ಪುಣೆ: ಖ್ಯಾತ ವ್ಯಂಗ್ಯ ಚಿತ್ರಕಾರ ಆರ್.ಕೆ. ಲಕ್ಷ್ಮಣ್ ಅವರ ಅಂತ್ಯಕ್ರಿಯೆಯನ್ನು ಮಂಗಳವಾರ ಇಲ್ಲಿ ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಯಿತು.
ಇಲ್ಲಿನ ವೈಕುಂಠ ಚಿತಾಗಾರದಲ್ಲಿ ಅವರ ಪುತ್ರ ಶ್ರೀನಿವಾಸ ಅಂತಿಮ ವಿಧಿಗಳನ್ನು ನಡೆಸಿದರು. ಮೃತರ ಗೌರವಾರ್ಥ ಗಾಳಿಯಲ್ಲಿ ಗುಂಡು ಹಾರಿಸಲಾಯಿತು. ಸಿಂಬಯೊಸಿಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಲಕ್ಷ್ಮಣ್ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಇಡಲಾಗಿತ್ತು.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್, ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ, ಶಿಕ್ಷಣ ಸಚಿವ ವಿನೋದ್ ತಾವಡೆ, ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಲಕ್ಷ್ಮಣ್ ಅವರಿಗೆ ಪುಷ್ಪನಮನ ಸಲ್ಲಿಸಿದರು.
ಲಕ್ಷ್ಮಣ್ ಅವರ ‘ಸಾಮಾನ್ಯ ಮನುಷ್ಯ’ ಈ ಜಗತ್ತು ಅಂತ್ಯವಾಗುವವರೆಗೆ ಇರುತ್ತಾನೆ. ರಾಜಕೀಯ ವ್ಯವಸ್ಥೆಯನ್ನು ಪ್ರಶ್ನಿಸುತ್ತಲೇ ಇರುತ್ತಾನೆ ಎಂದು ಫಡಣವೀಸ್ ಹೇಳಿದರು.
ಮಹಾರಾಷ್ಟ್ರ ಸರ್ಕಾರ ಲಕ್ಷ್ಮಣ್ ಅವರಿಗೆ ಸ್ಮಾರಕ ನಿರ್ಮಿಸಲು ಯೋಜಿಸುತ್ತಿದೆ ಎಂದು ಶಿಕ್ಷಣ ಸಚಿವ ತಾವಡೆ ತಿಳಿಸಿದರು.
ತಮ್ಮ ತಂದೆ ಬಾಳ ಠಾಕ್ರೆ ಹಾಗೂ ಲಕ್ಷ್ಮಣ್ ಜತೆಯಾಗಿ ಕೆಲಸ ಮಾಡಿದ್ದರು ಎಂಬುದನ್ನು ನೆನಪಿಸಿಕೊಂಡ ಉದ್ಧವ್ ಠಾಕ್ರೆ, ಅವರು ಗೆರೆಗಳ ‘ಕೊನೆಯ ಚಕ್ರವರ್ತಿ’ ಎಂದು ಶ್ಲಾಘಿಸಿದರು.
ಅಂತಿಮ ದರ್ಶನ ಪಡೆದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಪ್ರಧಾನಿ ಮೋದಿ ಅವರ ಸಂದೇಶವನ್ನು ತಲುಪಿಸಿದರು.
ಕೊನೆ ಕಾರ್ಟೂನ್
ಬೆಂಗಳೂರು (ಪಿಟಿಐ): ಆರ್.ಕೆ. ಲಕ್ಷ್ಮಣ್ ತಮ್ಮ ಕೊನೆಯ ದಿನಗಳಲ್ಲಿ ರಚಿಸಿದ್ದ ಕಾರ್ಟೂನನ್ನು ಇಸ್ರೊ (ಭಾರತೀಯ ಬಾಹ್ಯಾಕಾಶ ಸಂಸ್ಥೆ ) ಫೇಸ್ಬುಕ್ ಪುಟದಲ್ಲಿ ಪ್ರಕಟಿಸುವ ಮೂಲಕ ಈ ವ್ಯಂಗ್ಯಚಿತ್ರಕಾರನಿಗೆ ಗೌರವ ಸಲ್ಲಿಸಿದೆ.
ಇಸ್ರೊದ ‘ಮಂಗಳಯಾನ’ ಯೋಜನೆ ನಿರ್ದೇಶಕರಾಗಿದ್ದ ಎಸ್. ಅರುಣನ್ ಡಿಸೆಂಬರ್ನಲ್ಲಿ ಪುಣೆಗೆ ತೆರಳಿದ್ದಾಗ ಲಕ್ಷ್ಮಣ್ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಜ.1ಕ್ಕೆ ಮಂಗಳಯಾನ ಯೋಜನೆಗೆ 100 ದಿನ ಪೂರೈಸುತ್ತಿರುವುದರಿಂದ ಕಾರ್ಟೂನ್ ಬಿಡಿಸಲು ಸಾಧ್ಯವೇ ಎಂದು ಮನವಿ ಮಾಡಿಕೊಂಡಿದ್ದರು.
ಡಿ.26ರಂದು ಲಕ್ಷ್ಮಣ್ ಬಿಡಿಸಿದ ಕಾರ್ಟೂನ್ ಅರುಣನ್ ಅವರಿಗೆ ತಲುಪಿತ್ತು. ಲಕ್ಷ್ಮಣ್ ಅವರ ಅಚ್ಚುಮೆಚ್ಚಿನ ‘ಸಾಮಾನ್ಯ ಮನುಷ್ಯ’ ಭಾರತದ ಧ್ವಜವನ್ನು ಹಿಡಿದು ಮಂಗಳಗ್ರಹಕ್ಕೆ ತಲುಪಿದ ಕಾರ್ಟೂನ್ ಇದಾಗಿದೆ.