ಬೈಲಹೊಂಗಲ, ಜೂ.1: ತಾಲೂಕಿನ ಕಲಭಾವಿ ಗ್ರಾಮದಲ್ಲಿ ಮಾವನೊಬ್ಬ ಸೊಸೆ ರುಂಡ ಕಡಿದ ಘಟನೆ ನಿನ್ನೆ ನಡೆದಿದೆ. ಮಲ್ಲವ್ವ ನಾಗಪ್ಪ ಮಿಂಡೊಳ್ಳಿ (35) ಕೊಲೆಯಾದ ಮಹಿಳೆ. ಈರಪ್ಪ ಮಿಂಡೊಳ್ಳಿ ಕೊಲೆ ಮಾಡಿದವ.
ತಂದೆಯಿಂದ ಬೇರ್ಪಟ್ಟು ಸ್ವತಂತ್ರ ಜೀವನ ನಡೆಸುತ್ತಿದ್ದ ನಾಗಪ್ಪ ಮತ್ತು ಆತನ ಹೆಂಡತಿ ಮಲ್ಲವ್ವಗೆ ವಾಸಿಸಲು ಮನೆ ಇರಲಿಲ್ಲ. ಬಾಡಿಗೆ ನೀಡಿ ಸಂಸಾರ ನಡೆಸುವುದು ಕಷ್ಟವಾಗಿದೆ. ಮನೆಯಲ್ಲಿ ಚೂರು ಪಾಲು ನೀಡಿ ವಾಸಕ್ಕೆ ಅನುಕೂಲ ಮಾಡಿ ಕೊಡಬೇಕೆಂದು ಸೊಸೆ ಮಾವನ ಮೇಲೆ ಒತ್ತಡ ತಂದಿದ್ದಳು ಎನ್ನಲಾಗಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ನಿನ್ನೆ ಮಧ್ಯಾಹ್ನ ಸೊಸೆ ಮಲಗಿರುವಾಗ ಕೊಡಲಿಯಿಂದ ರುಂಡ ಕಡಿದು ಮಾವ ಕೊಲೆ ಮಾಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ನಿನ್ನೆ ಮಧ್ಯಾಹ್ನ ಒಳಚರಂಡಿ ಕಾಮಗಾರಿಯಲ್ಲಿ ನಿರತನಾಗಿದ್ದ ಮೃತಳ ಗಂಡ ಹೆಂಡತಿ ಕೊಲೆ ಸುದ್ಧಿ ಕೇಳಿ ದಿಗ್ಬ್ರಾಂತನಾಗಿ ಕುಸಿದು ಬಿದ್ದ ಘಟನೆ ನಡೆದಿದೆ.
ಸ್ಥಳಕ್ಕೆ ಬೈಲಹೊಂಗಲ ಡಿವೈಎಸ್ಪಿ ಎಂ.ವೈ.ಬಾಲದಂಡಿ, ಕಿತ್ತೂರ ಸಿಪಿಐ ಸಂಗನಗೌಡರ, ಪಿಎಸ್ಐ ಭೇಟಿ ನೀಡಿ ಪರಿಶೀಲಿಸಿದರು. ಆರೋಪಿ ಪರಾರಿಯಾಗಿದ್ದು, ತನಿಖೆ ಮುಂದುವರೆದಿದೆ. ಕಿತ್ತೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.