ಬೆಂಗಳೂರು: ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ‘ಕಿಲ್ಲಿಂಗ್ ವೀರಪ್ಪನ್’ ಸಿನೆಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. ವೀರಪ್ಪನ್ ಪಾತ್ರ ಯಾರು ನಿರ್ವಹಿಸುತ್ತಾರೆ ಎಂಬ ಕುತೂಹಲಕ್ಕೆ ತೆರೆಬಿದ್ದಿದೆ.
ವೀರಪ್ಪನ್ ಪಾತ್ರಕ್ಕೆ ಮೀಸೆ ತಿರುಗಿಸುತ್ತಿರುವವರು ನಟ ಸಂದೀಪ್ ಭಾರದ್ವಾಜ್. ದೆಹಲಿ ಮೂಲದ ರಂಗಭೂಮಿ ನಟ ವೀರಪ್ಪನ್ ಪಾತ್ರಕ್ಕೆ ಆಯ್ಕೆಯಾದಾಗಲಿಂದಲೂ ಬಹಳ ಉತ್ಸುಕರಾಗಿದ್ದಾರೆ. ಕಾಡಿನಂತಹ ವೈಪರಿತ್ಯ ಪ್ರದೇಶಗಳಲ್ಲಿ ವೀರಪ್ಪನ್ ಹೇಗೆ ವಾಸಿಸುತ್ತಿದ್ದ, ಏನನ್ನು ತಿನ್ನುತ್ತಿದ್ದ, ಮತ್ತು ಅವನ ಹಾವ ಭಾವಗಳು ಹೇಗಿರುತ್ತಿದ್ದವು ಇಂತಹ ಸೂಕ್ಷ್ಮ ವಿಷಯಗಳನ್ನು ಸಂದೀಪ್ ಅಧ್ಯಯನ ಮಾಡುತ್ತಿದ್ದಾರೆ.
ಆರ್ ಜಿ ವಿ ಹೇಳುವಂತೆ “ನನ್ನ ಜೀವನದಲ್ಲಿ ಇಷ್ಟು ಅರ್ಪಣಾ ಮನೋಭಾವವಿರುವ ಮತ್ತು ಸರಿಯಾದ ಮಾರ್ಗದಲ್ಲಿ ಕೆಲಸ ಮಾಡುವ ಮತ್ತೊಬ್ಬ ನಟನನ್ನು ನಾನು ನೋಡಿಲ್ಲ. ಇದು ಉತ್ಪ್ರೇಕ್ಷೆ ಅಲ್ಲ, ಸಂದೀಪ್ ಈಗಾಗಲೇ ವೀರಪ್ಪನ್ ರೀತಿ ಯೋಚನೆ ಮಾಡಲು ಪ್ರಾರಂಭಿಸಿದ್ದಾರೆ” ಎನ್ನುತ್ತಾರೆ.
ಈ ವರ್ಷದ ರಾಷ್ಟ್ರೀಯ ಚಲನಚಿತ್ರ ಅತ್ಯುತ್ತಮ ನಟ ಪ್ರಶಸ್ತಿ ಸಂಚಾರಿ ವಿಜಯ್ ಕೂಡ ‘ಕಿಲ್ಲಿಂಗ್ ವೀರಪ್ಪನ್’ ಸಿನೆಮಾದಲ್ಲಿ ನಟಿಸಲಿದ್ದಾರೆ. ಶಿವರಾಜ್ ಕುಮಾರ್, ಪರುಲ್ ಯಾದವ್ ಮತ್ತು ಯಜ್ಞಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.
ಈ ಹಿಂದೆ ವೀರಪ್ಪನ್ ಆಧಾರಿತ, ರಮೇಶ್ ನಿರ್ದೇಶಿಸಿದ್ದ ಸಿನೆಮಾ ‘ಅಟ್ಟಹಾಸ’ದಲ್ಲಿ ನಟ ಕಿಶೋರ್ ವೀರಪ್ಪನ್ ಪಾತ್ರದಲ್ಲಿ ಅಭಿನಯಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.