ಮೈಸೂರು, ಸೆ.15: ಕೇರಳ ಮೂಲದ ಪ್ರೇಮಿಗಳು ರೆಸಿಡೆನ್ಸಿ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೇವರಾಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೇರಳದ ಮೂಲದ ತಲಚೇರಿಯ ಸೌತುನರ ಗ್ರಾಮದ ರೈಜು (36) ಹಾಗೂ ರಾಜೀಮಾ (35) ಆತ್ಮಹತ್ಯೆ ಮಾಡಿಕೊಂಡ ನತದೃಷ್ಟ ಪ್ರೇಮಿಗಳು. ಇವರಿಬ್ಬರು ಮೈಸೂರಿಗೆ ಆಗಮಿಸಿ ಶಿವರಾಂ ಪೇಟೆಯಲ್ಲಿರುವ ಕೆ.ಕೆ.ರೆಸಿಡೆನ್ಸಿಯಲ್ಲಿ ಕೊಠಡಿ ಬಾಡಿಗೆಗೆ ಪಡೆದಿದ್ದರು. ಸೆ.13 ರಂದು ಕೊಠಡಿಯೊಳಗೆ ಹೋದವರು ಹೊರಬಂದಿರಲಿಲ್ಲ. ಇದನ್ನು ಗಮನಿಸಿದ ರೆಸಿಡೆನ್ಸಿಯ ಸಿಬ್ಬಂದಿಗಳು ಕಿಟಕಿ ಮೂಲಕ ನೋಡಿದಾಗ ಇಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ.
ತಕ್ಷಣ ಈ ವಿಷಯವನ್ನು ದೇವರಾಜ ಠಾಣೆ ಪೊಲೀಸರಿಗೆ ತಿಳಿಸಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಕೊಠಡಿ ಬಾಗಿಲು ಹೊಡೆದು ಶವವನ್ನು ಪರಿಶೀಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ. ರೈಜು ಈಗಾಗಲೇ ವಿವಾಹಿತನಾಗಿದ್ದು, ಇಬ್ಬರು ಮಕ್ಕಳಿದ್ದಾರೆ ಹಾಗೂ ರಾಜೀಮಾ ಸಹ ವಿವಾಹಿತಳಾಗಿದ್ದು ಪತಿಯಿಂದ ವಿಚ್ಛೇದನ ಪಡೆದಿದ್ದಳು ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.ಈ ಸಂಬಂಧ ದೇವರಾಜ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.