂದೇ ಗುಂಡಿ!

Pinterest LinkedIn Tumblr

ramaಬೆಂಗಳೂರು: ನಗರದ ಹೊರವರ್ತುಲ ರಸ್ತೆಯಲ್ಲಿ ಸಚಿವ ರಾಮಲಿಂಗಾರೆಡ್ಡಿ ಗುರುವಾರ 25 ಕಿ.ಮೀ. ದೂರ ಪ್ರಯಾಣ ಮಾಡಿದರು. ಅಷ್ಟು ದೂರದ ಪ್ರಯಾಣದಲ್ಲಿ ಅವರಿಗೆ ಕಂಡಿದ್ದು ಒಂದೇ ಒಂದು ರಸ್ತೆ ಗುಂಡಿ!

ಬಿಡಿಎ ಈ ರಸ್ತೆಯನ್ನು ನಿರ್ವಹಣೆ ಮಾಡುತ್ತಿದ್ದು, ಸಚಿವರು ಮೊದಲೇ ನೀಡಿದ್ದ ಸೂಚನೆ ಮೇರೆಗೆ ರಸ್ತೆಯಲ್ಲಿನ ಎಲ್ಲ ಗುಂಡಿಗಳನ್ನು ಮುಚ್ಚಲಾಗಿತ್ತು. ಅಲ್ಲದೆ, ಪಾಲಿಕೆಗೆ ಹಸ್ತಾಂತರ ಮಾಡಲು ಕಳೆದ ಮೂರು ತಿಂಗಳಿನಿಂದ ವರ್ತುಲ ರಸ್ತೆಯನ್ನು ಬಿಡಿಎ ಸಜ್ಜುಗೊಳಿಸುತ್ತಿತ್ತು.

ಸಚಿವರ ತಂಡ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ನಿಂದ ಹೆಬ್ಬಾಳ ಜಂಕ್ಷನ್‌ವರೆಗೆ ಪರಿಶೀಲನೆ ನಡೆಸಿತು. ಅಲ್ಲಲ್ಲಿ ಹೊಸದಾಗಿ ಟಾರು ಹಾಕಿದ ದೃಶ್ಯ ಕಂಡುಬಂತು. ಇಬ್ಬಲೂರು, ಸರ್ಜಾಪುರ ರಸ್ತೆ, ದೇವರಬಿಸನಹಳ್ಳಿ ಜಂಕ್ಷನ್, ದೊಡ್ಡನೆಕುಂದಿ, ಕೆ.ಆರ್.ಪುರ ಜಂಕ್ಷನ್, ಎಚ್‌ಆರ್‌ಬಿಆರ್ ಲೇಔಟ್ ರಸ್ತೆಗಳಲ್ಲಿ ಸಚಿವರು ತಪಾಸಣೆ ನಡೆಸಿದರು. ಮಹಿಳೆಯೊಬ್ಬರು ಸಾವಿಗೆ ಕಾರಣವಾದ ಗುಂಡಿಯಿದ್ದ ಪ್ರದೇಶವನ್ನೂ ವೀಕ್ಷಿಸಿದರು.

ವರ್ತುಲ ರಸ್ತೆಯಲ್ಲಿ ಇಬ್ಬಲೂರು ಬಳಿ ಮಾತ್ರ ಒಂದು ಗುಂಡಿ ಪತ್ತೆಯಾಯಿತು. ಜಲಮಂಡಳಿಯ ನೀರು ಪೂರೈಕೆ ಮಾರ್ಗದ ಸೋರಿಕೆಯಿಂದ ಈ ಗುಂಡಿ ಉಂಟಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಸಂಬಂಧಿಸಿದ ಎಂಜಿನಿಯರ್‌ ಅವರನ್ನು ಅಮಾನತು ಮಾಡಬೇಕು ಎಂದು ಸಚಿವರು ಸೂಚನೆ ನೀಡಿದರು.

ವರ್ತುಲ ರಸ್ತೆ ದುರಸ್ತಿ ಕಂಡಿದ್ದರೆ ಪಕ್ಕದ ಸರ್ವಿಸ್‌ ರಸ್ತೆಗಳು ಮಾತ್ರ ಹಾಳಾದ ಸ್ಥಿತಿಯಲ್ಲೇ ಇದ್ದವು. ಪರಿಶೀಲನೆ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಸಚಿವರು, ‘ಹೊರವರ್ತುಲ ರಸ್ತೆ ಈಗ ಗುಂಡಿಗಳಿಂದ ಮುಕ್ತವಾಗಿದೆ. ಸರ್ವಿಸ್‌ ರಸ್ತೆ ಮಾತ್ರ ದುರಸ್ತಿ ಆಗಬೇಕಿದೆ. ಆದಷ್ಟು ಬೇಗ ಸರ್ವಿಸ್‌ ರಸ್ತೆಗೆ ಡಾಂಬರೀಕರಣ ಮಾಡಿ, ವರ್ತುಲ ರಸ್ತೆಯನ್ನು ಬಿಬಿ ಎಂಪಿಗೆ ಹಸ್ತಾಂತರ ಮಾಡಬೇಕು ಎಂಬ ಸೂಚನೆಯನ್ನು ಬಿಡಿಎ ಅಧಿಕಾರಿಗಳಿಗೆ ನೀಡಿದ್ದೇನೆ’ ಎಂದು ತಿಳಿಸಿದರು.

‘ವರ್ತುಲ ರಸ್ತೆ ಕೆಲವೆಡೆ ವಿಭಜಕ ತೆಗೆಯಲಾಗಿದ್ದು, ಇದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ಅವುಗಳನ್ನು ಕೂಡಲೇ ಮುಚ್ಚುವಂತೆ ಸೂಚಿಸಲಾಗಿದೆ. ಅಲ್ಲದೆ, ವಿಭಜಕಗಳಲ್ಲಿ ಸಸಿ ನೆಡಲು ತಿಳಿಸಲಾಗಿದೆ’ ಎಂದು ವಿವರಿಸಿದರು.

‘ವರ್ತುಲ ರಸ್ತೆಯ ಒಟ್ಟು ಉದ್ದ 65 ಕಿ.ಮೀ. ಇದ್ದು, ಸದ್ಯ 47 ಕಿ.ಮೀ. ಉದ್ದದ ರಸ್ತೆಯನ್ನು ಬಿಡಿಎ ಹಸ್ತಾಂತರ ಮಾಡಲಿದೆ’ ಎಂದು ಸ್ಪಷ್ಟಪಡಿಸಿದರು. ‘ನಗರದಲ್ಲಿ ಎಷ್ಟು ಗುಂಡಿಗಳಿವೆ ಎಂಬುದನ್ನು ನಾವು ಲೆಕ್ಕ ಹಾಕುವುದಿಲ್ಲ. ಎಲ್ಲವನ್ನೂ ನವೆಂಬರ್‌ ಅಂತ್ಯದೊಳಗೆ ಮುಚ್ಚಲಿದ್ದೇವೆ’ ಎಂದು ತಿಳಿಸಿದರು.

ಮೇಯರ್‌ ಬಿ.ಎನ್‌. ಮಂಜುನಾಥ್‌ ರೆಡ್ಡಿ, ‘ವರ್ತುಲ ರಸ್ತೆಯನ್ನು ನಿರ್ವಹಣೆ ಮಾಡುವುದು ಪಾಲಿಕೆಗೆ ತೊಂದರೆ ಆಗುವುದಿಲ್ಲ. ನಾವು ಈ ಜವಾಬ್ದಾರಿಯನ್ನು ಹೊರಲಿದ್ದೇವೆ’ ಎಂದು ಹೇಳಿದರು.

*
ಮೇಲ್ಸೇತುವೆಗಳ ಹಸ್ತಾಂತರ
‘ಬಿಡಿಎದಿಂದ ನಗರದಲ್ಲಿ 31 ಮೇಲ್ಸೇತುವೆಗಳನ್ನು ನಿರ್ಮಿಸು ತ್ತಿದೆ. 26 ಮೇಲ್ಸೇತುವೆಗಳು ಪೂರ್ಣಗೊಂಡಿದ್ದು, ಆರನ್ನು ಪಾಲಿಕೆಗೆ ವಹಿಸಿಕೊಡಲಾಗಿದೆ. ಸಣ್ಣ–ಪುಟ್ಟ ದುರಸ್ತಿ ಕಾರ್ಯ ಮುಗಿದ ಬಳಿಕ ಇನ್ನೂ 20 ಮೇಲ್ಸೇತುವೆಗಳನ್ನು ಪಾಲಿಕೆಗೆ ಹಸ್ತಾಂತರ ಮಾಡಲಾಗುವುದು’ ಎಂದು ಬಿಡಿಎ ಆಯುಕ್ತ ಶ್ಯಾಮ್‌ಭಟ್‌ ತಿಳಿಸಿದರು.

‘ಹೆಬ್ಬಾಳ ರಸ್ತೆಯನ್ನು 15 ಮೀಟರ್‌ಗೆ ವಿಸ್ತರಣೆ ಮಾಡಲಾಗುವುದು. ಇದಕ್ಕಾಗಿ ₹ 88 ಕೋಟಿ ಯೋಜನೆ ಸಿದ್ಧಪಡಿಸಲಾಗಿದೆ. ಕೆಲಸ ಆರಂಭವಾದ ದಿನದಿಂದ 18 ತಿಂಗಳಲ್ಲಿ ರಸ್ತೆ ಬಳಕೆಗೆ ಸಿಗಲಿದೆ’ ಎಂದರು. ‘ಬಿಡಿಎ ನಿವೇಶನಗಳಲ್ಲಿ ಎಸ್‌ಸಿ ಮೀಸಲು ಪ್ರಮಾಣವನ್ನು ಶೇ 13ಕ್ಕೆ ಹೆಚ್ಚಿಸುವ ಪ್ರಸ್ತಾವ ಸರ್ಕಾರದ ಮುಂದಿದ್ದು, ಅದಕ್ಕೆ ಸಮ್ಮತಿ ಸಿಕ್ಕ ತಕ್ಷಣವೇ ಕೆಂಪೇಗೌಡ ಬಡಾವಣೆ ನಿವೇಶನ ಹಂಚಿಕೆಗೆ ಅರ್ಜಿ ಕರೆಯಲಾಗುತ್ತದೆ’ ಎಂದು ತಿಳಿಸಿದರು.

Write A Comment