ನವದೆಹಲಿ (ಪಿಟಿಐ): ಸಾಲದ ಸುಳಿಗೆ ಸಿಲುಕಿ ದೇಶ ತೊರೆದಿರುವ ಉದ್ಯಮಿ ವಿಜಯ್ ಮಲ್ಯ ಅವರ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಕೆಯ ಬಳಿಕವೇ ಅವರ ಹಸ್ತಾಂತರ ಪ್ರಕ್ರಿಯೆಯನ್ನು ಭಾರತ ಆರಂಭಿಸಬೇಕಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಬುಧವಾರ ಹೇಳಿದ್ದಾರೆ.
ಮಲ್ಯ ಹಸ್ತಾಂತರ ಸಂಬಂಧ ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ‘ಪಾಸ್ಪೋರ್ಟ್ ರದ್ದುಗೊಳಿಸಿದ ತಕ್ಷಣ ತಂತಾನೇ ಗಡಿಪಾರು ಪ್ರಕ್ರಿಯೆ ಶುರುವಾಗುವುದಿಲ್ಲ ಎಂದು ಬ್ರಿಟನ್ ಹೇಳಿದೆ’ ಎಂದರು.
ಅಲ್ಲದೇ, ದೋಷಾರೋಪ ಸಲ್ಲಿಕೆಯ ಬಳಿಕವೇ ಮಲ್ಯ ಹಸ್ತಾಂತರಕ್ಕೆ ಭಾರತ ಮನವಿ ಸಲ್ಲಿಸಬೇಕಿದೆ ಎಂದೂ ಅವರು ತಿಳಿಸಿದರು.
ದೇಶ ಬಿಟ್ಟು ಬ್ರಿಟನ್ನಿನಲ್ಲಿ ತಂಗಿದ್ದಾರೆ ಎನ್ನಲಾದ ಮಲ್ಯ ಅವರ ಪಾಸ್ಪೋರ್ಟ್ನ್ನು ಭಾರತ ಈಗಾಗಲೇ ರದ್ದುಪಡಿಸಿದೆ. ಜತೆಗೆ ಹಣಲೇವಾದೇವಿ ಪ್ರಕರಣ ಸಂಬಂಧ ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಲ್ಲಿದೆ.