ಮೈಸೂರು: ಕೆರೆಗಳ ಒತ್ತುವರಿ, ಪಕ್ಷಿ ತಾಣಗಳ ನಾಶ ಇತ್ಯಾದಿ ಕಾರಣಗಳಿಂದಾಗಿ ಸೈಬೀರಿಯಾ, ಮಂಗೋಲಿಯಾ ಮೊದಲಾದ ಕಡೆಗಳಿಂದ ಚಳಿಗಾಲದಲ್ಲಿ ದಕ್ಷಿಣ ಕರ್ನಾಟಕಕ್ಕೆ ವಲಸೆ ಬರುತ್ತಿದ್ದ ಹಕ್ಕಿಗಳ ಸಂಖ್ಯೆ ಕಳೆದ ಎರಡು ದಶಕಗಳಿಗೆ ಹೋಲಿಸಿದರೆ ಈಗ ಅರ್ಧದಷ್ಟು ಕಡಿಮೆಯಾಗಿದೆ.
ಸೈಬೀರಿಯಾ, ಮಂಗೋಲಿಯಾದಲ್ಲಿ ಚಳಿಗಾಲದಲ್ಲಿನ ಅತೀವ ಚಳಿಯನ್ನು ತಾಳಲಾರದೇ ಅಲ್ಲಿನ ಪಕ್ಷಿಗಳು ಕೆರೆ, ತೊರೆ, ವನ ಸಮೃದ್ಧ ತಾಣವಾದ ದಕ್ಷಿಣ ಕರ್ನಾಟಕದೆಡೆಗೆ ಪ್ರತಿ ವರ್ಷ ವಲಸೆ ಬರುತ್ತವೆ. ಕೆರೆಗಳ ಒತ್ತುವರಿ, ಪಕ್ಷಿ ನೆಲೆಗಳು ನಾಶಗೊಳ್ಳುತ್ತಿರುವ ಕಾರಣ ವಲಸೆ ಬರುವ ಪಕ್ಷಿಗಳ ಸಂಖ್ಯೆ ತೀವ್ರ ಕಡಿಮೆಯಾಗಿದೆ ಎಂದು ಕೆಲ ವರ್ಷಗಳಿಂದ ಪಕ್ಷಿ ಸಮೀಕ್ಷೆ ನಡೆಸುತ್ತಿರುವ ಪಕ್ಷಿಪ್ರೇಮಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಉತ್ತರ ಏಷ್ಯಾದ ಕಡೆಯಿಂದ ಬರುವ ಪಕ್ಷಿಗಳಲ್ಲಿ ‘ಪರ್ವತಹಕ್ಕಿ’ ಅಥವಾ ‘ಗೀರುಬಾತು’ (ಬಾರ್ ಹೆಡೆಡ್ ಗೀಸ್), ‘ಬಾತು’ (ಗಾರ್ಗೆನಿ), ‘ಸಲಾಕೆ’ (ಶೊವ್ಲರ್), ‘ಸೂಜಿ ಬಾಲದ ಬಾತು’ (ಪಿನ್ ಟೈಲ್ಡ್ ಡಕ್), ‘ವಿಜನ್’ ಪ್ರಮುಖವಾದವು. ಸಾಮಾನ್ಯವಾಗಿ ಈ ಪಕ್ಷಿಗಳು ನವೆಂಬರ್ನಲ್ಲಿ ಮೈಸೂರು ಮತ್ತು ಸುತ್ತಮುತ್ತಲಿನ ಹದಿನಾರು, ಕಗ್ಗಲಿಪುರ ಗ್ರಾಮಗಳ ಕೆರೆ–ಕಟ್ಟೆಗಳು, ಕಬಿನಿ ಜಲಾಶಯದ ಹಿನ್ನೀರಿನ ಪ್ರದೇಶಗಳಿಗೆ ವಲಸೆ ಬರುತ್ತವೆ. ಫೆಬ್ರುವರಿ ಎರಡು ಅಥವಾ ಮೂರನೇ ವಾರದಲ್ಲಿ ವಾಪಸಾಗುತ್ತವೆ. ಹಿಮಾಲಯದ ಮೂಲಕ ಸುಮಾರು ಐದು ಸಾವಿರ ಕಿಲೋ ಮೀಟರ್ ಹಾರಿಕೊಂಡು ಇಲ್ಲಿಗೆ ಬರುತ್ತವೆ ಎಂದು ಪಕ್ಷಿ ವೀಕ್ಷಕ ಗುರುಪ್ರಸಾದ್ ವಿವರಿಸುತ್ತಾರೆ.
ಮಂಗೋಲಿಯಾ ಮತ್ತು ಸೈಬೀರಿಯಾದಲ್ಲಿ ಚಳಿಗಾಲದಲ್ಲಿ ಉಷ್ಣಾಂಶ ಶೂನ್ಯ ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಹೀಗಾಗಿ, ಅಲ್ಲಿನ ಪಕ್ಷಿಗಳು ದಕ್ಷಿಣ ಕರ್ನಾಟಕದ ಕಡೆಗೆ ವಲಸೆ ಬಂದು 2–3 ತಿಂಗಳು ಇಲ್ಲಿ ತಂಗುತ್ತವೆ. ಆದರೆ ಈ ಅವಧಿಯಲ್ಲಿ ಪರ್ವತ ಹಕ್ಕಿಗಳು ಇಲ್ಲಿ ಸಂತಾನೋತ್ಪತ್ತಿ ಮಾಡುವುದಿಲ್ಲ ಎಂದು ಅವರು ಹೇಳುತ್ತಾರೆ.
ಎರಡು ದಶಕಗಳ ಹಿಂದೆ ಮೈಸೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಚಳಿಗಾಲದಲ್ಲಿ ಸುಮಾರು ಒಂದು ಲಕ್ಷ ಬಾನಾಡಿಗಳು ವಲಸೆ ಬರುತ್ತಿದ್ದವು. ಈಗ ಈ ಪ್ರಮಾಣ ಬಹಳ ಕಡಿಮೆಯಾಗಿದೆ. ಪಾರಂಪರಿಕ ನಗರಿಯ ಕುಕ್ಕರಹಳ್ಳಿ ಮತ್ತು ಕಾರಂಜಿ ಕೆರೆಗಳು ಈ ಕಾಲದಲ್ಲಿ ವಲಸೆ ಪಕ್ಷಿಗಳ ಹಾರಾಟದಿಂದ ಕಂಗೊಳಿಸುತ್ತಿದ್ದವು. 2015ರ ಸಮೀಕ್ಷೆ ಪ್ರಕಾರ ಸಮಾರು 40 ಸಾವಿರ ಪಕ್ಷಿಗಳು ವಲಸೆ ಬಂದಿವೆ ಎಂದು ‘ಮೈಸೂರು ನೇಚರ್’ ಸಮೂಹದ ಎ.ಶಿವಪ್ರಕಾಶ್ ಅವರ ಅಭಿಪ್ರಾಯ.
ಹಿಂದೆ ಸುಮಾರು 2,500ಕ್ಕೂ ಹೆಚ್ಚು ಪರ್ವತ ಹಕ್ಕಿಗಳು ವಲಸೆ ಬರುತ್ತಿದ್ದವು. ಈಚಿನ ವರ್ಷಗಳಲ್ಲಿ ವಲಸೆ ಬರುವ ಈ ಹಕ್ಕಿಗಳ ಪ್ರಮಾಣ ಸುಮಾರು 400ರಿಂದ 500 ಆಗಿದೆ. ಪಕ್ಷಿ ನೆಲೆಗಳ ನಾಶವೇ ಪಕ್ಷಿಗಳ ವಲಸೆ ಬರುವುದು ಇಳಿಮುಖವಾಗಿರುವುದಕ್ಕೆ ಕಾರಣ. ಪರ್ವತ ಹಕ್ಕಿಗಳು ಸಾಮಾನ್ಯವಾಗಿ ವಾಸಕ್ಕೆ ಸ್ವಚ್ಛ ನೀರಿನ ತಾಣಗಳನ್ನು ಅರಸಿ ಬರುತ್ತವೆ. ಆದರೆ, ಈಗ ಕೆರೆಗಳೂ ಕಲುಷಿತವಾಗಿವೆ, ಕೆರೆಗಳ ಒತ್ತುವರಿ ಇತ್ಯಾದಿ ಕಾರಣದಿಂದ ವಲಸೆ ಇಳಿಯಲು ಮತ್ತೊಂದು ಪ್ರಮುಖ ಕಾರಣ. ಇದಕ್ಕಾಗಿ ಪಕ್ಷಿಗಳ ತಾಣ ಮತ್ತು ಕೆರೆಗಳ ರಕ್ಷಣೆ ಇಂದಿನ ಅಗತ್ಯವಾಗಿದೆ ಎಂದು ಅವರು ಹೇಳುತ್ತಾರೆ.