ಕರ್ನಾಟಕ

81ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಮುನ್ನಾದಿನ ಅಧ್ಯಕ್ಷರ ಮೆರವಣಿಗೆ: ವೇದಿಕೆ, ಶಾಮಿಯಾನಕ್ಕೆ ರೂ.1.70 ಕೋಟಿ

Pinterest LinkedIn Tumblr

pvec28dec14sahitya sammelana logo

ಹಾಸನ: ಶ್ರವಣಬೆಳಗೊಳದಲ್ಲಿ ನಡೆಯುವ 81ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರ ಮೆರ­ವ­ಣಿಗೆಯು ಉದ್ಘಾಟನೆಯ ಮುನ್ನಾ­ದಿನವೇ ನಡೆಯಲಿದೆ.

ಸಮ್ಮೇಳನದ ಉದ್ಘಾಟನಾ ದಿನದ ಬದಲು ಅದರ ಹಿಂದಿನ ದಿನ (ಜ.31ರಂದು) ಸಂಜೆ ನಡೆಸಲು ಸ್ವಾಗತ ಸಮಿತಿ ನಿರ್ಧರಿಸಿದೆ.
ಉದ್ಘಾಟನೆ ದಿನವೇ ಅಧ್ಯಕ್ಷರ ಮೆರವಣಿಗೆ ಆಯೋಜಿಸಿದರೆ ಮಧ್ಯಾ­ಹ್ನ­­­ದವರೆಗೆ ಸಮಯ ವ್ಯರ್ಥ­­ವಾಗುತ್ತದೆ ಮತ್ತು ಎಲ್ಲ ಗೋಷ್ಠಿ­ಗಳೂ ವಿಳಂಬ­ವಾ­ಗು­ತ್ತವೆ ಎಂಬ ಕಾರಣಕ್ಕೆ ಹಿಂದಿನ ದಿನವೇ ಸಂಜೆ ಅಧ್ಯ­ಕ್ಷರ ಮೆರವಣಿಗೆ ನಡೆಸಲು ತೀರ್ಮಾ­ನಿ­ಸಿದೆ. ಭಾನು­­ವಾರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಅಧ್ಯಕ್ಷತೆಯಲ್ಲಿ ನಡೆದ ಸ್ವಾಗತ ಸಮಿತಿ ಸಭೆಯಲ್ಲಿ ಈ ಮಾಹಿತಿ ನೀಡಲಾಯಿತು.

400 ಪುಸ್ತಕ ಮಳಿಗೆ: ಸಮ್ಮೇಳನದಲ್ಲಿ ಪುಸ್ತಕ ಮಳಿಗೆಗಾಗಿ 400ಕ್ಕೂ ಹೆಚ್ಚು ಪ್ರಕಾಶಕರಿಂದ ಬೇಡಿಕೆ ಬಂದಿವೆ. ಇನ್ನೂ ಕೆಲವು ಮನವಿಗಳನ್ನು ನಿರೀ­ಕ್ಷಿಸ­ಲಾಗಿದೆ. ಮೂರು ದಿನಗಳ ಅವಧಿಯಲ್ಲಿ ಸಾಂಸ್ಕೃತಿಕ ಕಾರ್ಯ­ಕ್ರಮ ನೀಡಲು ಅವ­ಕಾಶ ಕೋರಿ 600ಕ್ಕೂ ಹೆಚ್ಚು ಕಲಾ­ವಿ­ದರು, ಸಂಘ­ಟ­ನೆ­ಗಳವರು ಮನವಿ ಸಲ್ಲಿ­ಸಿದ್ದಾರೆ. ಶೀಘ್ರದಲ್ಲೇ ಕಲಾ­ವಿ­ದರನ್ನು ಆಯ್ಕೆ ಮಾಡಲಾ­ಗುವುದು ಎಂದು ಸಾಂಸ್ಕೃತಿಕ ಸಮಿತಿ­ ತಿಳಿಸಿದೆ.

ವೇದಿಕೆ ಶಾಮಿಯಾನಕ್ಕೆ ರೂ.1.70 ಕೋಟಿ: ಸಮ್ಮೇಳನ­ಕ್ಕಾಗಿ ಶ್ರವಣ­ಬೆಳಗೊಳ ಮಠದ ಸಮೀಪ­ದಲ್ಲಿ 24 ಎಕರೆ ವಿಶಾಲ ಜಾಗ­ವನ್ನು ಸಮತಟ್ಟು ಮಾಡುವುದು, ಸಭಾಂಗ­ಣಕ್ಕೆ ಶಾಮಿ­ಯಾನ ಹಾಕುವುದು ಹಾಗೂ ವೇದಿಕೆ ನಿರ್ಮಾಣಕ್ಕೆ ರೂ.1.70 ಕೋಟಿ  ವೆಚ್ಚ ಆಗಲಿದೆ. ಗುತ್ತಿಗೆ­ದಾರರು ರೂ.2.28 ಕೋಟಿ ಕೇಳಿ­ದ್ದರು. ಅವ­ರೊಡನೆ ಮಾತುಕತೆ ನಡೆಸಿ ರೂ. 1.70 ಕೋಟಿಗೆ ಒಪ್ಪಿಸ­ಲಾಗಿದೆ ಎಂದು ಶ್ರವ­ಣ­­­ಬೆಳಗೊಳ ಶಾಸಕ ಸಿ.ಎನ್‌. ಬಾಲಕೃಷ್ಣ ತಿಳಿಸಿದರು.

ಐದು ಭೋಜನಾಲಯಗಳು: ಸಾಹಿತ್ಯ ಸಮ್ಮೇಳನಕ್ಕೆ ಬರುವವರ ಭೋಜನ ಹಾಗೂ ಬರುವ ಅತಿಥಿ­ಗಳಲ್ಲಿ ಅರ್ಧದಷ್ಟು ಜನರ ವಸತಿ ವ್ಯವಸ್ಥೆಯನ್ನು ಮಠದಲ್ಲಿ ಮಾಡಲು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಒಪ್ಪಿಕೊಂಡಿದ್ದಾರೆ. ಅದಕ್ಕೆ ಅಗತ್ಯವಾದ ಕೆಲವು ಸೌಲಭ್ಯ­ಗಳನ್ನು ನೀಡಬೇಕು ಎಂದು ಜೈನ ಸಂಘದ ಅಧ್ಯಕ್ಷ ಜಿತೇಂದ್ರಕುಮಾರ್‌ ಕೋರಿದರು.

‘ಭೋಜನ ವ್ಯವಸ್ಥೆಗಾಗಿಯೇ ಮಠ­ದಲ್ಲಿ ನಾಲ್ಕೈದು ಸಮಿತಿಗಳನ್ನು ಮಾಡಲಾಗಿದ್ದು, ಈಗಾ­ಗಲೇ ಕೆಲವು ಸಭೆಗಳನ್ನು ನಡೆಸಿದ್ದೇವೆ. ಊಟ– ತಿಂಡಿ­ಗಳ ಮೆನು ಸಹ ಸಿದ್ಧಪಡಿಸಿದ್ದೇವೆ. ಐದು ಕಡೆ ಅಡುಗೆ ಮನೆ ಮತ್ತು ಭೋಜನಾಲಯ ಮಾಡ­ಲಾ­ಗುತ್ತಿದ್ದು, ಅದರ ಒಂದರಲ್ಲಿ ಉತ್ತರ ಕರ್ನಾಟಕದ ರೊಟ್ಟಿ, ಜುನಕಾ, ಎಣ್ಣೆಗಾಯಿ, ಹಾಗೂ ಚಟ್ನಿಪುಡಿಗಳ ವ್ಯವಸ್ಥೆ ಮಾಡಲಾ­ಗುವುದು.

ಬರುವ ಅತಿಥಿಗಳಿಗೆ ಬೆಳಿಗ್ಗೆ ತರಕಾರಿ ಉಪ್ಪಿಟ್ಟು, ಕೇಸರಿ­ಬಾತ್‌, ಪೊಂಗಲ್, ಖಾರಾ ಬಾತ್‌, ಇಡ್ಲಿ, ಒಗ್ಗ­ರಣೆ ಅವಲಕ್ಕಿ (ಯಾವುದಾ­ದರೊಂದು ಅಥವಾ ಎರಡೂ), ಮಧ್ಯಾಹ್ನಕ್ಕೆ ಪೂರಿ ಸಾಗು, ಪುಳಿ­ಯೋ­ಗರೆ, ಬಿಸಿಬೇಳೆ ಬಾತ್‌, ಅನ್ನ ಸಾರು, ಮೊಸರನ್ನ, ಬೂಂದಿ, ಡ್ರೈ ಜಾಮೂನ್‌… ಹೀಗೆ ಪ್ರತಿ ಊಟ/ತಿಂಡಿಯ ಜತೆಗೂ ಒಂದು ಸ್ವೀಟ್‌ ಇರು­ವಂತೆ ನೋಡಿಕೊಳ್ಳ­ಲಾಗಿದೆ. ಮೂರು ದಿನಗಳಲ್ಲಿ ಯಾವ ತಿಂಡಿಯೂ ಪುನರಾವರ್ತನೆ ಆಗದಂತೆ ನೀಡ­ಲಾಗುವುದು. ಸಮಿತಿ­ಯವರು ಯಾವುದೇ ಬದ­ಲಾ­ವಣೆ ಸೂಚಿಸಿದರೆ ಮಾಡಿಕೊಳ್ಳಲು ಸಿದ್ಧ’ ಎಂದರು.

ಹಾಸನದ ವಿಶೇಷ­ವಾಗಿ­ರುವ ರಾಗಿ ಮುದ್ದೆ ಹಾಗೂ ಅವರೆಕಾಳಿನ ಸಾರನ್ನೂ ಮಾಡಿಸಬೇಕು ಎಂದು ಕೆಲವರು ಸಲಹೆ ನೀಡಿದರು. ಸಮ್ಮೇಳನಕ್ಕೆ ಬೇಕಾದ ತರಕಾರಿಯನ್ನು ಉಚಿತವಾಗಿ ಕೊಡುವು­ದಾಗಿ ಸಭೆಯಲ್ಲಿದ್ದ ರೈತರು ತಿಳಿಸಿದರು.

ಸಹಾಯವಾಣಿ, ಮೊಬೈಲ್‌ ಆ್ಯಪ್‌: ಸಮ್ಮೇಳನ­ಕ್ಕಾಗಿ ಮಾಹಿತಿ ತಂತ್ರಜ್ಞಾನ ಸಮಿತಿಯನ್ನೂ ರಚಿಸ­ಲಾ­ಗಿದ್ದು, ಈ ಸಮಿತಿ ಸಮ್ಮೇಳನದ ಸಮಗ್ರ ಮಾಹಿತಿ ನೀಡುವ ಅಂತರ್ಜಾಲ ತಾಣ ಆರಂಭಿಸಲಿದೆ.

ದಸರಾ ಮಾದರಿಯಲ್ಲಿ ಒಂದು ಮೊಬೈಲ್‌ ಆ್ಯಪ್‌ ಅನ್ನೂ ಬಿಡುಗಡೆ ಮಾಡಿ, ಮೊಬೈಲ್‌ನಲ್ಲೇ ಸಮಗ್ರ ಮಾಹಿತಿ ನೀಡುವ ವ್ಯವಸ್ಥೆಯೂ ಜಾರಿ­ಯಾ­ಗಲಿದೆ. ಸಮ್ಮೇಳನ ನಡೆಯುವ ಸ್ಥಳದಲ್ಲೇ ಒಂದು ಸಹಾಯವಾಣಿ ತೆರೆದು ಆ ಮೂಲಕವೂ ಜನರಿಗೆ ಮಾಹಿತಿ ನೀಡುವ ವ್ಯವಸ್ಥೆ ಮಾಡ­ಲಾಗು­ವುದು. ಒಂದೆ­ರಡು ದಿನ­ಗಳಲ್ಲೇ ಅಂತರ್ಜಾಲ ತಾಣ ಹಾಗೂ ಟ್ವಿಟರ್‌ ಖಾತೆಯನ್ನೂ ತೆರೆಯಲಾಗುತ್ತದೆ.

ಸಾಹಿತ್ಯ ಸಮ್ಮೇಳನದ ಕ್ಷಣ ಕ್ಷಣದ ಮಾಹಿತಿ ನೀಡಲು ಈಗಾಗಲೇ ಫೇಸ್‌ಬುಕ್‌ ಪುಟ ತೆರೆ­ಯಲಾ­ಗಿದೆ. ಚೇತನಾ ತೀರ್ಥಹಳ್ಳಿ ಹಾಗೂ ಅರಕಲ­ಗೂಡು ಜಯಕುಮಾರ್‌ ಇದನ್ನು ಅಪ್‌­ಡೇಟ್‌ ಮಾಡು­­ತ್ತಿ­ದ್ದಾರೆ. ಈಗಾಗಲೇ 500ಕ್ಕೂ ಹೆಚ್ಚು ಮಂದಿ ಈ ಖಾತೆ­ಯಿಂದ ಮಾಹಿತಿ ಪಡೆಯು­ತ್ತಿ­ದ್ದಾರೆ. ಆಸಕ್ತರು ‘ಸಾಹಿತ್ಯ ಸಮ್ಮೇಳನ ವಿಶೇಷ’ ಎಂದು ಕನ್ನಡದಲ್ಲೇ ಟೈಪ್‌ ಮಾಡಿ ಈ ಖಾತೆಗೆ ಹೋಗ­ಬಹುದು.

Write A Comment