ಮೂಲ್ಕಿ,ಜೂನ್.20 : ನಮ್ಮೆಲ್ಲರ ಜೀವನದ ಬಹುಭಾಗವಾದ ಜನಪದ ಸಂಸ್ಕೃತಿಯು ಕೃಷಿ ಭೂಮಿಯಲ್ಲಿ ಅರಳಿದೆ. ಅಲ್ಲಿ ಬೆಳೆಯುವ ಬೆಳೆಯೇ ನಮ್ಮ ಶ್ರೀ ರಕ್ಷೆಯಾಗಿದೆ. ಬದುಕಿನ ಉದ್ದಕ್ಕೂ ಒತ್ತಡ ಜೀವನದಲ್ಲಿರುವ ನಮಗೆ ಈ ಭೂಮಿಯಲ್ಲಿನ ಕೃಷಿ ಹಾಗೂ ಕೈ ತೋಟದ ಕೆಲಸದಲ್ಲಿ ಹೊಸ ಹುಮ್ಮಸ್ಸು ನೀಡುತ್ತದೆ. ಭಾಷೆ ಎಷ್ಟು ಮುಖ್ಯವೋ ಅದರ ಹಿಂದಿನ ಜನಜೀವನದ ಕೃಷಿಯೂ ಅಷ್ಟೇ ಒಡನಾಟದಲ್ಲಿದೆ. ಕ್ರೀಡೆಯ ಮೂಲಕ ಯುವಜನರನ್ನು ಗದ್ದೆಗೆ ಆಕರ್ಷಿಸುವ ಕೆಲಸ ಶ್ಲಾಘನೀಯ ಎಂದು ಚಿಕ್ಕಮಗಳೂರಿನ ವೇದ ವಿಜ್ಞಾನ ಮಂದಿರದ ಕೆ.ಎಸ್.ನಿತ್ಯಾನಂದ ಸ್ವಾಮೀಜಿ ಅಭಿಪ್ರಾಯ ಪಟ್ಟರು. ಅವರು ಮೂಲ್ಕಿ ಪಾವಂಜೆಯ ಶ್ರಿ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಶ್ರಿ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ರಿಲೀಜಿಯಸ್ ಟ್ರಸ್ಟ್ ಹಾಗೂ ಸ್ಥಳೀಯ ವಿವಿಧ 23 ಕ್ಕೂ ಹೆಚ್ಚು ಸಂಘ ಸಂಸ್ಥೆಗಳ ಸಂಯೋಜನೆಯಲ್ಲಿ ನಡೆದ 5 ನೇ ವರ್ಷದ ತುಳುನಾಡ ಕೃಷಿ ಜನಪದೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಮೊಕ್ತೇಸರ ಹಾಗೂ ಮೂಲ್ಕಿ ಸೀಮೆಯ ದುಗ್ಗಣ್ಣ ಸಾವಂತ ಅರಸರು ಅಧ್ಯಕ್ಷತೆಯನ್ನು ವಹಿಸಿದ್ದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಯ್ಯೋಟ್ಟು ಸದಾಶಿವ ಸಾಲ್ಯಾನ್ ಜಾನಪದ ಮಾದರಿಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಪಾವಂಜೆಯ ಪ್ರಗತಿಪರ ಹಿರಿಯ ಕೃಷಿಕರಾದ ರುಕ್ಕಯ್ಯ ಮೂಲ್ಯ ಹಾಗೂ ನರ್ಸಿ ದೇವಾಡಿಗರವರನ್ನು ಆದರ್ಶ ಕೃಷಿಕರ ನೆಲೆಯಲ್ಲಿ ವೇದಿಕೆಯಲ್ಲಿ ಕೃಷಿ ಪರಿಕರದೊಂದಿಗೆ ಸನ್ಮಾನಿಸುವ ಮೂಲಕ ಪತ್ರಕರ್ತ ನರೇಂದ್ರ ಕೆರೆಕಾಡು ಹಾಗೂ ನಿಟ್ಟೆ ವಿದ್ಯಾಸಂಸ್ಥೆಯ ಡಾ.ಎಮ್ಆರ್ಎಸ್ಎಮ್ ಶಾಲೆಯ ಶಿಕ್ಷಕಿ ಉಷಾ ದಂಪತಿಗಳ ಅವಳಿ ಜವಳಿ ಮಕ್ಕಳಾದ ನವೀಶ್ ಮತ್ತು ನಮೀಶಾರವರ ಪ್ರಥಮ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು.
ಗುರುಪುರದ ಗೋಳಿದಡಿಗುತ್ತುವಿನ ವರ್ಧಮಾನ ದುರ್ಗಾಪ್ರಸಾದ್ ಶೆಟ್ಟಿ, ಹಳೆಯಂಗಡಿ ಬಂಕಿನಾಯ್ಗರು, ಕಲ್ಲಾಪು ವೀರಭದ್ರಮಹಮ್ಮಾಯಿ ದೇವಸ್ಥಾನದ ರತ್ನಾಕರ ಶೆಟ್ಟಿಗಾರ್, ಸಸಿಹಿತ್ಲು ಶ್ರಿ ಭಗವತೀ ದೇವಸ್ಥಾನದ ಶ್ರಿನಿವಾಸ ಪೂಜಾರಿ, ಶ್ರಿ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ಧರ್ಮದರ್ಶಿ ಡಾ.ಯಾಜಿ ನಿರಂಜನ ಭಟ್, ದೇವಸ್ಥಾನದ ಆಡಳಿತ ಮೊಕ್ತೇಸರ ಎಮ್. ಶಶೀಂದ್ರ ಕುಮಾರ್ ಹಾಜರಿದ್ದರು.
ಸಮಿತಿಯ ಎಚ್.ರಾಮಚಂದ್ರ ಶೆಣೈ ಸ್ವಾಗತಿಸಿದರು. ಸೋಮನಾಥ ದೇವಾಡಿಗ ಮತ್ತು ವಿನೋದ್ ಸಾಲ್ಯಾನ್ ಬೆಳ್ಳಾಯರು ಸನ್ಮಾನಿತರನ್ನು ಪರಿಚಯಿಸಿದರು. ಯೋಗೀಶ್ ಪಾವಂಜೆ ನಿರೂಪಿಸಿ, ವಿನೋದ್ ಕುಮಾರ್ ಬೊಳ್ಳೂರು ವಂದಿಸಿದರು.
ನರೇಂದ್ರ ಕೆರೆಕಾಡು………..