ಬೆಂಗಳೂರು: ನಗರ ಪೊಲೀಸರು ಬಂಧಿಸಿರುವ ಇಂಡಿಯನ್ ಮುಜಾಹಿದಿನ್ (ಐ.ಎಂ) ಭಯೋತ್ಪಾದನಾ ಸಂಘಟನೆಯ ಶಂಕಿತ ಉಗ್ರರಿಗೆ, ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ವಿದೇಶದಿಂದ ಹವಾಲಾ ಮೂಲಕ ಹಣ ಬರುತ್ತಿದ್ದ ಸಂಗತಿ ಪೊಲೀಸ್ ತನಿಖೆಯಿಂದ ಬಯಲಾಗಿದೆ.
‘ಬಂಧಿತ ಸೈಯದ್ ಇಸ್ಮಾಯಿಲ್ ಅಫಕ್, ಸದ್ದಾಂ ಹುಸೇನ್, ಅಬ್ದುರ್ ಸಬೂರ್ ಹಾಗೂ ರಿಯಾಜ್ ಅಹಮದ್ ಸಯ್ಯದಿಗೆ ಬೇರೆ ಬೇರೆ ರಾಷ್ಟ್ರಗಳಿಂದ ಹವಾಲಾ ಹಣ ಬರುತ್ತಿತ್ತು’ ಎಂದು ನಗರ ಪೊಲೀಸ್ ಕಮಿಷನರ್ ಎಂ.ಎನ್.ರೆಡ್ಡಿ ತಿಳಿಸಿದ್ದಾರೆ.
ದೇಶದಿಂದ ಪರಾರಿಯಾಗಿರುವ ವಿವಿಧ ಭಯೋತ್ಪಾದನಾ ಸಂಘಟನೆಗಳ ಸದಸ್ಯರು ವಿದೇಶದಲ್ಲಿ ನೆಲೆಸಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆಗಳು ಅವರಿಗಾಗಿ ಹುಡುಕಾಟ ನಡೆಸುತ್ತಿವೆ. ಬಂಧಿತ ಆರೋಪಿಗಳು ಆ ಉಗ್ರರನ್ನು ಹಲವು ಬಾರಿ ಭೇಟಿಯಾಗಿರುವುದು ತನಿಖೆಯಿಂದ ಗೊತ್ತಾಗಿದೆ ಎಂದಿದ್ದಾರೆ.
ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸುವಂತೆ ಈ ನಾಲ್ವರಿಗೆ ವಿದೇಶದಲ್ಲಿನ ಉಗ್ರರು ಸೂಚನೆ ಕೊಡುತ್ತಿದ್ದರು. ಜತೆಗೆ ಆ ಚಟುವಟಿಕೆಗಳಿಗೆ ಹವಾಲಾ ಹಣ ಹೊಂದಿಸಿ ಕೊಡುತ್ತಿದ್ದರು. ದೇಶದಲ್ಲಿ 2010ರ ನಂತರ ನಡೆದ ಬಾಂಬ್ ಸ್ಫೋಟಗಳಿಗೆ ಸಂಬಂಧಪಟ್ಟಂತೆ ಸ್ಫೋಟಕ ವಸ್ತುಗಳ ತಯಾರಿಕೆ, ಶೇಖರಣೆ, ಸರಬರಾಜು ಹಾಗೂ ಹಸ್ತಾಂತರದಲ್ಲಿ ಬಂಧಿತರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಪೊಲೀಸ್ ಕಸ್ಟಡಿ: ಸೈಯದ್, ಸದ್ದಾಂ ಮತ್ತು ಅಬ್ದುರ್ ವಿಚಾರಣೆ ವೇಳೆ ನೀಡಿದ ಮಾಹಿತಿ ಆಧರಿಸಿ ರಿಯಾಜ್ನನ್ನು ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು. ಸಿಬ್ಬಂದಿ, ರಿಯಾಜ್ನನ್ನು ಹಿಂಬಾಲಿಸುತ್ತಿದ್ದ ಸಂಗತಿ ಆತನಿಗೆ ಗೊತ್ತಿರಲಿಲ್ಲ.
ಹೀಗಾಗಿ ಆತ ದುಬೈಗೆ ಪರಾರಿಯಾಗಲು ಮುಂದಾಗಿದ್ದ ಎಂದು ಹೇಳುವುದು ಕಷ್ಟ. ಆತನ ಬಳಿ ಯಾವುದೇ ಸ್ಫೋಟಕ ವಸ್ತುಗಳು ಸಿಕ್ಕಿಲ್ಲ. ಹೆಚ್ಚಿನ ತನಿಖೆಗಾಗಿ ಆತನನ್ನು ಜ.21ರವರೆಗೆ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಸ್ಫೋಟಕಗಳನ್ನಿಟ್ಟು ಬಂಧಿಸುವ ಚಾಳಿ ನಮ್ಮದಲ್ಲ: ರೆಡ್ಡಿ
ಬಂಧಿತರ ಪೋಷಕರು ವಿನಾಕಾರಣ ಕೆಲ ಆರೋಪಗಳನ್ನು ಮಾಡುತ್ತಿದ್ದಾರೆ. ಮಕ್ಕಳನ್ನು ಸಮರ್ಥಿಸಿಕೊಳ್ಳುವ ಉದ್ದೇಶಕ್ಕಾಗಿ ಪೊಲೀಸರನ್ನು ದೂರುತ್ತಿದ್ದಾರೆ. ಅವರ ನೋವು ನಮಗೆ ಅರ್ಥವಾಗುತ್ತದೆ. ವಿದೇಶದಿಂದ ಕರೆಗಳು ಬರುತ್ತಿದ್ದವು ಎಂಬ ಕಾರಣಕ್ಕೆ ಮಾತ್ರ ಈ ನಾಲ್ವರನ್ನು ಬಂಧಿಸಿಲ್ಲ. ಪೊಲೀಸರು ಮನೆಯಲ್ಲಿ ಸ್ಫೋಟಕ ವಸ್ತುಗಳನ್ನಿಟ್ಟು ಸುಳ್ಳು ಆರೋಪದಡಿ ಬಂಧಿಸುವ ಪ್ರವೃತ್ತಿ ಬೆಳೆಸಿಕೊಂಡಿಲ್ಲ. ಖಚಿತ ಮಾಹಿತಿ, ಸಾಕ್ಷ್ಯಾಧಾರ ಇಟ್ಟುಕೊಂಡೇ ಬಂಧಿಸಲಾಗಿದೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಎಂ.ಎನ್.ರೆಡ್ಡಿ ಹೇಳಿದರು.