ಉಳ್ಳಾಲ : ತೊಕ್ಕೊಟ್ಟಿನಲ್ಲಿರುವ ಸ್ಮಾರ್ಟ್ ಸಿಟಿ ವಾಣಿಜ್ಯ ಸಂಕೀರ್ಣದ ಕಚೇರಿಯ ಗ್ಲಾಸ್ ಧ್ವಂಸಗೊಳಿಸಿ ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಅರೋಪಿ ನೌಫಾಲ್ನನ್ನು ಉಳ್ಳಾಲ ಪೊಲೀಸರು ಸೋಮವಾರ ಬಂಧಿಸಿದ್ದು ಘಟನೆಗೆ ಸಂಬಂಸಿದಂತೆ ನಾಲ್ವರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದಂತಾಗಿದೆ.
ಸ್ಮಾರ್ಟ್ ಸಿಟಿಯ ಕಚೇರಿಯನ್ನು ಸೆ. 30ರಂದು ಬೈಕ್ನಲ್ಲಿ ಬಂದಿದ್ದ ತಂಡವೊಂದು ಧ್ವಂಸಗೊಳಿಸಿ ಪರಾರಿಯಾಗಿದ್ದರು. ಹಪ್ತಾ ನೀಡದ ಹಿನ್ನಲೆಯಲ್ಲಿ ದುಬಾೖಯಲ್ಲಿ ನೆಲೆಸಿರುವ ಆಸYರ್ ಆಲಿ ಎಂಬವನ ಸಹಚರರು ಈ ಕೃತ್ಯ ನಡೆಸಿದ್ದರು. ಘಟನೆಗೆ ಸಂಬಂಧಿಸಿದಂತೆ ಕಾವೂರು ಶಾಂತಿ ನಗರದ ನಿವಾಸಿಗಳಾದ ಇಕ್ಬಾಲ್, ಹಕೀಂ, ಇಶಾಂನನನ್ನು ಈ ಹಿಂದೆಯೇ ಪೊಲೀಸರು ಬಂಧಿಸಿದ್ದರು. ತಲೆಮರೆಸಿಕೊಂಡಿದ್ದ ಕುಂಜತ್ತಬೈಲ್ ಮುರ ಅಂಬಿಕಾ ನಗರದ ನಿವಾಸಿ ನೌಫಾಲ್(20)ನನ್ನು ಸೋಮವಾರ ಬಂಧಿಸುವುದರೊಂದಿಗೆ ಎಲ್ಲಾ ಆರೋಪಿಗಳನ್ನು ಬಂಧಿಸಿದಂತಾಗಿದೆ.
ಸ್ಮಾರ್ಟ್ ಸಿಟಿಯ ಬಿಲ್ಡರ್ಗಳಿಗೆ ಎರಡು ಕೋಟಿ ಹಪ್ತಾ ನೀಡುವಂತೆ ಅಸ್ಗರ್ ಆಲಿ ಕಟ್ಟಡದ ಇಲೆಕ್ಟ್ರಿಕಲ್ ಕಾಂಟ್ರಾಕ್ಟರ್ ಅಬ್ದುಲ್ ಖಾದರ್ ಅವರ ಮೊಬೈಲ್ಗೆ ಈ ಕರೆ ಮಾಡುತ್ತಿದ್ದ ಎನ್ನಲಾಗಿದೆ. ಸೆ. 30ರಂದು ಸಂಜೆ ಸ್ಮಾರ್ಟ್ ಸಿಟಿಯ ಕಚೇರಿಯನ್ನು ತನ್ನ ಸಹಚರರಿಂದ ಧ್ವಂಸಗೊಳಿಸಿದ ಬಳಿಕ ಇದೇ ಅಸ್ಗರ್ ಆಲಿ ಎನ್ನುವಾತ ಅಬ್ದುಲ್ ಖಾದರ್ ಅವರಿಗೆ ದೂರವಾಣಿ ಕರೆ ಮಾಡಿ ಈಗ ಗ್ಲಾಸ್ ಹೊಡೆದಿದ್ದಾರೆ ಹಣ ನೀಡದಿದ್ದರೆ ಜೀವ ತೆಗೆಯುವುದಾಗಿ ಬೆದರಿಸಿದ್ದ ಎನ್ನಲಾಗಿದೆ.
ಉಳ್ಳಾಲ ಪೊಲೀಸರು ತನಿಖೆ ನಡೆಸಿ ಘಟನೆಯಲ್ಲಿ ಭಾಗವಹಿಸಿದ್ದ ಎಲ್ಲಾ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಕಮಿಷನರ್ ಆರ್. ಹಿತೇಂದ್ರ, ಎಸಿಪಿ ಪವನ್ ನೆಜ್ಜೂರ್ ಅವರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ಗಳಾದ ಪ್ರಮೋದ್ ಕುಮಾರ್, ಸವಿತ್ರ ತೇಜ, ಎಸ್ಐಗಳಾದ ಭಾರತಿ, ರಾಜೇಂದ್ರ, ಹೆಡ್ ಕಾನ್ಸ್ಟೇಬಲ್ಗಳಾದ ರಾಧಾಕೃಷ್ಣ, ಮಹಮ್ಮದ್, ಮೋಹನ್, ಸಿಬ್ಬಂದಿಗಳಾದ ಕಮಲಾಕ್ಷ, ಲಿಂಗರಾಜ್ ನೀಲಕಂಠ, ಮಹೇಶ್ ಗಟ್ಟಿ, ರಂಜಿತ್ ಮತ್ತು ಸತೀಶ್, ಪ್ರಶಾಂತ್, ಶೋನ್ಶಾ ತನಿಖಾ ತಂಡದಲ್ಲಿ ಭಾಗವಹಿಸಿದ್ದರು.