ಮಂಗಳೂರು, ಫೆಬ್ರವರಿ.19: ನಾಲ್ಕು ತಿಂಗಳ ಹಿಂದೆ ನಗರದ ಫಳ್ನೀರ್ ನಲ್ಲಿ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಉಳ್ಳಾಲ ಮುಕ್ಕಚೇರಿ ನಿವಾಸಿ ಮಹಮ್ಮದ್ ಸಮೀರ್ ಯಾನೆ ಸಮೀರ್ ಕಡಪರ ಯಾನೆ ರೋಬರ್ಟ್ (29), ಮೇಲಂಗಡಿ ನಿವಾಸಿ ಮೊಹಮ್ಮದ್ ಅರ್ಫಾನ್ (23) ಬಂಧಿತ ಆರೋಪಿಗಳು.
ಅಕ್ಟೋಬರ್ 30ರಂದು ಸಂಜೆ 5 ಗಂಟೆಯ ಸುಮಾರಿಗೆ ಫಳ್ನೀರ್ನ ಹೊಟೇಲ್ನ ಸಿಬ್ಬಂದಿ ಜೊತೆ ಮಾತಿನ ಚಕಮಕಿ ನಡೆದಿತ್ತು. ಆರೋಪಿಗಳು ರಿವಾಲ್ವಾರ್ನಿಂದ ಗುಂಡು ಹಾರಿಸಿದ ಪರಿಣಾಮ ಸಿಬ್ಬಂದಿ ಗಾಯಗೊಂಡಿದ್ದರು. ಆರೋಪಿಗಳು ಹಣಕಾಸಿನ ವಿಚಾರದಲ್ಲಿ ಈ ಕೃತ್ಯ ಎಸಗಿದ್ದರು ಎಂದು ಆರೋಪಿಸಲಾಗಿತ್ತು.
ಪ್ರಕರಣದ ವಿವರ : 2020ರ ಅಕ್ಟೋಬರ್ 30 ರಂದು ಫಳ್ನೀರ್ ಬಳಿ ಇರುವ ಎಂಎಫ್ಸಿ ಕಟ್ಟಾಮಿಟ್ಟಾ ಹೋಟೆಲ್ಗೆ ಆರೋಪಿಗಳಾದ ಸಮೀರ್, ಅರ್ಫಾನ್, ಇಜಾಜ್ ಮೊಹಮ್ಮದ್, ಜುನೈದ್ ಬಶೀರ್ ಹಾಗೂ ಅಬೂಬ್ಬಕರ್ ಸಿದ್ದಿಕಿ,ಜಾಜ್ ಮೊಹಮ್ಮದ್, ಜುನೈದ್ ಬಶೀರ್, ಹನೀಫ್, ಮೊಹಮ್ಮದ್ ಸತ್ತಾರ್, ಅಶ್ರಫ್, ಮೊಹಮ್ಮದ್ ಸಾದಿಕ್, ಶಾರೂಕ್, ಸಿದ್ದಿಕ್ ಮತ್ತು ಮೊಹಮ್ಮದ್ ಅಸ್ಕರ್ ಉಪಹಾರ ಸೇವಿಸಲು ಹೋಗಿದ್ದರು.
( ಘಟನೆಯ ದಿನದ ಕಡತ ಚಿತ್ರ)
ಈ ವೇಳೆ ಇವರು ಸಮೋಸಾ ಬಿಸಿಯಿಲ್ಲ ಎಂಬ ಕಾರಣಕ್ಕೆ ಹೋಟೆಲ್ ಸೊತ್ತುಗಳನ್ನು ಹಾನಿ ಮಾಡಿ, ಸಿಬ್ಬಂದಿಗಳಿಗೆ ಚೂರಿಯಿಂದ ತಿವಿದು ಕೊಲೆ ಮಾಡಲು ಯತ್ನಿಸಿ ಓಡಿ ಹೋದಾಗ, ಹೋಟೆಲ್ ಸಿಬ್ಬಂದಿಗಳು ಆರೋಪಿಗಳನ್ನು ಬೆನ್ನಟ್ಟಿದ್ದರು. ಈ ವೇಳೆ ಕಡಪರ ಸಮೀರ್ ಎಂಬಾತ ಹೋಟೆಲ್ ಸಿಬ್ಬಂದಿಯ ಮೇಲೆ ರಿವಾಲ್ವರ್ ನಿಂದ ಶೂಟ್ ಮಾಡಿ ಕೊಲೆಯತ್ನ ಮಾಡಿದ್ದ. ಈ ಬಗ್ಗೆ ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಪೊಲೀಸರು ಆರೋಪಿಗಳಿಂದ ಚಾಕು ಮತ್ತು ರಿವಾಲ್ವರ್ ವಶಪಡಿಸಿಕೊಂಡಿದ್ದಾರೆ. ಉಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಧಾನ ಆರೋಪಿ ಮಹಮ್ಮದ್ ಸಮೀರ್ ಯಾನೆ ಸಮೀರ್ ಕಡಪರ ಯಾನೆ ರೋಬರ್ಟ್, ಲಬೊಟ್ಟು ದಾವೂದ್ ಎಂಬಾತನ ಸಹಚರನಾಗಿದ್ದು, ಈತನ ಮೇಲೆ ನಾಲ್ಕು ಪ್ರಕರಣಗಳು ಈಗಾಗಲೇ ದಾಖಲಾಗಿದೆ. ಇರ್ಫಾನ್ ವಿರುದ್ಧ ನಾಲ್ಕು ಕೊಲೆ ಯತ್ನ ಸೇರಿ ಆರು ಪ್ರಕರಣಗಳು ದಾಖಲಾಗಿದೆ.
ಆರೋಪಿಗಳು ಮೂರು ತಿಂಗಳ ಕಾಲ ಪರಾರಿಯಾಗಿದ್ದು, ಹಣಕಾಸು ಮತ್ತು ವಾಹನದ ರೂಪದಲ್ಲಿ ಆರೋಪಿಗಳಿಗೆ ಸಹಾಯ ಮಾಡಿದವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.