ನವದೆಹಲಿ: ಅನುಮತಿ ಪಡೆಯದೇ ಚುನಾವಣಾ ಪ್ರಚಾರದ ಭಿತ್ತಿಪತ್ರಗಳಲ್ಲಿ ತಮ್ಮ ಭಾವಚಿತ್ರ ಬಳಸಿದ್ದಕ್ಕೆ ದೆಹಲಿ ಬಿಜೆಪಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿ ಅವರು ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರಿಗೆ ಮಂಗಳವಾರ ನೋಟಿಸ್ ಕಳುಹಿಸಿದ್ದಾರೆ.
‘ಕಿರಣ್ ಬೇಡಿ ಅವರು ಕೇಜ್ರಿವಾಲ್ ಅವರಿಗೆ ನೋಟಿಸ್ ಕಳುಹಿಸಿದ್ದಾರೆ. ಭಿತ್ತಿಪತ್ರಗಳನ್ನು ತೆಗೆದು ಹಾಕುವುದಾಗಿ ಕೇಜ್ರಿವಾಲ್ ಖಚಿತಪಡಿಸಿದ್ದಾರೆ’ ಎಂದು ಬಿಜೆಪಿ ಪಕ್ಷದ ಸಂಚಾಲಕ ಪ್ರವೀಣ್ ಶಂಕರ್ ತಿಳಿಸಿದ್ದಾರೆ.
ಬಿಜೆಪಿ ಒತ್ತಾಯ: ನೀತಿ ಸಂಹಿತೆಯನ್ನು ಉಲ್ಲಂಘಿಸಿರುವ ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಅವರನ್ನು ಚುನಾವಣೆ ಸ್ಪರ್ಧೆಯಿಂದ ಅನರ್ಹಗೊಳಿಸಬೇಕು ಮತ್ತು ಪ್ರಚಾರ ಸಭೆಯಲ್ಲಿ ಭಾಗಿಯಾಗದಂತೆ ನಿಷೇಧ ಹೇರಬೇಕು ಎಂದು ಇಲ್ಲಿನ ಬಿಜೆಪಿ ರಾಜ್ಯ ಘಟಕ ಮಂಗಳವಾರ ಚುನಾವಣೆ ಆಯೋಗಕ್ಕೆ ಒತ್ತಾಯಿಸಿದೆ.
‘ಇತರ ಪಕ್ಷಗಳ ಮತ್ತು ಅಭ್ಯರ್ಥಿಗಳ ಮೇಲೆ ಕ್ಷುಲ್ಲಕ ಆರೋಪ ಮಾಡುತ್ತಿದ್ದು, ಆ ಮೂಲಕ ಜನರ ದಾರಿತಪ್ಪಿಸುತ್ತಿದ್ದಾರೆ. ಚುನಾವಣಾ ಆಯೋಗ ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಬೇಕು’ ಎಂದು ಬಿಜೆಪಿ ದೆಹಲಿ ಘಟಕದ ಅಧ್ಯಕ್ಷ ಸತೀಶ್ ಉಪಾಧ್ಯಾಯ ತಿಳಿಸಿದ್ದಾರೆ.
ಚುನಾವಣಾ ಆಯೋಗ ಎಚ್ಚರಿಕೆ: ‘ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಲಂಚ ತೆಗೆದುಕೊಳ್ಳಿ, ಆದರೆ ಎಎಪಿಗೆ ಮತ ನೀಡಿ’ ಎಂದಿರುವ ಅರವಿಂದ ಕೇಜ್ರಿವಾಲ್ ಅವರ ಹೇಳಿಕೆಯನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿದ್ದು, ಭವಿಷ್ಯದಲ್ಲಿ ಇಂಥ ಹೇಳಿಕೆಗಳನ್ನು ನೀಡಿದರೆ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಭಾಷಣದಲ್ಲಿ ಒಬಾಮ ಭೇಟಿ ಉಲ್ಲೇಖ: ಟೀಕೆ
ದೆಹಲಿ ಬಿಜೆಪಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿ ಅವರು ತಮ್ಮ ಕೃಷ್ಣಾನಗರ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ವೇಳೆ ಬರಾಕ್ ಒಬಾಮ ಅವರ ಭಾರತ ಭೇಟಿ ಬಗ್ಗೆ ಉಲ್ಲೇಖಿಸಿರುವುದನ್ನು ಆಮ್ ಆದ್ಮಿ ಪಕ್ಷ ಮಂಗಳವಾರ ತೀವ್ರ ಟೀಕೆ ಮಾಡಿದೆ.
ಬೇಡಿ ಅವರು ಕ್ಷೇತ್ರ ಭೇಟಿ ಸಂದರ್ಭದಲ್ಲಿ ‘ಒಬಾಮ ಭೇಟಿಯಿಂದ ಭಾರತದ ಗೌರವ ಹೆಚ್ಚಾಗಿದೆ. ಭಾರತ ಈಗ ವಿಶ್ವದಲ್ಲೇ ನಂ.1 ರಾಷ್ಟ್ರವಾಗಿ ಗುರುತಿಸಿಕೊಂಡಿದೆ’ ಎಂದು ಹೇಳಿದ್ದರು.