ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಅಧ್ಯಕ್ಷರ ಹುದ್ದೆಗೆ ಶಿಫಾರಸುಗೊಂಡಿರುವ ವಿ.ಆರ್.ಸುದರ್ಶನ್ ಮತ್ತು ಸದಸ್ಯ ಹುದ್ದೆಗೆ ಶಿಫಾರಸು ಮಾಡಲಾಗಿರುವ ಕೆ.ಎಸ್.ಮೃತ್ಯುಂಜಯ ವಿರುದ್ಧ ಲೋಕಾಯುಕ್ತದಲ್ಲಿ ವಿಚಾರಣೆ ಬಾಕಿ ಇದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಡಾ.ವೈ.ಭಾಸ್ಕರ್ ರಾವ್ ತಿಳಿಸಿದ್ದಾರೆ.
ಕೆಪಿಎಸ್ಸಿ ಅಧ್ಯಕ್ಷರು ಮತ್ತು ಏಳು ಸದಸ್ಯರ ನೇಮಕದ ಸಂಬಂಧ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಡಿ. 24ರಂದು ಸಲ್ಲಿಸಿರುವ ಪ್ರಸ್ತಾವಕ್ಕೆ ರಾಜ್ಯಪಾಲ ವಜುಭಾಯ್ ವಾಲಾ ಇನ್ನೂ ಒಪ್ಪಿಗೆ ನೀಡಿಲ್ಲ. ಶಿಫಾರಸು ಪಟ್ಟಿ ಈಗ ಪರಿಶೀಲನೆಗಾಗಿ ಲೋಕಾಯುಕ್ತರ ಮುಂದಿದೆ.
ಈ ಮಧ್ಯೆ ಗುರುವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಲೋಕಾಯುಕ್ತರು, ‘ಸುದರ್ಶನ್ ಅವರು ಕೋಲಾರ ಜಿಲ್ಲೆ ವೇಮಗಲ್ ಗ್ರಾಮದ ಸರ್ವೆ ನಂಬರ್ 214/1ರಲ್ಲಿ ಹತ್ತು ಗುಂಟೆ ಸರ್ಕಾರಿ ಜಮೀನು ಒತ್ತುವರಿ ಮಾಡಿದ್ದಾರೆ ಎಂದು ಲೋಕೇಶ್ ಎಂಬುವರು ದೂರು ಸಲ್ಲಿಸಿದ್ದರು. ಈ ಬಗ್ಗೆ ಸುದರ್ಶನ್ ಪ್ರತಿಕ್ರಿಯೆ ಸಲ್ಲಿಸಿದ್ದಾರೆ. ಅದನ್ನು ಪರಿಶೀಲಿಸಲಾಗುತ್ತಿದೆ. ಪ್ರಕರಣದ ಸಂಬಂಧ ಕೋಲಾರ ಜಿಲ್ಲಾಧಿಕಾರಿ, ತಹಶೀಲ್ದಾರ್ ಮತ್ತು ವಿಶೇಷ ತಹಶೀಲ್ದಾರ್ಗೆ ನೋಟಿಸ್ ನೀಡಿದ್ದು, ಸ್ಥಳ ಪರಿಶೀಲಿಸಿ ವರದಿ ನೀಡಲು ಸೂಚಿಸಲಾಗಿದೆ’ ಎಂದು ವಿವರ ನೀಡಿದ್ದಾರೆ.
ಕೊಳವೆಬಾವಿ ಅಕ್ರಮ: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮವು ಗಂಗಾ ಕಲ್ಯಾಣ ಯೋಜನೆಯಡಿ ಕೊರೆಸಿರುವ ಕೊಳವೆ ಬಾವಿಗಳಿಗೆ ಸಂಬಂಧಿಸಿದಂತೆ ಸುಳ್ಳು ಮಾಹಿತಿ ನೀಡಿ ಹೆಚ್ಚಿನ ಹಣ ನಗದೀಕರಿಸಲಾಗಿದೆ ಎಂದು ಆರೋಪಿಸಿ ಮೈಸೂರು ಜಿಲ್ಲೆ ಟಿ.ನರಸೀಪುರದ ಹೂವಿನಬೀದಿ ಗ್ರಾಮದ ಕೆ.ಶೇಷಣ್ಣ ಎಂಬುವರು ದೂರು ಸಲ್ಲಿಸಿದ್ದರು. ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಎಸ್.ಮೃತ್ಯುಂಜಯ ಸೇರಿದಂತೆ ಹಲವರ ವಿರುದ್ಧ ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
‘ಶೇಷಣ್ಣ ಕೂಡ ಒಬ್ಬ ಫಲಾನುಭವಿ. ಅವರ ಜಮೀನಿನಲ್ಲಿ 53 ಮೀಟರ್ ಆಳದ ಕೊಳವೆ ಬಾವಿ ಕೊರೆದು, 115 ಮೀಟರ್ ಆಳ ಕೊರೆಯಲಾಗಿದೆ ಎಂದು ಬಿಲ್ ಮಾಡಲಾಗಿದೆ. ಮೈಸೂರು ಜಿಲ್ಲೆಯಾದ್ಯಂತ ಈ ರೀತಿ ಅಕ್ರಮ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿ ದ್ದಾರೆ.
ಕಾರ್ಯನಿರ್ವಾಹಕ ಎಂಜಿ ನಿಯರ್ ಎಚ್.ಬಿ.ಶ್ರೀಕಂಠಪ್ಪ ಅವರು ಸ್ಥಳ ಪರಿಶೀಲನೆ ನಡೆಸಿ 53 ಮೀಟರ್ ಆಳದವರೆಗೆ ಮಾತ್ರ ಕೊಳವೆಬಾವಿ ಕೊರೆಯಲಾಗಿದೆ ಎಂಬ ವರದಿ ನೀಡಿದ್ದರು. ಆ ಬಳಿಕವೂ ಮೃತ್ಯುಂ ಜಯ ಅವರು ನಿಗಮದ ಮೈಸೂರು ಜಿಲ್ಲಾ ವ್ಯವಸ್ಥಾಪಕ ಸಿ.ರಾಜು ವಿರುದ್ಧ ಕ್ರಮ ಜರುಗಿಸುವಲ್ಲಿ ವಿಫಲರಾ ಗಿದ್ದಾರೆ. ಇಬ್ಬರೂ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಕೋರಲಾಗಿತ್ತು’ ಎಂದು ಲೋಕಾ ಯುಕ್ತರು ವಿವರ ನೀಡಿದ್ದಾರೆ.
ಶೇಷಣ್ಣ ನೀಡಿರುವ ದೂರಿನ ಬಗ್ಗೆ ವಿಚಾರಣೆ ನಡೆಯುತ್ತಿದೆ. ಆರೋಪಿ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ, ದೂರಿನಲ್ಲಿ ಉಲ್ಲೇಖಿಸಿರುವ ಆರೋ ಪಗಳ ಕುರಿತು ವಿವರಣೆ ನೀಡುವಂತೆ ಸೂಚಿಸಲಾಗಿತ್ತು. ಇಬ್ಬರೂ ಉತ್ತರ ನೀಡಿದ್ದು, ಅವುಗಳನ್ನು ಪರಿಶೀಲಿ ಸಲಾಗುತ್ತಿದೆ ಎಂದಿದ್ದಾರೆ.