ಬೆಂಗಳೂರು: ಮೈಸೂರು ದಸರಾ ಜಂಬೂಸವಾರಿ ವೇಳೆ ತಾವು ಚಪ್ಪಲಿ ಧರಿಸಿಕೊಂಡು ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡಿರುವುದಾಗಿ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದ ವರದಿಗಳು ಸತ್ಯಕ್ಕೆ ದೂರವಾದವು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ತಮ್ಮ ಫೇಸ್ಬುಕ್ ಖಾತೆಯಲ್ಲೂ ಮಾಹಿತಿ ನೀಡಿದ್ದಾರೆ. ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಸಮಯದಲ್ಲಿ ಚಪ್ಪಲಿ ಧರಿಸಿರಲಿಲ್ಲ ಎಂಬುದನ್ನು ಖಚಿತಪಡಿಸುವ ಛಾಯಾಚಿತ್ರಗಳನ್ನೂ ತಮ್ಮ ಫೇಸ್ಬುಕ್ ಖಾತೆಯಲ್ಲಿ ಪ್ರಕಟಿಸಿದ್ದಾರೆ.
‘ನಾಡದೇವತೆ ಚಾಮುಂಡೇಶ್ವರಿ ದೇವಿಯ ಬಗ್ಗೆ ನಾನು ಅಪಾರ ಗೌರವ ಹೊಂದಿದ್ದೇನೆ. ನಾಡಿನ ಜನರ ಮನಸ್ಸಿಗೆ ನೋವು ಉಂಟುಮಾಡುವ ಯಾವುದೇ ಕೆಲಸವನ್ನು ಮಾಡಿಲ್ಲ ಮತ್ತು ಮಾಡುವುದಿಲ್ಲ. ಇಂತಹ ವಿಷಯದಲ್ಲಿ ಜನರ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡಬಾರದು. ಹಬ್ಬದ ಸಂದರ್ಭದಲ್ಲಿ ಸಂತಸದ ವಾತಾವರಣವನ್ನು ಹಾಳುಗೆಡವುವುದು ಸಮಾಜದ ದೃಷ್ಟಿಯಿಂದ ಒಳಿತಲ್ಲ’ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ನಾನು ಜಂಬೂಸವಾರಿಗೆ ಚಾಲನೆ ನೀಡಲು ತೆರಳಿದ್ದಾಗ ಕಪ್ಪು ಬಣ್ಣದ ಶೂ ಮತ್ತು ಬಿಳಿ ಬಣ್ಣದ ಸಾಕ್ಸ್ ಧರಿಸಿದ್ದೆ. ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಲು ವೇದಿಕೆ ಏರುವಾಗ ಶೂಗಳನ್ನು ಕುರ್ಚಿಯ ಬಳಿಯೇ ಬಿಟ್ಟಿದ್ದೆ. ವೇದಿಕೆ ಮೇಲೆ ಇದ್ದಾಗ ನಾನು ಸಾಕ್ಸ್ ಧರಿಸಿದ್ದೆ. ಇದನ್ನು ತಪ್ಪಾಗಿ ಬಿಂಬಿಸಿದ ಕೆಲವರು ಶೂ ಧರಿಸಿಕೊಂಡು ಪುಷ್ಪಾರ್ಚನೆ ಮಾಡಿದ್ದೇನೆ ಎಂದು ಪ್ರಚಾರ ಮಾಡಿದ್ದಾರೆ’ ಎಂದು ಮುಖ್ಯಮಂತ್ರಿಯವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.