ಮಂಗಳೂರು, ಫೆಬ್ರವರಿ19: ನಗರ ಹೊರವಲಯದ ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ಫೆಬ್ರವರಿ 10ರಂದು ರೌಡಿಶೀಟರ್ ಪಿಂಕಿ ನವಾಝ್ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುರತ್ಕಲ್ ಪೊಲೀಸರು ಹಾಗೂ ಸಿಸಿಬಿ ಪೊಲೀಸರು ಒಂಬತ್ತು ಮಂದಿಯನ್ನು ಬಂಧಿಸಿದ್ದಾರೆ.
ಕಾಟಿಪಳ್ಳದ ಶಕೀಬ್ (29), ಕಾಟಿಪಳ್ಳದ ಹನೀಫ್ (20), ಕಾಟಿಪಳ್ಳದ ಅಹ್ಮದ್ ಸಾದಿಕ್ (23), ಕಾಟಿಪಳ್ಳದ ನಿಸ್ಸಾರ್ ಹುಸೇನ್ (29) ಕಾಟಿಪಳ್ಳದ ಪ್ರಶಾಂತ್ ಭಂಡಾರಿ (29), ಕೃಷ್ಣಾಪುರದ ಶೈಲೇಶ್ ಪೂಜಾರಿ (19), ಹೆಜಮಾಡಿಯ ಸುವೀನ್ ಕಾಂಚನ್ (23), ಕಾಟಿಪಳ್ಳದ ಲಕ್ಷ್ಮಿಶ (26) ಮತ್ತು ಕಾಟಿಪಳ್ಳದ ರಂಜನ್ ಶೆಟ್ಟಿ (24) ಬಂಧಿತ ಆರೋಪಿಗಳು.
ಫೆ.10ರಂದು ಸಂಜೆ ವೇಳೆ ಕಾಟಿಪಳ್ಳದ 2ನೇ ಬ್ಲಾಕ್ನಲ್ಲಿರುವ ಟಿಕ್ಟಾಕ್ ಗಾರ್ಡನ್ ಬಳಿ ಪಿಂಕಿ ನವಾಝ್ ನನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆಗೆ ಯತ್ನಿಸಿದ್ದರು. ಈ ಆರೋಪಿಗಳು ಕಾರಿನಲ್ಲಿ ಬಂದಿದ್ದು ನವಾಜ್ ಮೇಲೆ ಹಲ್ಲೆ ಮಾಡಿದ ನಂತರ ಸ್ಥಳದಿಂದ ಪರಾರಿಯಾಗಿದ್ದರು. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ಕೈಗೊಂಡ ಸುರತ್ಕಲ್ ಪೊಲೀಸರು ಕೊಲೆಯತ್ನ ನಡೆಸಿದ ಆರೋಪದಲ್ಲಿ ನಾಲ್ವರು ಹಾಗೂ ಕೃತ್ಯಕ್ಕೆ ಸಹಕರಿಸಿದ ಆರೋಪದಲ್ಲಿ ಐವರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಲಾದ ಕಾರು, ಮಾರಕಾಸ್ತ್ರಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಹಳೆ ದ್ವೇಷದಿಂದಲೇ ಕೃತ್ಯ ನಡೆಸಿರುವುದು ತನಿಖೆಯಿಂದ ತಿಳಿದುಬಂದಿದೆ ವರದಿಗಳ ಪ್ರಕಾರ, ಆರೋಪಿ ಶಕೀಬ್ ಮತ್ತು ಪ್ರಶಾಂತ್ ಅವರು ನವಾಜ್ ಅವರೊಂದಿಗೆ ವೈಯಕ್ತಿಕ ದ್ವೇಷವನ್ನು ಹೊಂದಿದ್ದರು. ಹಾಗಾಗಿ ಹಲ್ಲೆ ನಡೆಸಲು ಇತರರ ಸಹಾಯವನ್ನು ಕೋರಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳ ಪೈಕಿ ಎಂಟು ಮಂದಿಯ ಮೇಲೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಠಾಣೆಗಳಲ್ಲಿ ಹಲವು ಕೇಸುಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
2018 ರಲ್ಲಿ, ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಅವರನ್ನು ನಾಲ್ಕು ದುಷ್ಕರ್ಮಿಗಳು ಮಾರಕ ಆಯುಧಗಳಿಂದ ಕ್ರೂರವಾಗಿ ಹಲ್ಲೆ ನಡೆಸಿದರು. ಈ ಪ್ರಕರಣದಲ್ಲಿ ನವಾಜ್ ಪ್ರಮುಖ ಆರೋಪಿ. ಪಿಂಕಿ ನವಾಜ್ ಮೇಲಿನ ದಾಳಿಯ ಆರೋಪಿಗಳಲ್ಲಿ ಒಬ್ಬರಾದ ಪ್ರಶಾಂತ್ ಭಂಡಾರಿ ದೀಪಕ್ ರಾವ್ ಅವರೊಂದಿಗೆ ಆಪ್ತರಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದ್ದು, ಮೊದಲಿಗೆ ಇದು ದೀಪಕ್ ರಾವ್ ಹತ್ಯೆಗೆ ಪ್ರತೀಕಾರ ಎಂದು ಬಿಂಬಿಸಲಾಗಿತ್ತು.
Comments are closed.