ಬೆಂಗಳೂರು: ಹಾಲಿ ಚಾಂಪಿಯನ್ ಕರ್ನಾಟಕ ತಂಡ ರಣಜಿಯಲ್ಲಿ ಒಟ್ಟು 400 ಪಂದ್ಯಗಳನ್ನು ಆಡಿದ ಶ್ರೇಯಕ್ಕೆ ಪಾತ್ರವಾಗಲಿದೆ. ಇದಕ್ಕಾಗಿ ಉತ್ತರ ಪ್ರದೇಶ ಎದುರು ವೇದಿಕೆ ಸಜ್ಜುಗೊಂಡಿದೆ.
ಕರ್ನಾಟಕ ಮತ್ತು ಉತ್ತರ ಪ್ರದೇಶ ತಂಡಗಳ ನಡುವೆ ಗುರುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ‘ಎ’ ಗುಂಪಿನ ರಣಜಿ ಪಂದ್ಯ ನಡೆಯಲಿದೆ. ರಣಜಿಯಲ್ಲಿ 400 ಮತ್ತು ಅದಕ್ಕಿಂತಲೂ ಹೆಚ್ಚು ಪಂದ್ಯಗಳನ್ನು ಆಡಿದ ನಾಲ್ಕನೇ ತಂಡ ಎನ್ನುವ ಕೀರ್ತಿ ರಾಜ್ಯದ ಪಾಲಾಗಲಿದೆ.
ಹೆಚ್ಚು ಬಾರಿ ರಣಜಿ ಟ್ರೋಫಿ ಗೆದ್ದಿರುವ ಮುಂಬೈ ಇದುವರೆಗೂ ಒಟ್ಟು 470 ಪಂದ್ಯಗಳನ್ನು ಆಡಿದೆ. ದೆಹಲಿ 414 ಮತ್ತು ತಮಿಳುನಾಡು 404 ನಂತರದ ಸ್ಥಾನಗಳನ್ನು ಹೊಂದಿವೆ. ಕರ್ನಾಟಕ ತಂಡ 1934ರಲ್ಲಿ ಚೆನ್ನೈ ಎದುರು ಚೊಚ್ಚಲ ರಣಜಿ ಪಂದ್ಯವಾಡಿತ್ತು. ಆ ಪಂದ್ಯದಲ್ಲಿ ರಾಜ್ಯ ತಂಡ ಇನಿಂಗ್ಸ್ ಮತ್ತು 23 ರನ್ಗಳ ನಿರಾಸೆ ಕಂಡಿತ್ತು.
‘ಉತ್ತರ ಪ್ರದೇಶ ಎದುರಿನ ಹೋರಾಟ ಕರ್ನಾಟಕಕ್ಕೆ 400ನೇ ಪಂದ್ಯ ಎಂಬುದು ತಿಳಿದು ಸಂತೋಷವಾಯಿತು. ಇತ್ತೀಚಿನ ವರ್ಷಗಳಲ್ಲಿ ಎಲ್ಲಾ ತಂಡಗಳಿಗೂ ಹೆಚ್ಚು ಪಂದ್ಯಗಳನ್ನು ಆಡಲು ಅವಕಾಶ ಸಿಗುತ್ತಿದೆ. ಇದರಿಂದ ಸಾಕಷ್ಟು ಆಟಗಾರರು ಬೆಳಕಿಗೆ ಬರುತ್ತಿದ್ದಾರೆ. 400ನೇ ಪಂದ್ಯ ಬೆಂಗಳೂರಿನಲ್ಲಿಯೇ ಆಯೋಜನೆಯಾಗಿರುವುದು ಖುಷಿಯ ವಿಚಾರ’ ಎಂದು ರಾಜ್ಯ ತಂಡದ ಮಾಜಿ ಆಟಗಾರ ಆನಂದ್ ಕಟ್ಟಿ ‘ಪ್ರಜಾವಾಣಿ’ ಜೊತೆ ಅನಿಸಿಕೆ ಹಂಚಿಕೊಂಡರು.
‘ಮೊದಲು ವಲಯವಾರು ಟೂರ್ನಿ ನಡೆಯುತ್ತಿದ್ದವು. ದಕ್ಷಿಣ ವಲಯದ ನಮ್ಮ ತಂಡಕ್ಕೆ ಗರಿಷ್ಠ ಐದು ಪಂದ್ಯ ಆಡಲು ಅವಕಾಶವಿತ್ತು. ವಲಯ ಮಟ್ಟದಲ್ಲಿ ಗೆದ್ದರೆ ಮಾತ್ರ ಮತ್ತಷ್ಟು ಪಂದ್ಯ ಆಡಬಹುದಿತ್ತು. ಆದರೆ, ಈಗಿನ ರಣಜಿ ಟೂರ್ನಿಯ ಲೀಗ್ ಹಂತದಲ್ಲಿಯೇ ಎಲ್ಲಾ ತಂಡಗಳು ಎಂಟು ಪಂದ್ಯಗಳನ್ನು ಆಡುತ್ತವೆ. ಇದು ಕ್ರಿಕೆಟ್ ಬೆಳವಣಿಗೆ ದೃಷ್ಟಿಯಿಂದ ಒಳ್ಳೆಯದು’ ಎಂದು ಕಟ್ಟಿ ಅಭಿಪ್ರಾಯಪಟ್ಟರು.
ಕರ್ನಾಟಕ ತಂಡ ತವರಿನಲ್ಲಿ ಒಟ್ಟು 146 ಪಂದ್ಯಗಳನ್ನು ಆಡಿದೆ. 72ರಲ್ಲಿ ಗೆಲುವು ಸಾಧಿಸಿದ್ದು, 22 ಪಂದ್ಯಗಳಲ್ಲಿ ನಿರಾಸೆ ಎದುರಾಗಿದೆ. 52 ಪಂದ್ಯಗಳು ಡ್ರಾ ಆಗಿವೆ.
ತಿರುಗೇಟು ನೀಡುವತ್ತ ಚಿತ್ತ: ಹೋದ ಸಲದ ರಣಜಿ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರಾಜ್ಯ ತಂಡದ ಎದುರು ಸೋಲು ಕಂಡಿದ್ದ ಉತ್ತರ ಪ್ರದೇಶ ಈಗ ತಿರುಗೇಟು ನೀಡಲು ಕಾಯುತ್ತಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ವಿನಯ್ ಕುಮಾರ್ ಪಡೆ 92 ರನ್ಗಳ ಗೆಲುವು ಪಡೆದಿತ್ತು.