ಬೆಂಗಳೂರು: ನಗರ ಜಿಲ್ಲಾಡಳಿತ ಹಾಗೂ ಬಿಎಂಟಿಎಫ್ ಅಧಿಕಾರಿಗಳು ನಗರ ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ಶನಿವಾರ ಜಂಟಿ ಕಾರ್ಯಾಚರಣೆ ನಡೆಸಿ ರೂ. 282 ಕೋಟಿ ಮಾರುಕಟ್ಟೆ ಮೌಲ್ಯದ ರೂ. 46.19 ಎಕರೆ ಜಮೀನಿನ ಒತ್ತುವರಿ ತೆರವು ಮಾಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ವೆಂಕಟಾಚಲಪತಿ, ಬಿಎಂಟಿಎಫ್ ಎಡಿಜಿಪಿ ಸುನೀಲ್ ಕುಮಾರ್, ಸಹಾಯಕ ಆಯುಕ್ತರಾದ ಎಲ್.ಸಿ. ನಾಗರಾಜು, ಮಹೇಶ್ ಬಾಬು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.
ಬೆಂಗಳೂರು ದಕ್ಷಿಣ ತಾಲ್ಲೂಕಿನ ಬೇಗೂರು ಹೋಬಳಿಯ ಹರಳುಕುಂಟೆ ಗ್ರಾಮದ ಸರ್ವೆ ಸಂಖ್ಯೆ 51ರಲ್ಲಿ ಸರ್ಕಾರಿ ಕೆರೆಯ 5 ಎಕರೆ 28 ಗುಂಟೆ ಜಮೀನು ಒತ್ತುವರಿಯಾಗಿತ್ತು. ಇಲ್ಲಿ 1 ಎಕರೆ 28 ಗುಂಟೆ ಜಾಗದಲ್ಲಿ ಮನೆ, ದೇವಸ್ಥಾನ, ಈಜುಕೊಳ ನಿರ್ಮಾಣವಾಗಿತ್ತು.
ವಂದನಾ ಅಪಾರ್ಟ್ಮೆಂಟ್ ಮಾಲೀಕರು ಕೆರೆ ಒತ್ತುವರಿ ಮಾಡಿಕೊಂಡು ಈಜುಕೊಳ, ತಡೆಗೋಡೆ ನಿರ್ಮಿಸಿದ್ದರು. ಪಕ್ಕದಲ್ಲಿ ಸುಮಾರು 15 ಮನೆಗಳು ನಿರ್ಮಾಣಗೊಂಡಿದ್ದವು. ಅಯ್ಯಪ್ಪಸ್ವಾಮಿ ಸೇರಿದಂತೆ ನಾಲ್ಕು ದೇವಸ್ಥಾನಗಳು ತಲೆ ಎತ್ತಿದ್ದವು. ಇವುಗಳ ಒತ್ತುವರಿಯನ್ನು ತೆರವುಗೊಳಿಸಲಾಯಿತು.
‘ನಾಲ್ಕು ಎಕರೆ ಜಾಗದಲ್ಲಿ ಬಿಬಿಎಂಪಿ ಡಂಪಿಂಗ್ ಯಾರ್ಡ್ ಇದೆ. ಕೆರೆ ಜಾಗವಾದ ಕಾರಣ ಇದನ್ನು ಬಿಡಿಎಗೆ ಹಸ್ತಾಂತರಿಸಲಾಗುವುದು. ದೇವಸ್ಥಾನಗಳನ್ನು ಮುಜರಾಯಿ ಇಲಾಖೆ ಸುಪರ್ದಿಗೆ ಒಪ್ಪಿಸಲಾಗುವುದು’ ಎಂದು ತಹಶೀಲ್ದಾರ್ ಬಿ.ಆರ್.ದಯಾನಂದ್ ತಿಳಿಸಿದರು.
ಮೈಲಸಂದ್ರ ಗ್ರಾಮದ ಸರ್ವೆ ಸಂಖ್ಯೆ 99ರಲ್ಲಿ 20 ಗುಂಟೆ ಜಾಗದಲ್ಲಿ ಸರ್ಕಾರಿ ಕೆರೆಯ ಒತ್ತುವರಿಯನ್ನು ತೆರವು ಮಾಡಲಾಯಿತು.
ಹೊಮ್ಮದೇವನಹಳ್ಳಿ ಗ್ರಾಮದಲ್ಲಿ ಸುಮಾರು 200 ಎಕರೆ ಜಾಗದಲ್ಲಿ ರಾಜಕಾರಣಿಯೊಬ್ಬರು ವಸತಿ ಬಡಾವಣೆ ನಿರ್ಮಿಸುತ್ತಿದ್ದಾರೆ.
ಗ್ರಾಮದ ಸರ್ವೆ ಸಂಖ್ಯೆ 57ರಲ್ಲಿ 19 ಎಕರೆ ಸರ್ಕಾರಿ ಗೋಮಾಳ ಜಾಗ ಇದೆ. ಈ ಜಾಗವನ್ನು ಅವರು ಒತ್ತುವರಿ ಮಾಡಿಕೊಂಡು ಸುಮಾರು 800 ನಿವೇಶನಗಳನ್ನು ಸಿದ್ಧಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅವರಿಗೆ ನೋಟಿಸ್ ನೀಡಿತ್ತು. ಅದಕ್ಕೆ ಅವರು ಉತ್ತರ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಶನಿವಾರ ಬೆಳಿಗ್ಗೆ ಕಾರ್ಯಾಚರಣೆ ಆರಂಭಿಸಲಾಯಿತು. ಈ ವೇಳೆ ಕೆಲವರು ಬಂದು ಈ ಜಾಗ ತಮಗೆ ಸೇರಿದ್ದು ಎಂದು ವಾದಿಸಿದರು. ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು.
‘ಜಾಗದ ಬಗ್ಗೆ ದಾಖಲೆ ತೋರಿಸಿ’ ಎಂದು ಅಧಿಕಾರಿಗಳು ವಿನಂತಿಸಿದರು. ಆಗ ಅವರು, ‘ದಾಖಲೆಗಳನ್ನು ತೋರಿಸಲು ಸಾಧ್ಯವಿಲ್ಲ’ ಎಂದು ಉತ್ತರಿಸಿದರು. ಆಗ ಸ್ಥಳದಲ್ಲಿದ್ದ ಅಧಿಕಾರಿಗಳು ಒತ್ತುವರಿಗೆ ಅಡ್ಡಿ ಪಡಿಸುತ್ತಿದ್ದವರನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಬಿಎಂಟಿಎಫ್ ನೆರವಿನಿಂದ ಜಿಲ್ಲಾಡಳಿತದ ಅಧಿಕಾರಿಗಳು ಕಾರ್ಯಾಚರಣೆ ಮುಂದುವರಿಸಿದರು.
‘ಡೆವಲಪರ್ ಒಬ್ಬರು 19 ಎಕರೆ ಒತ್ತುವರಿ ಮಾಡಿಕೊಂಡು ವಸತಿ ಬಡಾವಣೆ ನಿರ್ಮಿಸಿದ್ದರು. ಅಲ್ಲದೆ ನಿವೇಶನಗಳ ಬಗ್ಗೆ ಮಾಧ್ಯಮಗಳಲ್ಲಿ ಜಾಹೀರಾತು ನೀಡಿದ್ದರು. ಹೀಗಾಗಿ ಡೆವಲಪರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ದಕ್ಷಿಣ ತಾಲ್ಲೂಕಿನಲ್ಲಿ 241 ಕೋಟಿ ಮೌಲ್ಯದ ಒತ್ತುವರಿ ತೆರವು ಮಾಡಲಾಗಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ವೆಂಕಟಾಚಲಪತಿ ತಿಳಿಸಿದರು.
ಆನೇಕಲ್ ಕಸಬಾ ಹೋಬಳಿಯ ಅಗಸತಿಮ್ಮನಹಳ್ಳಿ ಗ್ರಾಮದ ಸರ್ವೆ ನಂ. 16 ರಲ್ಲಿ 8.02 ಎಕರೆ ಸರ್ಕಾರಿ ಫಡಾ ಹಾಗು ಸರ್ಜಾಪುರ ಹೋಬಳಿ ಯಮರೆ ಗ್ರಾಮದ ಸರ್ವೆ ನಂಬರ್ ಕಾಣದ ಹದ್ದಿಗೆಹಳ್ಳದ 2.35 ಎಕರೆಯನ್ನು ಕಾನ್ಫಿಡೆಂಟ್ ಹಾಗೂ ಕ್ರಿಸ್ಟಲ್ ಗ್ರೂಪ್ನವರು ಒತ್ತುವರಿ ಮಾಡಿದ್ದರು. ಈ ಒತ್ತುವರಿಗಳನ್ನು ತೆರವು ಮಾಡಲಾಯಿತು.
ಯಲಹಂಕ ತಾಲ್ಲೂಕಿನ ಜಾಲ ಹೋಬಳಿಯ ಚಾಗಲಹಟ್ಟಿ ಗ್ರಾಮದ ಸರ್ವೆ ನಂ. 83 ರಲ್ಲಿ 10.14 ಎಕರೆ ಒತ್ತುವರಿ ತೆರವುಗೊಳಿಸಲಾಗಿದೆ.