ಕರ್ನಾಟಕ

ಸಾಲಬಾಧೆ; ಮೂರು ಹೆಣ್ಣು ಮಕ್ಕಳನ್ನು ಕೊಂದು ನೇಣಿಗೆ ಶರಣಾದ ತಾಯಿ

Pinterest LinkedIn Tumblr

hang

ಬಾಗಲಕೋಟೆ, ಜೂ.20: ತನ್ನ ಮೂರು ಹೆಣ್ಣು ಮಕ್ಕಳಿಗೆ ನೇಣು ಹಾಕಿ ಕೊಂದು ನಂತರ ತಾಯಿಯೂ ಕೂಡ ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಮುದೋಳ ತಾಲೂಕಿನ ಮಹಾಲಿಂಗಪುರದಲ್ಲಿ ನಡೆದಿದೆ.

ಮೃತರನ್ನು ಪಟ್ಟಣದ ಬಾವೀಕಟ್ಟಿ ಓಣಿಯಲ್ಲಿ ವಾಸವಾಗಿದ್ದ ರಾಜೇಶ್ವರಿ (40), ಪುಷ್ಪ (19), ಸಾಧನ (15), ಸಹನ (11) ಎಂದು ಪೊಲೀಸರು ತಿಳಿಸಿದ್ದಾರೆ. ಸಾಲಬಾಧೆಯೇ ಈ ಘಟನೆಗೆ ಕಾರಣ ಎಂದು ತಿಳಿದುಬಂದಿದ್ದು, ಇಂದು ಬೆಳಗ್ಗೆ ತಾಯಿ ಮಕ್ಕಳ ಶವ ಕಂಡು ಇಡೀ ಗ್ರಾಮವೇ ಮರುಗಿದೆ.

ಮೂಲತಃ ಮಾನ್ವಿಯವರಾದ ರಾಜೇಶ್ವರಿ ಅವರು ಕಳೆದ 20 ವರ್ಷಗಳ ಹಿಂದೆ ವಿವಾಹವಾಗಿ ಮುದೋಳಕ್ಕೆ ಬಂದು ನೆಲೆಸಿದ್ದರು. ಮೂರು ಮಕ್ಕಳು ಹುಟ್ಟಿದ ನಂತರ ಪತಿ ಮನೆ ಬಿಟ್ಟು ಹೋಗಿದ್ದರು. ನಂತರ ಊರಿನಿಂದ ಸಹೋದರರನ್ನು ಕರೆಸಿಕೊಂಡು ಬಾವಿಕಟ್ಟಿ ಓಣಿಯಲ್ಲಿ ಸಣ್ಣ ಮನೆಯೊಂದನ್ನು ಮಾಡಿಕೊಂಡು ಕೂಲಿ ಕೆಲಸ ಮಾಡಿ ಮಕ್ಕಳನ್ನು ಬೆಳೆಸಿದ್ದರು ಎಂದು ಹೇಳಲಾಗಿದೆ.

ಘಟನೆ ನಡೆದಾಗ ರಾಜೇಶ್ವರಿಯವರ ಸೋದರರಾದ ಮುರುಗೋಡ ಮತ್ತು ಮಹಾನಿಂಗ ಎಂಬುವವರು ಹೊರಗೆ ಹೋಗಿದ್ದರು. ರಾತ್ರಿ 10 ಗಂಟೆಗೆ ಮನೆಗೆ ವಾಪಾಸಾದಾಗ ಘಟನೆ ಬೆಳಕಿಗೆ ಬಂದಿದೆ. ಮಹಲಿಂಗಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮುಂದಿನ ತನಿಖೆ ಕೈಗೊಂಡಿದ್ದಾರೆ.

Write A Comment