m
ಬಾಗೇಪಲ್ಲಿ, ಅ.9: ತಾಲೂಕಿನ ಚೇಳೂರು ಹೋಬಳಿ ವೆಂಕಟೇಶಪಲ್ಲಿ ಗ್ರಾಮದಲ್ಲಿ ವ್ಯಕ್ತಿಯೊಬ್ಬನು ತನ್ನ ಪತ್ನಿ ಸುನೀತಾ(28) ಹಾಗೂ ಅತ್ತೆ ಪಾರ್ವ ತಮ್ಮ(50)ಅವರನ್ನು ಕತ್ತು ಹಿಸುಕಿ ಬರ್ಬರವಾಗಿ ಕೊಲೆ ಮಾಡಿ ಬಳಿಕ ತಾನೇ ನಗರದ ಪೊಲೀಸ್ ಠಾಣೆಯಲ್ಲಿ ಶರಣಾಗಿರುವ ಪ್ರಕರಣ ವರದಿಯಾಗಿದೆ.
ಆರೋಪಿಯನ್ನು ಆದಿನಾರಾಯಣರೆಡ್ಡಿ ಎಂದು ಗುರುತಿಸಲಾಗಿದ್ದು, ಈತ ಮೊದಲು ಅತ್ತೆ ಪಾರ್ವತಮ್ಮಳನ್ನು ಚೇಳೂರಿಗೆ 3 ಕಿ.ಮೀ ದೂರದ ಸುಬ್ಬರಾಯಪ್ಪ ತೋಟದಲ್ಲಿ ಸೀರೆಯ ಸೆರಗಿನಿಂದ ಕತ್ತು ಬಿಗಿದು ಕೊಲೆ ಮಾಡಿದ್ದಾನೆ. ಬಳಿಕ ಆಕೆಯ ಮನೆಗೆ ಬಂದ ಆರೋಪಿ ಪತ್ನಿ ಸುನಿತಾಳನ್ನು ಅಲ್ಲೇ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಸುಮಾರು 10 ವರ್ಷಗಳ ಹಿಂದೆ ಸುನಿತಾಳೊಂದಿಗೆ ಆದಿನಾರಾಯಣರೆಡ್ಡಿ ವಿವಾಹ ನಡೆದಿದ್ದು, ಇವರಿಗೆ 9 ವರ್ಷದ ಮಗನಿದ್ದಾನೆ. 6 ತಿಂಗಳ ಹಿಂದೆ ಚಿನ್ನದ ಒಡವೆಗಳಿಗಾಗಿ ಆರೋಪಿಯು ಅತ್ತೆ ಹಾಗೂ ಪತ್ನಿಯೊಂದಿಗೆ ಜಗಳವಾಡಿದ್ದು, ಈ ಸಂಬಂಧ ಗಂಡ ಹೆಂಡತಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಸಂಬಂಧಿಕರು ರಾಜಿ ಸಂಧಾನ ಮಾಡಿದ್ದರು ಪ್ರಯೋಜವಾಗದೆ ನಿನ್ನೆ ರಾತ್ರಿ ತನ್ನ ಪತ್ನಿ ಹಾಗೂ ಅತ್ತೆಯನ್ನು ಕೊಲೆಮಾಡಿದ್ದಾನೆ ಎನ್ನಲಾಗಿದೆ.
ಆರೋಪಿಯನ್ನು ವಶಕ್ಕೆ ಪಡೆದಿರುವ ಚೇಳೂರು ಪಿಎಸ್ಐ ರಾಜಶೇಖರ್ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.