ಮಂಗಳೂರು,ಅ.18: ಪಿಯುಸಿಎಲ್(ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿ)ನ 40ನೇ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ‘ದೇಶದ್ರೋಹ ಕಾನೂನು ಸರಕಾರದಿಂದ ಬಳಕೆ, ದುರ್ಬಳಕೆ’ ವಿಚಾರ ಸಂಕಿರಣ ಸೋಮವಾರ ನಗರದ ಬಲ್ಮಠ ಸಹೋದಯ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಣಿಪಾಲ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ವರದೇಶ ಹಿರೇಗಂಗೆ ಅವರು ಮಾತನಾಡಿ, ದೇಶ ದ್ರೋಹದ ಕಾನೂನು ದೇಶದಲ್ಲಿ ಬಳಕೆಯಾಗಿರುವುದಕ್ಕಿಂತ ಹೆಚ್ಚು ದುರ್ಬಳಕೆಯಾಗುತ್ತಿದೆ. ಈ ದೇಶದ ಮೇಲೆ ನಿಯಂತ್ರಣ ಸಾಧಿಸಲು ಬ್ರಿಟೀಷರು ದೇಶ ದ್ರೋಹ ಕಾನೂನು ಜಾರಿ ತಂದರು.ಸ್ವಾತಂತ್ರ ಹೋರಾಟದ ಮುಂಚೂಣಿಯಲ್ಲಿದ್ದ ಬಾಲಗಂಗಾಧರ ತಿಲಕ್, ಗಾಂಧೀಜಿ, ಅರವಿಂದ ಘೋಷ್ರ ಮೇಲೆ ಬ್ರಿಟೀಷರು ದೇಶದ್ರೋಹದ ಕಾನೂನನ್ನು ಹಾಕಿದ್ದಾರೆ.ಆಗ ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇರಲಿಲ್ಲ. ಆದರೆ ಈಗ ಪ್ರಜಾಪ್ರಭುತ್ವದಲ್ಲಿ ಸರಕಾರ ಎಡವಿದಾಗ ಸರಕಾರದ ವಿರುದ್ಧ ಧ್ವನಿ ಎತ್ತಿದರೆ ಅದು ಹೇಗೆ ದೇಶ ದ್ರೋಹವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಇನ್ನೋರ್ವ ಅತಿಥಿ ದಕ್ಷಿಣ ಕನ್ನಡ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.ಪಿ.ಚೆಂಗಪ್ಪ ಅವರು ಪೊಲೀಸ್ ದೌರ್ಜನ್ಯಕ್ಕೆ ಅಸುನೀಗಿದ ಪಿಯುಸಿಎಲ್ ಮಾಜಿ ಅಧ್ಯಕ್ಷ ಡೇವಿಡ್ ಡಿಸೋಜಾರ ಭಾವಚಿತ್ರ ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ದೇಶದ್ರೋಹ ಕಾನೂನನ್ನು ಪ್ರಯೋಗಿಸುವುದರಿಂದ ಜನತೆಯ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗುತ್ತಿದೆ. ಹಾಗಾಗಿ ದೇಶದ್ರೋಹ ಕಾನೂನು, ಮರಣ ದಂಡನೆ, ಬಾಡಿಗೆ ತಾಯ್ತನ ಕಾನೂನುಗಳ ಬಗ್ಗೆ ದೇಶದಲ್ಲಿ ಗಂಭೀರ ಚರ್ಚೆ ನಡೆಯಬೇಕು.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೂಲಭೂತ ಹಕ್ಕಾದ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಧಕ್ಕೆಯಾಗದಂತೆ ಇರಬೇಕಾದರೆ ಭಾರತೀಯ ದಂಡ ಸಂಹಿತೆ 124(ಎ) (ದೇಶದ್ರೋಹ ಕಾನೂನು) ರದ್ದಾಗಬೇಕು ಎಂದು ಹೇಳಿದರು.
ದೇಶದ್ರೋಹದ ಕಾನೂನಿನ ಅಗತ್ಯ ಇಲ್ಲ ಎಂದು ಹಲವು ತೀರ್ಪುಗಳು ಬಂದರೂ ಕೆಲವು ತೀರ್ಪುಗಳು ಕಾನೂನಿನ ಬಗ್ಗೆ ದ್ವಂದ್ವ ನಿಲುವನ್ನು ಪ್ರಕಟಿಸಿವೆ. ಕನ್ನಯ್ಯ ಕುಮಾರ್ ಪ್ರಕರಣದಲ್ಲಿ ಆತ ದೇಶದ್ರೋಹದ ಘೋಷಣೆ ಕೂಗದಿದ್ದರೂ, ಅದೇ ಆರೋಪದಲ್ಲಿ ಆತನನ್ನು ಬಂಧಿಸಲಾಯಿತು. ಇದೇ ರೀತಿ ರೋಹಿತ್ ವೇಮುಲನಿಗೂ ಆಗಿದೆ. ದೇಶದ್ರೋಹದ ಕಾನೂನನ್ನು ರಾಜಕೀಯ ಆಡಳಿತಗಳು ತಮ್ಮ ಮೂಗಿನ ನೇರಕ್ಕೆ ತಕ್ಕಂತೆ ಬಳಕೆ ಮಾಡುತ್ತಿವೆ ಎಂದು ಅವರು ಆರೋಪಿಸಿದರು.
ದೇಶದಲ್ಲಿ ಶೇ. 60 ಮಂದಿಗೆ ಕಾನೂನುಗಳ ಬಗ್ಗೆ ಅರಿವು ಇಲ್ಲ. ನಮ್ಮ ಸಂವಿಧಾನವು ಮಾನವ ಹಕ್ಕುಗಳ ಬಗ್ಗೆ ಹೆಚ್ಚಿನ ಒತ್ತು ನೀಡಿದೆ. ಆದರೆ ಅದರ ಸರಿಯಾದ ಬಳಕೆ ಆಗುತ್ತಿಲ್ಲ. ದೇಶದ ಹಾಗೂ ಜನರ ಅಭಿವೃದ್ಧಿಗೆ ಪೂರಕವಾದ ಕಾನೂನುಗಳಿರಬೇಕು ಹೊರತು, ಜನರ ಹಕ್ಕನ್ನು ಕಸಿದುಕೊಳ್ಳುವ ಕಾನೂನಿನ ಅಗತ್ಯವಿಲ್ಲ. ಈ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸಬೇಕಾಗಿದೆ ಎಂದು ಚಂಗಪ್ಪ ತಿಳಿಸಿದರು.
ಪಿಯುಸಿಎಲ್ ಸಂಘಟನೆಯ ರಾಷ್ಟ್ರೀಯ ಉಪಾಧ್ಯಕ್ಷ ಪಿ.ಬಿ.ಡೇಸಾ ಜಿಲ್ಲೆಯಲ್ಲಿ ಪಿಯುಸಿಎಲ್ ಸಂಘಟನೆ ಬೆಳೆದು ಬಂದ ಬಗ್ಗೆ ಹಾಗೂ ಹೋರಾಟದ ಬಗ್ಗೆ ವಿವರಿಸಿದರು. ಸಮಾರಂಭದಲ್ಲಿ ಪಿಯುಸಿಎಲ್ ಜಿಲ್ಲಾಧ್ಯಕ್ಷ ಎಂ.ಕಬೀರ್, ಕರಾವಳಿ ಅಲೆ ಪತ್ರಿಕೆಯ ಸಂಪಾದಕ ಬಿ.ವಿ.ಸೀತಾರಾಂ ಮತ್ತಿತರರು ಉಪಸ್ಥಿತರಿದ್ದರು.
Comments are closed.