ಉಡುಪಿ: ಬಹುಕೋಟಿ ಉದ್ಯಮಿ, ಉಡುಪಿ ಮೂಲದ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಕಸ್ಟಡಿಯಲ್ಲಿದ್ದ ಪ್ರಮುಖ ಆರೋಪಿಗಳಾದ ಭಾಸ್ಕರ ಶೆಟ್ಟಿ ಪತ್ನಿ ರಾಜೇಶ್ವರಿ ಶೆಟ್ಟಿ (48), ಪುತ್ರ ನವನೀತ್ ಬಿ. ಶೆಟ್ಟಿ (24) ಮತ್ತು ಸೋ ಕಾಲ್ಡ್ ಜ್ಯೋತಿಷಿ ನಿರಂಜನ ಭಟ್ (26) ನನ್ನು ಮಂಗಳವಾರ ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಆರೋಪಿಗಳಿಗೆ 9 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ನವನೀತ್, ನಿರಂಜನ್ ಹಿರಿಯಡಕ ಜೈಲಿಗೆ..
ಪ್ರಕರಣದ ಆರೋಪಿಗಳಾದ ನವನೀತ್ ಶೆಟ್ಟಿ ಮತ್ತು ನಿರಂಜನನನ್ನು ಉಡುಪಿಯ ಹಿರಿಯಡಕದಲ್ಲಿರುವ ಸಬ್ಜೈಲಿಗೆ ಕರೆದೊಯ್ಯಲಾಯಿತು. ಹಿರಿಯಡಕ ಜೈಲಿನಲ್ಲಿ ಮಹಿಳಾ ಬಂಧಿಖಾನೆ ಇಲ್ಲದಿರುವುದರಿಂದ ರಾಜೇಶ್ವರಿಯನ್ನು ಮಂಗಳೂರಿನ ಸಬ್ ಜೈಲಿಗೆ ಕರೆದೊಯ್ಯಲಾಯಿತು. ಸಾಕ್ಷ್ಯನಾಶದ ಆರೋಪದಡಿಯಲ್ಲಿ ನಿರಂಜನನ ತಂದೆ ಶ್ರೀನಿವಾಸ ಭಟ್ (56) ಮತ್ತು ಕಾರು ಚಾಲಕ ರಾಘು ಯಾನೆ ರಾಘವೇಂದ್ರನನ್ನು (25) ಆ. 11ರಂದು ಕೋರ್ಟಿಗೆ ಹಾಜರುಪಡಿಸಲಾಗಿದ್ದು, ಅವರು ಹಿರಿಯಡಕ ಸಬ್ಜೈಲಿನಲ್ಲಿದ್ದಾರೆ. ನಾಲ್ವರನ್ನೂ ಆಗಸ್ಟ್ 24ಕ್ಕೆ ಪುನಃ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿದೆ.
ನಗುತ್ತಿದ್ದ ನಿರಂಜನ್ ಭಟ್ಟ..!
ಮಂಗಳವಾರ ಸಂಜೆ ಸುಮಾರಿಗೆ ಆರೋಪಿಗಳನ್ನು ಕರೆತರುವ ಪ್ರಕ್ರಿಯೆ ನಡೆಯಿತು… ಹೊಯ್ಸಳ ಪೊಲೀಸ್ ವಾಹನದಲ್ಲಿ ಮೂವರನ್ನು ಕರೆತರಲಾಗಿದ್ದು ಜನಜಂಗುಳಿಯಿದ್ದ ಕಾರಣ ಶೀಘ್ರವೇ ಮೂವರನ್ನು ಕೋರ್ಟ್ ಒಳಗೆ ಕರೆದೊಯ್ಯಲಾಯಿತು. ನ್ಯಾಯಾಲಯದ ಒಳಗಿನ ಎಲ್ಲಾ ಪ್ರಕ್ರಿಯೆಗಳು ನಡೆದು ನ್ಯಾಯಾಂಗ ಬಂಧನ ವಿಧಿಸಿ ಆರೋಪಿಗಳನ್ನು ಹೊರಕರೆತರುವಾಗ ಆರೋಪಿ ನಿರಂಜನ್ ಭಟ್ಟ ನಗುಮುಖದಲ್ಲಿದ್ದ. ಆತನ ಮುಖದಲ್ಲಿ ಯಾವ ಪಾಪ ಪ್ರಜ್ನೆ ಕಾಣುತ್ತಿರಲಿಲ್ಲ. ಇನ್ನು ರಾಜೇಶ್ವರಿ ಮುಖ ಬಳಲಿದಂತಿದ್ದು ಸಂಪೂರ್ಣ ಬಾಡಿತ್ತು. ಉಳಿದಂತೆ ಭಾಸ್ಕರ್ ಶೆಟ್ಟಿ ಪುತ್ರ ನವನೀತ್ ಗಂಭೀರವಾಗಿದ್ದ.
ತನಿಖಾಧಿಕಾರಿ ಕಾರ್ಕಳ ಎಎಸ್ಪಿ ಡಾ| ಸುಮನಾ ಡಿ.ಪಿ.,ಡಿವೈಎಸ್ಪಿ ಎಸ್.ಜೆ. ಕುಮಾರಸ್ವಾಮಿ, ಡಿಸಿಐಬಿ ಇನ್ಸ್ಪೆಕ್ಟರ್ ಸಂಪತ್ ಕುಮಾರ್, ಉಡುಪಿ ಇನ್ಸ್ಪೆಕ್ಟರ್ ಟಿ.ಆರ್. ಜೈಶಂಕರ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.
Comments are closed.