__ಸತೀಶ್ ಕಾಪಿಕಾಡ್.
ಮಂಗಳೂರು, ಮೇ.11 : ಅಂತು ಇಂತು ಮಂಗಳೂರಿನಲ್ಲಿ ಮಳೆ ಬಂದಿದೆ. ನೀರಿನ ಹಾಹಾಕಾರದ ಜೊತೆಗೆ ಬಿಸಿಲಿನ ಬೇಗೆಗೆ ತತ್ತರಿಸಿದ ಮಂಗಳೂರಿನ ಜನತೆಗೆ ಬರೀ 10 ನಿಮಿಷ ಮಳೆಯ ಸಿಂಚನಗೈದ ಮಳೆರಾಯ ಇದ್ದಕಿದ್ದಂತೆ ಮಾಯವಾದ.
ಮಂಗಳೂರು ನಗರ ಹಾಗೂ ದ.ಕ.ಜಿಲ್ಲೆಯ ವಿಟ್ಲ ಸೇರಿದಂತೆ ಕೆಲವೊಂದು ಕಡೆಗಳಲ್ಲಿ ಬಾರೀ ಮಳೆಯಾಗಿದ್ದು, ಯಾವೂದೇ ನಿರೀಕ್ಷೆಯಿಲ್ಲದೇ ಏಕಾಏಕಿ ಸುರಿದ ಮಳೆಯಿಂದ ಸಾರ್ವಜನಿಕರ ಜನಜೀವನದಲ್ಲಿ ಅಲ್ಪಸ್ವಲ್ಪ ವ್ಯತ್ಯಾಯ ಉಂಟಾಗಿದೆ. ಮಳೆಯ ಮುನ್ಸೂಚನೆಯಿಲ್ಲದೇ ಇದ್ದುದ್ದರಿಂದ ಯಾವೂದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ಛತ್ರಿ ಅಥಾವ ರೈನ್ಕೋಟ್ ಇಲ್ಲದೇ ತಮ್ಮ ತಮ್ಮ ಕರ್ತವ್ಯಕ್ಕೆ ತೆರಳಿದ ನಾಗರೀಕರು ಸ್ವಲ್ಪ ಹೊತ್ತು ಅಂಗಡಿ ಮುಂಗಟ್ಟುಗಳಲ್ಲಿ ಆಶ್ರಯ ಪಡೆಯುವ ಅನಿವಾರ್ಯತೆ ಉಂಟಾಯಿತು.
ಇಂದು ಸಂಜೆ ಐದು ಗಂಟೆಯ ನಂತರ ಏಕಾಏಕಿ ಮೋಡದ ಕತ್ತಲು ಆವರಿಸಿತು. ಮೊದಲೇ ಬಿಸಿಲಿನ ಬೇಗೆಯಿಂದ ಕುದಿಯುತ್ತಿದ್ದ ಮೈ… ಜೊತೆಗೆ ಕುಡಿಯುವ ನೀರಿಗೂ ಪರಿತಪಿಸುವ ಮನಸು… ಇವೆಲ್ಲದಕ್ಕೂ ಉತ್ತರವೆಂಬಂತೆ ಇಂದು ಸಂಜೆ ಬಾನಂಗಳದಲ್ಲಿ ಮೂಡಿದ ಮೋಡದ ಚಿತ್ತಾರ ಕಂಡು ಚಿಂತಾಕ್ರಾಂತರಾಗಿದ್ದ ಜನರ ಮುಖದಲ್ಲಿ ಸಂತಸದ ಛಾಯೆ…. ಎಲ್ಲರ ಬಾಯಲ್ಲೂ ಒಂದೇ ಮಾತು ಈಗ ಖಂಡಿತ ಮಳೆ ಬರುತ್ತದೆ ಎಂದು… ಜನರ ನಂಬಿಕೆಯನ್ನು ಸುಳ್ಳು ಮಾಡದೇ ೫.೪೫ರ ಸುಮಾರಿಗೆ ಮಳೆರಾಯ ಬಂದೇ ಬಿಟ್ಟ… ಸಾದಾರಣವಾಗಿ ಸುರಿದ ಮಳೆ ಬಿರುಸು ಪಡೆಯುತ್ತಿದ್ದಂತೆ ನಿಂತೇ ಬಿಟ್ಟಿತ್ತು… ಬರೀ ಹತ್ತು ನಿಮಿಷ ಕಾಲ ಜನರ ಮೈ,ಮನವನ್ನು ತಂಪಾಗಿಸಿದ ಮಳೆರಾಯ ಬಂದಷ್ಟೇ ವೇಗದಲ್ಲಿ ಮರೆಯಾದ… ಖುಷಿಯಿಂದ ಆಕಾಶವನ್ನೇ ನೋಡುತ್ತಿದ್ದ ಜನರ ಪಾಲಿಗೆ ಮತ್ತೆ ನೋವಿನ ಗೆರೆಯಾದ… ಮತ್ತೆ ಮಳೆಗಾಗಿ ಕಾಯುವ ಸರದಿ ನಮ್ಮದು….
ಭಾರೀ ಗಾಳಿಮಳೆಗೆ ಮರಗಳು, ವಿದ್ಯುತ್ ಕಂಬಗಳು ಧರಾಶಾಯಿ: ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿ
ಪುತ್ತೂರು ತಾಲೂಕಿನ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಲ್ಲಾಜೆಯಲ್ಲಿ ಭಾರೀ ಗಾಳಿಮಳೆಗೆ 30ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರಾಶಾಯಿಯಾಗಿರುವುದು ವರದಿಯಾಗಿದೆ.ಉಳಿದಂತೆ ಬಂಟ್ವಾಳ ತಾಲೂಕಿನ ಕಲ್ಲಡ್ಕ, ವಿಟ್ಲ, ಸೂರಿಕುಮೇರು, ಮಾಣಿ, ಬುಡೋಳಿ ಹೆಚ್ಚಿನ ಕಡೆಗಳಲ್ಲಿ ಸಾಧಾರಣ ಮಳೆಯಾಗಿದೆ.ಪುತ್ತೂರು ತಾಲೂಕಿನ ಬಹುತೇಕ ಕಡೆಗಳಲ್ಲಿ ಸಂಜೆಯ ವೇಳೆ ಮಳೆ ಸುರಿದಿದೆ. ಮಳೆಯೊಂದಿಗೆ ಬೀಸಿದ ಬಿರುಗಾಳಿಗೆ ಪುತ್ತೂರು ಕೋರ್ಟ್ ಆವರಣದಲ್ಲಿ ಭಾರೀ ಮರವೊಂದು ಉರುಳಿಬಿದ್ದ ಪರಿಣಾಮ ಕಾರೊಂದಕ್ಕೆ ಹಾನಿಯಾಗಿದೆ. ಪುತ್ತೂರಿನಲ್ಲಿ ನಿನ್ನೆ ತಡರಾತ್ರಿಯೂ ಸಾಧಾರಣ ಮಳೆಯಾಗಿದೆ.
ಭಾರೀ ಗಾಳಿಮಳೆಗೆ ಸುಮಾರು 30ಕ್ಕಿಂತಲೂ ಅಧಿಕ ವಿದ್ಯುತ್ ಕಂಬಗಳು ಹಾಗೂ 10ಕ್ಕೂ ಅಧಿಕ ಮರಗಳು ರಸ್ತೆಗೆ ಅಡ್ಡವಾಗಿ ಉರುಳಿಬಿದ್ದ ಘಟನೆ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಲ್ಲಾಜೆ ಎಂಬಲ್ಲಿ ಬುಧವಾರ ಸಂಜೆ ನಡೆದಿದೆ. ಬಹುತೇಕ ವಿದ್ಯುತ್ ಕಂಬಗಳು ಹಾಗೂ ಮರಗಳು ರಸ್ತೆಗೆ ಅಡ್ಡವಾಗಿ ಉರುಳಿಬಿದ್ದಿದ್ದರಿಂದ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಯಾಗಿತ್ತು. ವಿದ್ಯುತ್ ಕಂಬಗಳಿಗೆ ಹಾನಿಯಾಗಿರುವುದರಿಂದ ಪರಿಸರದಲ್ಲಿ ವಿದ್ಯುತ್ ಕೈಕೊಟ್ಟಿದೆ.
ಕೊಯ್ಲ, ರಾಮಕುಂಜ, ಹಳೆನೇರಿಂಕಿ, ಆಲಂಕಾರು, ಪೆರಾಬೆ, ಬಿಳಿನೆಲೆ, ಕೈಕಂಬ, ಮರ್ದಾಳ, ಕಡಬ, ಚಾರ್ವಾಕ, ಕುಂತೂರು, ಕೋಡಿಂಬಾಳ, ಇಚಿಲಂಪಾಡಿ, ಬಿಳಿನೆಲೆ, ನೆಟ್ಟಣ, ಕೈಕಂಬ, ಸುಂಕದಕಟ್ಟೆ ಸೇರಿದಂತೆ ಮೊದಲಾದೆಡೆ ಸುಮಾರು 2 ಗಂಟೆಗಳ ಕಾಲ ಗುಡುಗು ಸಹಿತ ಗಾಳಿಮಳೆ ಸುರಿದಿದೆ. ಕೊಯ್ಲ ಗ್ರಾಮದ ಸಬಳೂರು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ 10ಕ್ಕೂ ಹೆಚ್ಚು ಹೆಂಚುಗಳು ಗಾಳಿಗೆ ಹಾರಿ ಹೋಗಿವೆ. ಆಲಂಕಾರಿನ ಕಜೆ ಸದಾನಂದ ಎಂಬವರ ದನದ ಹಟ್ಟಿಯ ಛಾವಣಿ ಕುಸಿದಿದ್ದು, ಅಪಾರ ನಷ್ಟವಾಗಿದೆ. ಕೊಯ್ಲ, ಆಲಂಕಾರು, ಕುಂತೂರು, ಕೋಡಿಂಬಾಳ, ಇಚಿಲಂಪಾಡಿ, ಬಿಳಿನೆಲೆ, ನೆಟ್ಟಣ, ಕೈಕಂಬ, ಸುಂಕದಕಟ್ಟೆ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿದೆ. ಕಡಬದಲ್ಲಿ ಗುಡುಗು-ಮಿಂಚಿನ ಆರ್ಭಟದೊಂದಿಗೆ ಸಾಧಾರಣ ಮಳೆಯಾಗಿದೆ. ಆತೂರು ಸಮೀಪದ ಕುಂಡಾಜೆಯಲ್ಲಿ ಮೂರು ಮರಗಳು ಧರಾಶಾಯಿಯಾಗಿವೆ. ಕಡಬ ಪೇಟೆ ಸೇರಿದಂತೆ ಬಹುತೇಕ ಕಡೆ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲಿ ಮಳೆ ನೀರು ಹರಿದು ಸಂಚಾರಕ್ಕೆ ತೊಡಕುಂಟಾಗಿತ್ತು. ಹಲ ವೆಡೆ ಅಡಿಕೆ ಗಿಡಗಳು ಮುರಿದುಬಿದ್ದಿವೆೆ. ವಿದ್ಯುತ್, ದೂರವಾಣಿ, ಅಂತರ್ಜಾಲ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ.