ಕಲಬುರ್ಗಿ: ತೀವ್ರ ಹೆರಿಗೆ ನೋವಿನಿಂದ ಗಂಭೀರ ಸ್ಥಿತಿ ತಲುಪಿದ್ದ ಮಹಿಳೆಗೆ ಆರೋಗ್ಯ ಕವಚ 108 ಆಂಬುಲೆನ್ಸ್ನಲ್ಲಿಯೇ ಹೆರಿಗೆ ಮಾಡಿಸುವ ಮೂಲಕ ಆಂಬುಲೆನ್ಸ್ನ ಸಿಬ್ಬಂದಿ ಮಾನವೀಯತೆ ಮೆರೆದ ಘಟನೆ ಶನಿವಾರ ನಡೆದಿದೆ.
ಅಫಜಲಪುರ ತಾಲ್ಲೂಕು ತೆಲ್ಲೂರ ಗ್ರಾಮದ ಯಲ್ಲಮ್ಮ ನಿಂಗಪ್ಪ (30) ಅವರು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ. ಹೆರಿಗೆ ನೋವಿನಿಂದ ಬಳಲುತ್ತಿದ್ದ ಯಲ್ಲಮ್ಮ ಅವರ ಮನೆಯವರು ಸ್ಟೇಷನ್ ಗಾಣಗಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಿಯೋಜನೆಗೊಂಡಿರುವ 108 ಆಂಬುಲೆನ್ಸ್ಗೆ ಕರೆ ಮಾಡಿದರು.
‘ಆಂಬುಲೆನ್ಸ್ ಸಿಬ್ಬಂದಿ ತೆಲ್ಲೂರಿಗೆ ಹೋಗಿ ಮಹಿಳೆಯನ್ನು ಕರೆತಂದರು. ಮಾರ್ಗ ಮಧ್ಯ ಮಹಿಳೆ ತೀವ್ರವಾಗಿ ಬಳಲಲಾರಂಭಿಸಿದರು. ಒಂದು ಮಗುವಿನ ಕಾಲು ಹೊರಗೆ ಬಂದಿತ್ತು. ಹಾಗೇ ಬಿಟ್ಟಿದ್ದರೆ ಮಹಿಳೆಯ ಜೀವಕ್ಕೆ ಅಪಾಯವಾಗುತ್ತಿತ್ತು. ಇದನ್ನು ಅರಿತ ತುರ್ತು ವೈದ್ಯಕೀಯ ತಜ್ಞ ಖಾಜಾ ಖದ್ರುದ್ದೀನ್ ಅವರು ಚಾಲಕ ಸಿದ್ದಪ್ಪ ಅಳ್ಳೂರಿ ಅವರ ಸಹಾಯದಿಂದ ಮಹಿಳೆಯ ಹೆರಿಗೆ ಮಾಡಿಸಿದರು’ ಎಂದು ಆರೋಗ್ಯ ರಕ್ಷಾ ಕವಚದ ಅಧಿಕಾರಿ ಪ್ರವೀಣ ಮನು ತಿಳಿಸಿದರು.
ಶನಿವಾರ ಮಧ್ಯಾಹ್ನ 12 ಗಂಟೆಯ ಸುಮಾರು ಈ ಘಟನೆ ನಡೆದಿದೆ. ತಾಯಿ ಹಾಗೂ ಅವಳಿ ಗಂಡು ಮಕ್ಕಳು ಆರೋಗ್ಯವಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಡಾ.ರಾಘವೇಂದ್ರ ತಿಳಿಸಿದ್ದಾರೆ.