ಕನ್ನಡ ವಾರ್ತೆಗಳು

ಪುತ್ತೂರಿನ ಕರಾಯ ಕಲ್ಲು ತೂರಾಟ ಪ್ರಕರಣ – ಮೂರು ಸ್ವಯಂಪ್ರೇರಿತ ಪ್ರಕರಣ ದಾಖಲು : ಎಸ್.ಪಿ

Pinterest LinkedIn Tumblr

SP_Sharannappa_Dk

ಮಂಗಳೂರು: ಪುತ್ತೂರಿನಲ್ಲಿ ಶುಕ್ರವಾರ ನಡೆದ ಹಿಂದೂ ಹೃದಯ ಸಂಘಮ ಕಾರ್ಯಕ್ರಮದ ಬಳಿಕ ಉಪ್ಪಿನಂಗಡಿ ಸಮೀಪದ ಕರಾಯದಲ್ಲಿ ನಡೆದ ಅಹಿತಕರ ಘಟನೆಗೆ ಸಂಬಂಧಿಸಿದಂತೆ ಮೂರು ಸ್ವಯಂಪ್ರೇರಿತ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ.

ಜಿಲ್ಲಾ ಎಸ್‌ಪಿ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾಯ ಮಸೀದಿ ಸಮೀಪ ಶುಕ್ರವಾರ ರಾತ್ರಿ 7.30ರ ಸುಮಾರಿಗೆ ಕಲ್ಲು ತೂರಾಟ ನಡೆದಿದೆ. ಆ ಪ್ರದೇಶದಲ್ಲಿ ಕತ್ತಲು ಇದ್ದದ್ದರಿಂದ ಯಾರು ಕಲ್ಲು ಹೊಡೆದಿದ್ದಾರೆ ಎನ್ನುವ ನಿಖರ ಮಾಹಿತಿ ಲಭ್ಯವಾಗಿಲ್ಲ. ಘಟನೆ ಬಗ್ಗೆ ಇದುವರೆಗೂ ಯಾರೂ ದೂರು ನೀಡಿಲ್ಲ. ಆದರೂ ಮೂರು ಪ್ರಕರಣದಲ್ಲಿ ನಾವೇ ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿಕೊಂಡಿದ್ದೇವೆ ಎಂದು ಅವರು ತಿಳಿಸಿದರು.

ಕಲ್ಲು ತೂರಾಟದಲ್ಲಿ 11 ಮಂದಿ ಮುಸ್ಲಿಮರು, 8 ಮಂದಿ ಹಿಂದೂಗಳು ಹಾಗೂ ಐವರು ಪೊಲೀಸರು ಗಾಯಗೊಂಡಿದ್ದಾರೆ. ಗಾಯಗೊಂಡವರು ನಾನಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ಅಲ್ಲಿಗೆ ತೆರಳಿ ಅವರ ಹೇಳಿಕೆ ಪಡೆದುಕೊಳ್ಳುತ್ತಿದ್ದಾರೆ. ಇನ್ನಷ್ಟೇ ದೂರು- ಪ್ರತಿದೂರು ದಾಖಲಾಗಬೇಕಿದೆ ಎಂದು ಅವರು ತಿಳಿಸಿದರು.

ಸಮಾಜೋತ್ಸವದಿಂದ ತೆರಳುತ್ತಿದ್ದ ಒಂದು ಪಿಕಪ್ ವಾಹನದಲ್ಲಿ ಕಲ್ಲುಗಳಿದ್ದ ಕಾರಣಕ್ಕೆ ಅದರಲ್ಲಿದ್ದ 24 ಮಂದಿ ವಿರುದ್ಧ ಕಲ್ಲು ತೂರಾಟಕ್ಕೆ ಹುನ್ನಾರ ನಡೆಸಿದ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಿ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಇನ್ನುಳಿದ ಆರೋಪಿಗಳನ್ನು ಬಂಧಿಸುವ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಎಸ್‌ಪಿ ತಿಳಿಸಿದರು.

ಭದ್ರತೆ ಮುಂದುವರಿಕೆ: ಕರಾಯದಲ್ಲಿ ಅಹಿತಕರ ಘಟನೆ ನಡೆದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಸೂಕ್ಷ್ಮ ಪ್ರದೇಶದಲ್ಲಿ ಕೈಗೊಂಡಿರುವ ಭದ್ರತೆಯನ್ನು ಇನ್ನೂ ಕೆಲವು ದಿನಗಳವರೆಗೆ ಮುಂದುವರಿಸಲಾಗುವುದು. ಶಾಂತಿ ಕಾಪಾಡುವ ಬಗ್ಗೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ. ಕರಾಯ ಪರಿಸರದಲ್ಲಿ ನಾನು ಹಾಗೂ ಇತರ ಹಿರಿಯ ಪೊಲೀಸ್ ಅಧಿಕಾರಿಗಳು ಹಲವು ಪ್ರದೇಶಗಳಿಗೆ ಭೇಟಿ ನೀಡಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ಕರಾಯದಲ್ಲಿ ಎರಡೂ ಕಡೆಯ ಮುಖಂಡರನ್ನು ಕರೆಸಿ ಅವರನ್ನು ಸಮಧಾನಪಡಿಸಿ ಪರಿಸ್ಥಿತಿಯನ್ನು ತಿಳಿಸಿಗೊಳಿಸಿದ್ದೇವೆ. ನಮಗೆ ಶಾಂತಿ ಬೇಕು ಎಂದು ಎರಡೂ ಕಡೆಯವರು ಒಪ್ಪಿಕೊಂಡು ಪೊಲೀಸರೊಂದಿಗೆ ಸಹಕರಿಸುತ್ತಿದ್ದಾರೆ. ಆದರೆ ಕೆಲವು ಮಂದಿ ಅನಗತ್ಯ ವದಂತಿ ಹಬ್ಬಿಸುತ್ತಿರುವುದು ಕಂಡು ಬಂದಿದೆ. ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಯಾರೂ ವದಂತಿಗೆ ಕಿವಿಕೊಡಬೇಡಿ ಎಂದು ಎಸ್‌ಪಿ ತಿಳಿಸಿದರು.

ಫಲ ನೀಡಿದ ಎಸ್‌ಪಿ ಸೂತ್ರ: ಪುತ್ತೂರಿನಲ್ಲಿ ಆಯೋಜಿಸಲಾಗಿದ್ದ ಹಿಂದೂ ಹೃದಯ ಸಂಘಮ ಕಾರ್ಯಕ್ರಮದ ಬಳಿಕ ಗಲಭೆ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂಬ ಗುಪ್ತಚರ ಮಾಹಿತಿ ಹಿನ್ನೆಲೆಯಲ್ಲಿ ಸಮಾವೇಶಕ್ಕೆ ಅಭೂತಪೂರ್ವ ಭದ್ರತೆ ಏರ್ಪಡಿಸಲಾಗಿತ್ತು.

ಒಂದು ತಿಂಗಳಿಂದ ಎಸ್.ಪಿ. ಡಾ.ಎಸ್.ಡಿ.ಶರಣಪ್ಪ ನೇತೃತ್ವದಲ್ಲಿ ಹಲವು ಸುತ್ತಿನ ಸಭೆಗಳನ್ನು ನಡೆಸಿ, ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಎರಡೂ ಕಡೆಗಳ ಮುಖಂಡರಿಗೆ ಮನವಿ ಮಾಡಲಾಗಿತ್ತು. ಅಲ್ಲದೆ ಕಾರ್ಯಕ್ರಮ ನಡೆಯುವ ದಿನ ಬೆಳಗ್ಗಿನಿಂದ ರಾತ್ರಿ ವರೆಗೆ ವ್ಯವಸ್ಥಿತ ರೀತಿಯಲ್ಲಿ ಬಂದೋಬಸ್ತ್ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

ಭದ್ರತೆಗಾಗಿ 1,500 ಮಂದಿ ಪೊಲೀಸರನ್ನು ಹೊರಗಿನಿಂದ ಕರೆಸಲಾಗಿತ್ತು. ಇವರ ಜತೆಯಲ್ಲಿ 12 ಕೆಎಸ್‌ಆರ್‌ಪಿ ಪಡೆ, 10 ಡಿಎಆರ್ ಪಡೆ, 1 ರ‌್ಯಾಪಿಡ್ ಆ್ಯಕ್ಷನ್ ಫೋರ್ಸ್, 5 ಚೆಕ್ ಟೀಮ್, 1 ಬಾಂಬ್ ಪತ್ತೆ ದಳ ಹಾಗೂ ಒಂದು ಸಾವಿರ ಸಿವಿಲ್ ಪೊಲೀಸರನ್ನು ನಿಯೋಜಿಸಲಾಗಿತ್ತು.

ದಕ್ಷಿಣ ಕನ್ನಡ ಜಿಲ್ಲೆಯ 183 ಪ್ರದೇಶಗಳನ್ನು ಸೂಕ್ಷ್ಮ ಪ್ರದೇಶ ಎಂದು ಗುರುತಿಸಿ ಪ್ರತಿ ಸೂಕ್ಷ್ಮ ಪ್ರದೇಶದಲ್ಲಿ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು. 31 ಸೆಕ್ಟರ್ ಮೊಬೈಲ್‌ಗಳನ್ನು ತೆರೆಯಲಾಗಿತ್ತು. ಇದರಿಂದ ಎಲ್ಲಿ ಅಹಿತಕರ ಘಟನೆ ನಡೆದರೂ 10ರಿಂದ 15 ನಿಮಿಷದ ಅವಧಿ ಒಳಗೆ ಅಲ್ಲಿಗೆ ತಲುಪುವಂತೆ ಎಸ್‌ಪಿ ವ್ಯವಸ್ಥೆ ಮಾಡಿದ್ದರು.

ಇದೇ ವ್ಯವಸ್ಥಿತ ಭದ್ರತಾ ಸೂತ್ರದಿಂದ ಶುಕ್ರವಾರ ರಾತ್ರಿ ಘಟನೆ ನಡೆದ ತಕ್ಷಣಕ್ಕೆ ಕರಾಯಕ್ಕೆ ಪೊಲೀಸ್ ಪಡೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿತ್ತು. ಎಸ್‌ಪಿ ಕೈಗೊಂಡಿರುವ ಭದ್ರತಾ ಸೂತ್ರ ಸಾರ್ವತ್ರಿಕ ಪ್ರಶಂಸೆಗೆ ಕಾರಣವಾಗಿದೆ.

Write A Comment