ಕರಾವಳಿ

ಉಡುಪಿಯಲ್ಲಿ ಸರಣಿ ಸರಗಳ್ಳತನ: ಅಂತರಜಿಲ್ಲಾ ಆರೋಪಿ ಬಂಧನ- 9.38 ಲಕ್ಷ ಮೌಲ್ಯದ ಸೊತ್ತು ವಶ

Pinterest LinkedIn Tumblr

ಉಡುಪಿ: ಜಿಲ್ಲೆಯಲ್ಲಿ ಕಳೆದ ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ನಡೆದ ಸರಣಿ ಸರಗಳ್ಳತನ ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದು 172.02 ಗ್ರಾಂ ಚಿನ್ನ, ಹಾಗೂ ಮೂರು ಬೈಕ್ ಸೇರಿ ಒಟ್ಟು ರೂ 9.38 ಲಕ್ಷ ಮೌಲ್ಯದ ಸಾಮಾಗ್ರಿಗಳನ್ನು ವಶಪಡಿಸಿಕೊಂಡು ಒರ್ವ ಅಂತರ್ ಜಿಲ್ಲಾ ಸರಗಳ್ಳನನ್ನು ಬಂಧಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಹೇಳಿದರು.

ಅವರು ಮಂಗಳವಾರ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಬಂಧಿತ ಆರೋಪಿಯನ್ನು ಮಂಗಳೂರು ಮುಳಿಹಿತ್ಲು ನಿವಾಸಿ ಚಂದ್ರಶೇಖರ (25) ಎಂದು ಗುರುತಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಉಡುಪಿ ಮತ್ತು ಮಂಗಳೂರು ಅವಳಿ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಸರಗಳ್ಳತನ ಪ್ರಕರಣಗಳನ್ನು ಪತ್ತೆ ಮಾಡಲು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಎನ್. ವಿಷ್ಣುವರ್ಧನ್ ಐ.ಪಿ.ಎಸ್. ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ತಕರಾದ ಕುಮಾರಚಂದ್ರ ರವರ ಮಾರ್ಗದರ್ಶನದಲ್ಲಿ ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಟಿ.ಅರ್ ಜೈಶಂಕರ್ ಹಾಗೂ ಕಾರ್ಕಳ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಭರತ್ ಆಡ್ಡಿ ರವರ ನೇತೃತ್ವದಲ್ಲಿ ಆರೋಪಿ ಹಾಗೂ ಸೂತ್ತು ಪತ್ತೆಯ ಬಗ್ಗೆ ಮೂರು ವಿಶೇಷ ತಂಡಗಳನ್ನು ರಚಿಸಲಾಯಿತು.

ಮೊದಲ ತಂಡದಲ್ಲಿ ಉಡುಪಿ ನಗರ ವೃತ್ತದ ಸಿ.ಪಿ.ಐ ಮಂಜುನಾಥ ಹಾಗೂ ಸಿಬ್ಬಂದಿಯವರು ಎರಡನೇ ತಂಡದಲ್ಲಿ ಡಿಸಿಐಬಿ ಘಟಕದ ಪಿ.ಐ ಮಂಜಪ್ಪ ಡಿ.ಆರ್ ಹಾಗೂ ಸಿಬ್ಬಂದಿಯವರು, ಮೂರನೇ ತಂಡದಲ್ಲಿ ಮಣಿಪಾಲ ಠಾಣಾ ಪಿ.ಐ ಮಂಜುನಾಥ ಹಾಗೂ ಸಿಬ್ಬಂದಿಯವರನ್ನು ನೇಮಿಸಲಾಯಿತು ಎಂದರು.

ಡಿಸಿಐಬಿ ಘಟಕದ ಪಿ.ಐ ಮಂಜಪ್ಪ ಡಿ.ಆರ್ ಹಾಗೂ ಸಿಬ್ಬಂದಿಯವರು ವತ್ತ ಕಾರ್ಯದಲ್ಲಿ ನಿರತರಾಗಿದ್ದು, ಉಡುಪಿ ಸರಗಳ್ಳತನ ಪ್ರಕರಣಗಳಲ್ಲಿ ಈಗಾಗಲೇ ಸಿಸಿ ಕ್ಯಾಮರಾ ಪುಟೇಜ್ನಲ್ಲಿ ಕಂಡು ಬಂದಂತಹ ಕೆಎ 20 ಇ 3860 ಜುಪಿಟರ್ ಸ್ಕೂಟರ್ ರಲ್ಲಿ ಸಂಶಯಿತ ವ್ಯಕ್ತಿ ಕಂದು ಮಿಶ್ರಿತ ಬಣ್ಣದ ಚೆಕ್ಟ್ ಶರ್ಟ್ ಧರಿಸಿ ಅಲೆವೂರು ಕಡೆಯಿಂದ ಡಯಾನ ಜಂಕ್ಷನ್ ತಡೆಗೆ ಸವಾರಿ ಮಾಡಿಕೊಂಡು ಬರುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಹಿಕ್ಕಿಕಟ್ಟೆ ಜಂಕ್ಷನ್ ಬಳಿ ಆರೋಪಿ ಚಂದ್ರಶೇಖರ್ ನನ್ನು ವಶಕ್ಕೆ ಪಡೆಯಲಾಯಿತು.

ಆತನನ್ನು ಕೂಲಂಕುಷವಾಗಿ ವಿಚಾರಣೆಗೊಳಪಡಿಸಿ ಜುಪಿಟರ್ ಸ್ಕೂಟರ್ನ ಬಗ್ಗೆ ದಾಖಲಾತಿಯನ್ನು ಕೇಳಿದಾಗ ತಾನು ಸರಗಳ್ಳತನ ಮಾಡುವ ಉದ್ದೇಶದಿಂದ ಮಂಗಳೂರಿನ ಕಂಕನಾಡಿಯ ಗೋರಿಗುಡ್ಡೆ ಎಂಬಲ್ಲಿ ಸೆಕೆಂಡ್ ಹ್ಯಾಂಡ್ ಬಜಾರ್ ನಿಂದ ಖರೀದಿಸಲು ಟೆಸ್ಟ್ ರೈಡ್ ಮಾಡಿ ನೋಡುವುದಾಗಿ ಸುಳ್ಳು ಹೇಳಿ ಮೋಸ ಮಾಡಿ ತೆಗೆದುಕೊಂಡು ಬಂದಿರುವುದಾಗಿ ತಿಳಿಸಿರುತ್ತಾನೆ. ಈ ಸ್ಕೂಟರ್ನಲ್ಲಿ ಮಂಗಳೂರು, ಉಡುಪಿಯ ಸೈಂಟ್ಸಿಸಿಲಿ ಶಾಲೆ ಬಳಿ, ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ಇಂದ್ರಾಳಿ, ಇನ್ನು ಉಳಿದ ಕಡೆಗಳಲ್ಲಿ ಒಂಟಿ ಮಹಿಳೆಯರು ನಡೆದುಕೊಂಡು ಹೋಗುತ್ತಿರುವಾಗ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರಗಳನ್ನು ಸುಲಿಗೆ ಮಾಡಿರುವುದಾಗಿ ತಿಳಿಸಿದ್ದ.

ಆರೋಪಿಯನ್ನು ಇನ್ನೂ ಕುಲಂಕಷವಾಗಿ ವಿಚಾರಿಸಲಾಗಿ, ಮಂಗಳೂರು ನಗರದ ಬರ್ಕೆ, ಮಣಿಪಾಲ ಠಾಣೆ ಹಾಗೂ ಕಂಕನಾಡಿ ಠಾಣಾ ವ್ಯಾಪ್ತಿಯಿಂದ ತಲಾ ಒಂದೊಂದು ಬೈಕ್ನ್ನು ಮೋಸದಿಂದ ಪಡೆದು, ಅದೇ ಬೈಕ್ಗಳನ್ನು ಸರಗಳ್ಳತನ ಮಾಡಲು ಉಪಯೋಗಿಸಿರುವುದಾಗಿ ತಿಳಿಸಿರುತ್ತಾನೆ, ಆರೋಪಿಯು ಉಡುಪಿ ನಗರ ಠಾಣಾ ವ್ಯಾಪ್ತಿಯಲ್ಲಿ 4 ಸರಗಳ್ಳತನ,’ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ 2 ಸರಗಳ್ಳತನ, ಪಡುಬಿದ್ರೆ ಠಾಣಾ ವ್ಯಾಪ್ತಿಯಲ್ಲಿ 1 ಸರಗಳ್ಳತನ, ಮಂಗಳೂರು ನಗರದ ಕದ್ರಿ, ಮೂಲ್ಕಿಯಲ್ಲಿ ತಲಾ ಒಂದೊಂದು ಸರಗಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾನೆ, ಪ್ರಕರಣಗಳಿಗೆ ಸಂಬಂದಿಸಿ ಆರೋಪಿತನಿಂದ ಒಟ್ಟು 172.02 ಗ್ರಾಂ ಚಿನ್ನ ಹಾಗೂ ಟಿವಿಎಸ್ ಸ್ಟಾರ್ ಸಿಟಿ ಬೈಕ್, ಮೌಲ್ಯ 40,000/- ರೂಪಾಯಿ, ಟಿವಿಎಸ್ ವಿಕ್ಟರ್ ಬೈಕ್ ಮೌಲ್ಯ 50,000/- ರೂಪಾಯಿ ಹಾಗೂ ಜುಪಿಟರ್ ಸ್ಕೂಟರ್ ಅಂದಾಜು ಬೆಲೆ 40:000/- ಆಗಿದ್ದು ಆರೋಪಿಯಿಂದ ಸುಮಾರು ರೂ. 9,38,200/- ರೂಪಾಯಿ ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿರುತ್ತದೆ ಎಂದರು.

ಅರೋಪಿ ಇನ್ನು ಹೆಚ್ಚಿನ ಕಡೆಗಳಲ್ಲಿ ಅಪರಾಧ ಕೃತ್ಯ ಎಸಗಿರುವ ಸಂಶಯವಿದ್ದು ಈ ಬಗ್ಗೆ ಉಡುಪಿ ನಗರ ಸಿ.ಪಿ.ಐ ಮಂಜುನಾಥ ತನಿಖೆ ನಡೆಸುತ್ತಿದ್ದಾರೆ. ಆರೋಪಿತನು ಈ ಹಿಂದ ಮಂಗಳೂರು ಜಿಲ್ಲೆಯ ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಮನೆ ಕಳ್ಳತನದ ಆರೋಪಿಯಾಗಿದ್ದ.

ಈ ಕಾರ್ಯಾಚರಣೆಯಲ್ಲಿ ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಟಿ.ಆರ್ ಜೈಶಂಕರ್ ಹಾಗೂ ಕಾರ್ಕಳ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಭರತ್ ರೆಡ್ಡಿ, ಉಡುಪಿ ನಗರ ಸಿ.ಪಿ.ಐ ಮಂಜುನಾಥ ಹಾಗೂ ಸಿಬ್ಬಂದಿಯವರು, ಡಿಸಿಐಬಿ ಘಟಕದ ಪಿ.ಐ ಮಂಜಪ್ಪ ಡಿ.ಆರ್ ಹಾಗೂ ಸಿಬ್ಬಂದಿಗಳು ಮಣಿಪಾಲ ಠಾಣಾ ಪಿ.ಐ ಮಂಜುನಾಥ ಹಾಗೂ ಸಿಬ್ಬಂದಿಯವರು, ಕಾಪು ಸಿಪಿಐ ಪ್ರಕಾಶ್ ಮತ್ತು ಸಿಬ್ಬಂದಿಗಳು ಉಡುಪಿ ನಗರ ಠಾಣಾ ಪಿಎಸ್ಐ ಸಕ್ತಿವೇಲು, ಅಪರಾಧ ವಿಭಾಗದ ಪಿಎಸ್ಐ ವಾನಪ್ಪ ನಾಯ್ಕ ಹಾಗೂ ಸಿಬ್ಬಂದಿಗಳು, ಮಣಿಪಾಲ ಪಿಎಸ್ಐ ರಾಜೇಶೇಖರ್ ಹಾಗೂ ಸಿಬ್ಬಂದಿಗಳು, ಮಲ್ಪೆ ಪಿಎಸ್ಐ ತಿಮ್ಮೇಶ್ ಬಿ.ಎನ್ ಹಾಗೂ ಸಿಬ್ಬಂದಿಗಳು ಕಾಪು ಪಿಎಸ್ಐ ರಾಘವೇಂದ್ರ ಹಾಗೂ ಸಿಬ್ಬಂದಿಗಳು, ಪಡುಬಿದ್ರಿ ಠಾಣಾ ಸಿಬ್ಬಂದಿಗಳು, ಉಡುಪಿ ಸಂಚಾರ ಠಾಣಾ ಪಿಎಸ್ಐ ಅಬ್ದುಲ್ ಖಾದರ್ ಮತ್ತು ಶೇಖರ್ ಹಾಗೂ ತಾಂತ್ರಿಕ ವಿಭಾಗ ಸಿಬ್ಬಂದಿ ಪಾಲ್ಗೊಂಡಿದ್ದರು.

Comments are closed.