ಬೆಂಗಳೂರು: ರಾಮಕಥಾ ಗಾಯಕಿಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಅವರಿಗೆ ಇಲ್ಲಿನ 36ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ 30 ದಿನಗಳ ಷರತ್ತುಬದ್ಧ ಜಾಮೀನು ನೀಡಿದೆ.
‘ರಾಘವೇಶ್ವರ ಸ್ವಾಮೀಜಿ ನನ್ನ ತಾಯಿಗೆ ಲೈಂಗಿಕ ದೌರ್ಜನ್ಯ ನೀಡಿ ಕೊಲೆ ಬೆದರಿಕೆ ಹಾಕಿದ್ದಾರೆ’ ಎಂದು ಆರೋಪಿಸಿ ಗಾಯಕಿ ಪುತ್ರಿ ಬೆಂಗಳೂರಿನ ಗಿರಿನಗರ ಠಾಣೆಗೆ ದೂರು ಕೊಟ್ಟಿದ್ದರು. ಈ ದೂರು ರದ್ದುಗೊಳಿಸುವಂತೆ ಕೋರಿ ಸ್ವಾಮೀಜಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಗುರುವಾರ ಬೆಳಿಗ್ಗೆ ನ್ಯಾಯಮೂರ್ತಿಗಳು ಈ ಅರ್ಜಿಯನ್ನು ವಜಾಗೊಳಿಸಿದ ಆದೇಶ ಪ್ರಕಟಿಸಿದರು. ಇದರಿಂದ ಬಂಧನದ ಭೀತಿಗೆ ಒಳಗಾದ ಸ್ವಾಮೀಜಿ ವಕೀಲರ ಮೂಲಕ ನಿರೀಕ್ಷಣಾ ಜಾಮೀನು ಪಡೆಯಲು ತಕ್ಷಣವೇ ಸೆಷನ್ಸ್ ನ್ಯಾಯಾಲಯದ ಮೊರೆ ಹೋದರು.
ಮಧ್ಯಾಹ್ನ ಮೂರು ಗಂಟೆಗೆ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶ ಮುದಿಗೌಡರ್ ವಾದ ಪ್ರತಿವಾದ ಆಲಿಸಿದರು. ನಂತರ, ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್ಪಿಸಿ) 438ರ ಪ್ರಕಾರ ಅರ್ಜಿದಾರರು ಜಾಮೀನು ಪಡೆಯಲು ಅರ್ಹರು ಎಂದು ಅಭಿಪ್ರಾಯ ಪಟ್ಟು ಕೆಲವು ಷರತ್ತುಗಳೊಂದಿಗೆ ಜಾಮೀನು ಮಂಜೂರು ಮಾಡಿದರು. ಸ್ವಾಮೀಜಿ ಪರ ಹಿರಿಯ ವಕೀಲ ಬಿ.ವಿ.ಆಚಾರ್ಯ ವಾದಿಸಿದರು.
ತಡೆಯಾಜ್ಞೆ ತೆರವು: ತಮ್ಮ ವಿರುದ್ಧ ದಾಖಲಿಸಲಾಗಿರುವ ಅತ್ಯಾಚಾರ ಪ್ರಕರಣವನ್ನು ರದ್ದು ಮಾಡುವಂತೆ ಕೋರಿ ರಾಘವೇಶ್ವರರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿತು. ದೂರಿಗೆ ಸಂಬಂಧಿಸಿದಂತೆ ವಿಚಾರಣೆ ಮತ್ತು ಬಂಧನಕ್ಕೆ ನೀಡಲಾಗಿದ್ದ ಮಧ್ಯಾಂತರ ತಡೆಯಾಜ್ಞೆ ತೆರವುಗೊಳಿಸಿತು. ಈ ಸಂಬಂಧ ಕಾಯ್ದಿರಿಸಲಾಗಿದ್ದ ಆದೇಶವನ್ನು ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರಿದ್ದ ಏಕಸದಸ್ಯ ಪೀಠವು ಗುರುವಾರ ಬೆಳಿಗ್ಗೆ ಕಲಾಪ ಆರಂಭವಾದ ಕೆಲವೇ ಹೊತ್ತಿನಲ್ಲಿ ಪ್ರಕಟಿಸಿತು.
ತನಿಖಾಧಿಕಾರಿ ಸ್ವತಂತ್ರ: ‘ಅತ್ಯಾಚಾರ ದೂರಿನ ಪ್ರಕರಣವು ಗಂಭೀರವಾಗಿದ್ದು ಇದನ್ನು ವಜಾ ಮಾಡಲು ಸಾಧ್ಯವಿಲ್ಲ. ಈ ಕುರಿತು ತನಿಖೆ ನಡೆಸಲು ತನಿಖಾಧಿಕಾರಿಯು ಸಂಪೂರ್ಣ ಸ್ವತಂತ್ರ’ ಎಂದು ಆದೇಶದಲ್ಲಿ ಅಭಿಪ್ರಾಯಪಡಲಾಗಿದೆ.‘ಯಾವುದೇ ಅಪರಾಧಿಕ ಪ್ರಕರಣದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸದೇ ವಿಚಾರಣೆ ನಡೆಸಬಹುದು. ಇದೆಲ್ಲಾ ತನಿಖಾಧಿಕಾರಿಯ ವಿವೇಚನೆಗೆ ಬಿಟ್ಟ ಹಾಗೂ ಸನ್ನಿವೇಶಕ್ಕೆ ಅನುಗುಣವಾಗಿ ನಡೆಯುವ ವಿಚಾರವಾಗಿರುತ್ತದೆ’ ಎಂದು ಆದೇಶದಲ್ಲಿ ವಿವರಿಸಲಾಗಿದೆ.
ನ್ಯಾಯಶಾಸ್ತ್ರಕ್ಕೆ ಅಪರಿಚಿತ ನಡೆ: ‘ರಾಘವೇಶ್ವರ ಸ್ವಾಮೀಜಿಗಳನ್ನು ಬ್ಲಾಕ್ ಮೇಲ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮಕಥಾ ಗಾಯಕ ದಂಪತಿಯನ್ನು ಹೊನ್ನಾವರದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಈ ಸಂದರ್ಭದಲ್ಲಿ ಮ್ಯಾಜಿಸ್ಟ್ರೇಟ್ ಎದುರು ಗಾಯಕಿ ದೂರು ನೀಡಿ, ಸ್ವಾಮೀಜಿ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದರು. ದೂರನ್ನು ಸ್ವೀಕರಿಸಿದ ಮ್ಯಾಜಿಸ್ಟ್ರೇಟ್ ಲಕೋಟೆಯಲ್ಲಿ ಭದ್ರವಾಗಿ ಇರಿಸಿದ್ದರು. ಮ್ಯಾಜಿಸ್ಟ್ರೇಟ್ ಅವರ ಈ ನಡೆ ನಿಜಕ್ಕೂ ಆಶ್ಚರ್ಯಕರ ಮತ್ತು ಅಪರಾಧಿಕ ನ್ಯಾಯಶಾಸ್ತ್ರಕ್ಕೆ ಅಪರಿಚಿತ ವರ್ತನೆಯಾಗಿದೆ’ ಎಂದು ಆದೇಶದಲ್ಲಿ ಹೇಳಲಾಗಿದೆ.
ಷರತ್ತುಗಳು
*ರಾಘವೇಶ್ವರರು ಆದಷ್ಟು ಬೇಗ ತನಿಖಾಧಿಕಾರಿ ಮುಂದೆ ಹಾಜರಾಗಿ ಹೇಳಿಕೆ ನೀಡಬೇಕು.
*₨ 2 ಲಕ್ಷ ಮೊತ್ತದ ಬಾಂಡ್ ಮತ್ತು ಇಬ್ಬರ ವೈಯಕ್ತಿಕ ಭದ್ರತೆ ನೀಡ-ಬೇಕು. ವಿದೇಶ ಪ್ರಯಾಣ ಕೈಗೊಳ್ಳುವಂತಿಲ್ಲ.
*ದೂರುದಾರರು ಮತ್ತು ಅವರ ಕುಟುಂಬ ಸದಸ್ಯರಿಗೆ ಬೆದರಿಕೆ ಹಾಕಬಾರದು.
*ಸಾಕ್ಷ್ಯಾಧಾರ ನಾಶಕ್ಕೆ ಯತ್ನಿಸಬಾರದು.
*ಈ ಷರತ್ತುಗಳನ್ನು ಉಲ್ಲಂಘಿಸಿದರೆ ಕೂಡಲೇ ಜಾಮೀನು ಆದೇಶ ರದ್ದುಪಡಿಸಲಾಗುವುದು.