ತುಮಕೂರು,ಏ.19-ಬೆಂಗಳೂರಿನ ಪ್ರಗತಿ ಕಾಲೇಜು ಅಟೆಂಡರ್ ಒಬ್ಬ ಬಿಹಾರದಿಂದ ಪಿಸ್ತೂಲ್ ಖರೀದಿಸಿ ತಂದ ಪ್ರಕರಣ ಹಸಿರಾಗಿರುವಾಗಲೇ ತುಮಕೂರಿನ ಕ್ಯಾತಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬನ ಬಳಿ ಪಿಸ್ತೂಲಿರುವುದು ಪತ್ತೆಯಾಗಿದ್ದು, ವ್ಯಕ್ತಿಯನ್ನು ಬಂಧಿಸಿರುವ ಪೊಲೀಸರು ಪಿಸ್ತೂಲ್ ವಶಪಡಿಸಿಕೊಂಡಿದ್ದಾರೆ. ಊರ್ಡಿಗೆರೆ ಹೋಬಳಿ ಡಣನಾಯಕನಪುರ ನಿವಾಸಿ ರಂಗಸ್ವಾಮಯ್ಯ ಎಂಬುವರ ಮಗ ಕೃಷ್ಣಯ್ಯ ಎಂಬುವನ ಬಳಿ ಅಕ್ರಮ ಪಿಸ್ತೂಲ್ ಇರುವ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ
ಆರ್.ಲಕ್ಷ್ಮಣ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡ ಕೃಷ್ಣಯ್ಯನನ್ನು ಬಂಧಿಸಿ ಪಿಸ್ತೂಲ್ ವಶಪಡಿಸಿಕೊಂಡಿದ್ದಾರೆ. ಕೃಷ್ಣಯ್ಯನನ್ನು ವಿಚಾರಣೆಗೊಳಪಡಿಸಿದಾಗ ತಾನು ನೆಲಮಂಗಲ ತಾಲ್ಲೂಕು ಸೋಂಪುರ ಹೋಬಳಿ ಲಕ್ಷ್ಮಿಪುರದ ಸೋಮೇಶ ಎಂಬುವನಿಂದ ಪಿಸ್ತೂಲು ಖರೀದಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಅವನನ್ನು ವಶಪಡಿಸಿಕೊಂಡಿರುವ ಪೊಲೀಸರು ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ವೃತ್ತ ನಿರೀಕ್ಷಕ ರವಿಕುಮಾರ್, ಸಬ್ಇನ್ಸ್ಪೆಕ್ಟರ್ ಮಂಜುನಾಥ್, ಪೇದೆಗಳಾದ ವೆಂಕಟೇಶ್, ದೇವರಾಜ್ ಪಾಲ್ಗೊಂಡಿದ್ದರು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಲಕ್ಷ್ಮಣ್ ಹೇಳಿದ್ದಾರೆ.