ಕುಂದಾಪುರ: ಹೃದಯಾಘಾತದಿಂದ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಮೃತಪಟ್ಟ ಘಟನೆ ಕುಂದಾಪುರದಲ್ಲಿ ನಡೆದಿದೆ. ಕೊಲ್ಲೂರು ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಅಶೋಕ್ ಖಾರ್ವಿ (42) ಮೃತಪಟ್ಟ ದುರ್ದೈವಿ.
ಕಳೆದ ಒಂದೂವರೆ ವರ್ಷಗಳಿಂದ ಕೊಲ್ಲೂರು ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅಶೋಕ್ ಅವರು ಮೂಲತಃ ಗಂಗೊಳ್ಳಿ ನಿವಾಸಿಯಾಗಿದ್ದಾರೆ. ಇತ್ತೀಚೆಗೆ ನಾಲ್ಕು ತಿಂಗಳುಗಳಿಂದ ಕುಂದಾಪುರದ ಪೊಲೀಸ್ ಕ್ವಾಟ್ರಸ್ನಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಿದ್ದ ಅಶೋಕ್ ಅವರು ಮಂಗಳವಾರ ಸಂಜೆ ಕರ್ತವ್ಯ ಮುಗಿಸಿ ಕ್ವಾಟ್ರಸ್ಗೆ ಬಂದಿದ್ದು ಅವರಿಗೆ ಸಣ್ಣ ಪ್ರಮಾಣದಲ್ಲಿ ಎದೆನೋವು ಕಾಣಿಸಿಕೊಂಡಿತ್ತು, ಬಳಿಕ ಊಟಮುಗಿಸಿ ಅಶೋಕ್ ಮಲಗಿದ್ದು ಬೆಳಿಗ್ಗೆನ ಜಾವದ ಸುಮಾರಿಗೆ ಎದೆನೋವು ಉಲ್ಬಣಗೊಂಡ ಕಾರಣ ಅವರ ಪತ್ನಿ ಸುಮಿತ್ರಾ ಹಾಗೂ ಪಕ್ಕದ ಕ್ವಾಟ್ರಸ್ನಲ್ಲಿರುವ ಇನ್ನೋರ್ವ ಪೊಲೀಸರ ನೆರವಿನಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಕೂಡ ಅಶೋಕ ಅವರು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಮೃತ ಅಶೋಕ್ ಅವರು ಇಪ್ಪತ್ತು ವರ್ಷಗಳಿಂದ ಪೊಲೀಸ್ ಸೇವೆಯಲ್ಲಿದ್ದು ಉಡುಪಿ ಜಿಲ್ಲಾ ಅಪರಾಧ ಪತ್ತೆದಳ ವಿಭಾಗದಲ್ಲಿಯ್ತೂ ಸಕ್ರೀಯರಾಗಿ ಕಾರ್ಯನಿರ್ವಹಿಸಿದ್ದರು. ಮಂಗಳವಾರ ಉಡುಪಿಯಲ್ಲಿ ನಡೆದ ಪೊಲೀಸರ ಕ್ರೀಡಾಕೂಟದಲ್ಲಿಯೂ ಭಾಗವಹಿಸಿ ಬಂದಿದ್ದರು ಎನ್ನಲಾಗಿದೆ. ಮೃತರ ಅಂತಿಮ ನಮನ ಸಕಲ ಸರಕಾರಿ ಗೌರವಗಳೊಂದಿಗೆ ಕುಂದಾಪುರ ಪೊಲೀಸ್ ಠಾಣೆಯ ಆವರಣದಲ್ಲಿ ಇಂದು ಮಧ್ಯಾಹ್ನ ನಡೆದಿದ್ದು ಉಡುಪಿ ಜಿಲ್ಲಾ ಎಸ್ಪಿ ಕೆ.ಟಿ. ಬಾಲಕೃಷ್ಣ ಅವರ ಅನುಪಸ್ಥಿತಿಯಿತ್ತು. ವಿವಿಧ ಠಾಣೆಯ ಉಪನಿರೀಕ್ಷಕರು, ವೃತ್ತನಿರೀಕ್ಷರು, ಸಿಬ್ಬಂದಿಗಳು ಆಗಮಿಸಿ ಅಶೋಕ್ ಅವರ ಅಂತಿಮ ದರ್ಶನ ಪಡೆದರು. ಮಧ್ಯಾಹ್ನದ ಬಳಿಕ ಗಂಗೊಳ್ಳಿಯಲ್ಲಿ ಇವರ ಅಂತ್ಯಸಂಸ್ಕಾರ ನಡೆಯಲಿದೆ ಎನ್ನಲಾಗಿದೆ.
Comments are closed.