ಕುಂದಾಪುರ: ಚುನಾವಣೆಯಲ್ಲೂ ಬಾರಿ ಕುತೂಹಲ ಮೂಡಿಸಿದ್ದ ತಲ್ಲೂರು ಗ್ರಾಮಪಂಚಾಯತಿಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಶುಕ್ರವಾರ ನಡೆದಿದೆ.
ಬಿಜೆಪಿ ಬೆಂಬಲಿತ ಇಬ್ಬರು ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಹಿನ್ನೆಲೆ ಇಬ್ಬರ ನಡುವೆ ಚುನಾವಣೆ ಏರ್ಪಟ್ಟಿತ್ತು. ಮೊದಲಿಗೆ ಪಕ್ಷೇತರವಾಗಿ ಸ್ಪರ್ಧಿಸಿ ಗೆದ್ದಿದ್ದ ಉದಯಕುಮಾರ್ ತಲ್ಲೂರು ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದು ಕೊನೆ ಕ್ಷಣದಲ್ಲಿ ಉಮೇದುವಾರಿಕೆ ಹಿಂತೆಗೆದುಕೊಂಡಿದ್ದರು. ತರುವಾಯ ಬಿಜೆಪಿಯ ಗಿರೀಶ್ ಹಾಗೂ ಸಂಜೀವ ದೇವಾಡಿಗರ ನಡುವೆ ಚುನಾವಣೆ ನಡೆದಿತ್ತು. ಒಟ್ಟು 16 ಸದಸ್ಯರ ಪೈಕಿ ಓರ್ವರು ಗೈರಾಗಿದ್ದರು. ಗಿರೀಶ್ 9 ಮತ ಪಡೆದು ಗೆಲುವು ಸಾಧಿಸಿದ್ದು ಸಂಜೀವ ದೇವಾಡಿಗ 6 ಮತ ಪಡೆದು ಸೋಲು ಕಾಣುವಂತಾಯಿತು. ಅಧ್ಯಕ್ಷರಾಗಿ ಪರಿಶಿಷ್ಟ ಪಂಗಡದ ಮಹಿಳಾ ಮೀಸಲಾತಿ ಬಂದಿದ್ದು ಭೀಮವ್ವ ಅಧ್ಯಕ್ಷರಾಗಿಯೂ ಗಿರೀಶ್ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಅಚ್ಚರಿಯ ಬೆಳವಣಿಗೆಯಲ್ಲಿ ಬಿಜೆಪಿ ಪಕ್ಷದಿಂದ ಬೈಂದೂರು ಶಾಸಕರ ಮುಂದಾಳತ್ವದಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಸಂಜೀವ ದೇವಾಡಿಗ ಅಧೀಕೃತವಾಗಿ ಸ್ಪರ್ಧೆಗಿಳಿದಿದ್ದರು. ಆದರೆ ತಾಲೂಕು ಪಂಚಾಯತ್ ಸದಸ್ಯ ಕರಣ ಪೂಜಾರಿ ನೇತೃತ್ವದಲ್ಲಿ ಗ್ರಾ.ಪಂ ಚುನಾವಣೆಯಲ್ಲಿ ಬಿಜೆಪಿ ಬಂಡಾಯವಾಗಿ ಸ್ಪರ್ಧೆ ಮಾಡಿ 8 ಮಂದಿ ಗೆದ್ದು ಬಂದಿದ್ದು ಅವರ ಪೈಕಿ ಗಿರೀಶ ಅವರನ್ನು ಉಪಾಧ್ಯಕ್ಷರಾಗಿ ಮಾಡಲು ಕರಣ್ ಪೂಜಾರಿ ಶತಾಯಗತಾಯ ಹೋರಾಟ ಕೊಟ್ಟಿದ್ದರು. ಅಂತೆಯೇ ಇಂದು ನಡೆದ ಚುನಾವಣೆಯಲ್ಲಿ ತಾ.ಪಂ ಸದಸ್ಯ ಕರಣ್ ಪೂಜಾರಿ ಟೀಂ ಪ್ರಾಬಲ್ಯ ಸಾಧಿಸಿದೆ.
(ವರದಿ- ಯೋಗೀಶ್ ಕುಂಭಾಸಿ)
Comments are closed.