ಗದಗ: ವಿಚಾರವಾದಿ ಪ್ರೊ. ಕೆ.ಎಸ್. ಭಗವಾನ್ ಅವರ ಸವಾಲನ್ನು ಸ್ವೀಕರಿಸಿದ್ದು, ಜೂ. 28ರಂದು ಮೈಸೂರಿನಲ್ಲಿ ಬೆಳಗ್ಗೆ 11ರಿಂದ ಅವರ ಜತೆ ಬಹಿರಂಗ ಚರ್ಚೆ ನಡೆಸುವುದಾಗಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಭಗವದ್ಗೀತೆ ಯುದ್ಧ ಪ್ರಚೋದಕ, ಜಾತೀಯ ವಿಷ ಬೀಜ ಬಿತ್ತಿರುವ ಭಗವದ್ಗೀತೆಯನ್ನು ಸುಟ್ಟು ಹಾಕುವುದಾಗಿ ಹೇಳಿಕೆ ನೀಡಿದ್ದ ಭಗವಾನ್ ಜತೆ ಚರ್ಚಿಸುವುದಾಗಿ ವಿಶ್ವೇಶತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ”ನಮ್ಮೊಂದಿಗೆ ಪ್ರಹ್ಲಾದಾಚಾರ್ಯ, ಹರಿದಾಸ ಭಟ್, ಚಕ್ರವರ್ತಿ ಸೂಲಿಬೆಲೆ ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ. ಪ್ರೊ. ಭಗವಾನ್ ಅವರ ಜತೆಗೆ ಪ್ರೊ ಅರವಿಂದ ಮಾಲಗತ್ತಿ, ಬಂಜಗೆರೆ ಜಯಪ್ರಕಾಶ ಮುಂತಾದವರು ಭಾಗವಹಿಸಲಿದ್ದಾರೆ,” ಎಂದು ಹೇಳಿದರು.
ಹಿಂದೂಗಳ ಆರಾಧ್ಯ ದೈವ ಶ್ರೀ ರಾಮನು ಮದ್ಯ ಸೇವಿಸಿ, ಪರಸ್ತ್ರೀಯರೊಂದಿಗೆ ಮೋಜು ಮಾಡಿದ ಎಂದು ವಾಲ್ಮೀಕಿಯೇ ಹೇಳಿದ್ದಾನೆ. ಹೀಗಾಗಿ ರಾಮನನ್ನು ಏಕಪತ್ನಿವ್ರತಸ್ಥ ಎನ್ನಲು ಸಾಧ್ಯವಿಲ್ಲ ಎಂಬ ಪ್ರೊ.ಭಗವಾನ್ ಹೇಳಿಕೆ ಹಿಂದೂ ಸಂಘಟನೆಗಳ ಅಸಾಮಾಧಾನಕ್ಕೆ ಕಾರಣವಾಗಿದೆ.
ಮೋದಿ ಸರಕಾರದ ಸಾಧನೆಗೆ ಅತೃಪ್ತಿ
ಮೋದಿ ಸರಕಾರದ ಒಂದು ವರ್ಷದ ಆಡಳಿತದಲ್ಲಿ ನಿರೀಕ್ಷಿತ ಮಟ್ಟದ ಸಾಧನೆಯಾಗಿಲ್ಲ. ಮೋದಿ ದೇಶದ ಅಭಿವೃದ್ಧಿಗಾಗಿ ಹಗಲಿರಳು ಶ್ರಮಿಸುತ್ತಿದ್ದಾರೆ. ಕಾರ್ಯವೈಖರಿ ಮಾಪನ ಮಾಡಲು ಇನ್ನೂ 2-3 ವರ್ಷ ಕಾಲಾವಕಾಶ ಬೇಕು. ಒಂದು ವರ್ಷದ ಆಡಳಿತದಲ್ಲಿಯೇ ಸರಕಾರದ ಸಾಧನೆ ಅಳೆಯಲಾಗದು ಎಂದು ತಿಳಿಸಿದರು.