ಕರ್ನಾಟಕ

ಶೀಲದ ಬಗ್ಗೆ ಶಂಕೆ; ಪತ್ನಿ, ಅತ್ತೆಯನ್ನು ಚೂರಿಯಿಂದ ಇರಿದು ಕೊಂದ ಪತಿ

Pinterest LinkedIn Tumblr

murder

ಬೆಂಗಳೂರು: ಪತ್ನಿ ಹಾಗೂ ಅತ್ತೆಯನ್ನು ಪತಿಯೇ ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆಗೈದಿರುವ ಘಟನೆ ನಗರದ ಆರ್‌ಪಿಸಿ ಬಡಾವಣೆಯ ಮನುವನ ಪ್ರದೇಶದಲ್ಲಿ ಸೋಮವಾರ ನಡೆದಿದೆ.

ಲೀಲಮ್ಮ(61), ವಸಂತ(31) ಹತ್ಯೆಯಾದವರು. ಕೃತ್ಯವೆಸಗಿದ ಆರೋಪಿ ಕುಮಾರ್(37) ಎಂಬಾತನನ್ನು ವಿಜನಗರ ಪೊಲೀಸರು ಬಂಧಿಸಿದ್ದಾರೆ. ಸೋಮವಾರ ಸಂಜೆ 5.30ರ ಸುಮಾರಿಗೆ ಈ ಘಟನೆ ನಡೆದಿದೆ.

ಆರೋಪಿ ಕುಮಾರ್, ಕೊಲೆಯಾದ ವಸಂತ ಅವರನ್ನು 10 ವರ್ಷಗಳ ಹಿಂದೆ ಮದುವೆಯಾಗಿದ್ದು, ದಂಪತಿಗೆ ಇಂಚರ ಹಾಗೂ ತೇಜಸ್ ಎಂಬ ಇಬ್ಬರು ಮಕ್ಕಳಿದ್ದಾರೆ. ಮಗಳು ಖಾಸಗಿ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದು, ತೇಜಸ್ ಯುಕೆಜಿ ವ್ಯಾಸಂಗ ಮಾಡುತ್ತಿದ್ದ.

ಈ ದಂಪತಿ ಚಂದ್ರಾ ಲೇಔಟನ್ ಅತ್ತಿಗುಪ್ಪೆಯಲ್ಲಿ ವಾಸವಿದ್ದರು. ಮನೆ ಸಮೀಪದಲ್ಲೇ ಕುಮಾರ್ ಕೋಳಿ ಮನೆ ಹೆಸರಿನ ಹೋಟೆಲ್ ನಡೆಸುತ್ತಿದ್ದ. ಹೋಟೆಲ್‌ನಲ್ಲಿ ಪತ್ನಿ ಸಹಾಯ ಮಾಡುತ್ತಿದ್ದಳು. ಕೊಲೆಯಾದ ಲೀಲಮ್ಮ ವಾರ್ತಾ ಇಲಾಖೆ ಕಚೇರಿಯಲ್ಲಿ ಡಿ.ದರ್ಜೆ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದು, 3 ತಿಂಗಳ ಹಿಂದೆ ನಿವೃತ್ತರಾಗಿದ್ದರು.

ಪತ್ನಿ ಶೀಲ ಶಂಕಿಸುತ್ತಿದ್ದ ಪತಿ: ಪತ್ನಿ ವಸಂತ ಶೀಲದ ಬಗ್ಗೆ ಕುಮಾರ್ ಅನುಮಾನ ವ್ಯಕ್ತಪಡಿಸುತ್ತಿದ್ದ. ಪತಿಯ ಬಗ್ಗೆ ಪತ್ನಿ ಅನುಮಾನಿಸುತ್ತಿದ್ದಳು. ಹೀಗಾಗಿ ದಂಪತಿ ನಡುವೆ ಮನೆಯಲ್ಲಿ ಜಗಳ ಸಾಮಾನ್ಯ ಎನ್ನುವಂತಿತ್ತು.

ಜಗಳದಿಂದ ಬೇಸತ್ತ ವಸಂತ, ಸೋಮವಾರ ಮನುವನ ಪ್ರದೇಶದಲ್ಲಿರುವ ತನ್ನ ತಾಯಿ ಮನೆಗೆ ಬಂದಿದ್ದಳು. ಪತ್ನಿ ಅಲ್ಲಿರುವ ವಿಷಯ ತಿಳಿದ ಕುಮಾರ್, ಸಂಜೆ ಗಂಟೆ ಸುಮಾರಿಗೆ ಅತ್ತೆ ಮನೆಗೆ ಬಂದಿದ್ದ. ಈ ವೇಳೆ ಹೇಳದೆ, ಕೇಳದೆ ಬಂದಿದ್ದಿಯಾ ಎಂದು ಜೋರಾಗಿ ಗಲಾಟೆ ಮಾಡಿದ್ದಾನೆ. ಬಳಿಕ ಚಾಕುವಿನಿಂದ ಪತ್ನಿಗೆ ಮನಸಿಗೆ ಬಂದಂತೆ ಇರಿದಿದ್ದಾನೆ. ಇದನ್ನು ತಡೆಯಲು ಮುಂದಾದ ಅತ್ತೆ ಲೀಲಮ್ಮಗೂ ಚಾಕುವಿನಿಂದ ಇರಿದಿದ್ದಾನೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಆರೋಪಿಯನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಬೇರೆ ಯಾವುದಾದರೂ ಕಾರಣಗಳಿಂದ ಕೃತ್ಯ ಎಸಗಿದ್ದಾನಾ ಎನ್ನುವ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Write A Comment