ಬೆಳಗಾವಿ: ಈದ್ ಮಿಲಾದ್ ಅಂಗವಾಗಿ ಭಾನುವಾರ ನಡೆದ ಮೆರವಣಿಗೆ ವೇಳೆ ಬಡಕಲ್ ಗಲ್ಲಿಯಲ್ಲಿ ಯುವಕರ ಗುಂಪೊಂದು ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದ್ದರಿಂದ ಗುಂಪು ಘರ್ಷಣೆ, ಕಲ್ಲು ತೂರಾಟ ನಡೆದಿದೆ. ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಉದ್ರಿಕ್ತ ಜನರ ಗುಂಪನ್ನು ಚದುರಿಸಿದ್ದಾರೆ.
ಘಟನೆಯಿಂದಾಗಿ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನಗರದ ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಘಟನೆ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಯುತ್ತಿತ್ತು. ಮುಗಿದ ಬಳಿಕ 50ಕ್ಕೂ ಹೆಚ್ಚು ಯುವಕರಿದ್ದ ಗುಂಪು ಪ್ರಚೋದನಕಾರಿ ಘೋಷಣೆ ಕೂಗುತ್ತ ಬೈಕ್ನಲ್ಲಿ ಬಡಕಲ್ ಗಲ್ಲಿಗೆ ಬಂದಿದೆ. ಇದರಿಂದ ಕೆರಳಿದ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಗ ಮಾತಿಗೆ ಮಾತು ಬೆಳೆದು ಗುಂಪು ಘರ್ಷಣೆ ಆರಂಭವಾಗಿದೆ. ಉದ್ರಿಕ್ತರು ಕಲ್ಲು ತೂರಾಟ ನಡೆಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.
ಈ ಸುದ್ದಿ ಹರಡುತ್ತಿದ್ದಂತೆ ಖಡಕ್ಗಲ್ಲಿಯಲ್ಲೂ ಕಲ್ಲು ತೂರಾಟ ನಡೆಯಿತು. ಬಳಿಕ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು. ಶಿವಾಜಿನಗರದ ಶಿವಾಜಿ ಚೌಕ್– ಸಾಯಿ ಮಂದಿರದ ಬಳಿ ಇನ್ನೊಂದು ಗುಂಪು ಪ್ರಚೋದನ ಕಾರಿ ಘೋಷಣೆಗಳನ್ನು ಕೂಗುತ್ತ ಬಂದಿತು. ಇಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರಿಂದ ಕಾರಿನ ಗಾಜು ಒಡೆದಿದೆ. ‘ಬಡಕಲ್ ಗಲ್ಲಿ ಯಲ್ಲಿ 18 ಮತ್ತು ಶಿವಾಜಿ ಚೌಕ್ ಬಳಿ 9 ಬೈಕ್ ವಶಕ್ಕೆ ಪಡೆಯಲಾಗಿದೆ.