ಕುಂದಾಪುರ: ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ತಾಲೂಕು ಸಮಿತಿಗಳ ನೇತ್ರತ್ವದಲ್ಲಿ ಬಡ ರೈತರ ಸರಕಾರಿ ಭೂಮಿ ಒತ್ತುವರಿ ತರೆರವು ವಿರೋಧಿ , ಭೂ ಕಂದಾಯ ಹಾಗೂ ಅರಣ್ಯ ಕಾಯಿದೆ ತಿದ್ದುಪಡಿ ತರಲು , ಅಕ್ರಮ ಸಕ್ರಮ ಸಮಿತಿ ಹೆಚ್ಚುವರಿ ರಚಿಸಲು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕುಂದಾಪುರ ತಹಶೀಲ್ದಾರ್ ಕಚೇರಿಯ ಎದುರು ಅನಿರ್ದಿಷ್ಟಾವಧಿ ಸಾಮೂಹಿಕ ಧರಣಿ ಮುಷ್ಕರ ಹೋರಾಟಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಕೆಪಿಆರ್ಎಸ್ ಕಾರ್ಯದರ್ಶಿ ಯು.ಬಸವರಾಜ್ ಸರಕಾರಿ ಹಾಗೂ ಅರಣ್ಯ ಎನ್ನಲಾದ ಜಮೀನಿನಲ್ಲಿ ಹಾಕಿಕೊಂಡ ಗುಡಿಸಲು ಮತ್ತು ಮನೆಗಳ ಹಕ್ಕುಪತ್ರಕ್ಕಾಗಿ ಹಾಗೂ ಸದರಿ ಜಮೀನಿನಲ್ಲಿ ಸಾಗುವಳಿ ನಿರತ ಬಡ ರೈತರ ಭೂಮಿ ಅಕ್ರಮ ಸಕ್ರಮ ಹಕ್ಕುಪತ್ರಕ್ಕಾಗಿ , ಭೂಕಂದಾಯ ಹಾಗೂ ಅರಣ್ಯ ಕಾಯಿದೆ ಸೂಕ್ತ ತಿದ್ದುಪಡಿ ತರಲು ಮತ್ತು ಉಚ್ಚ ನ್ಯಾಯಾಲಯಕ್ಕೆ ನೀಡಿದ ಮುಚ್ಚಳಿಕೆ ಪತ್ರ ಹಾಗೂ ಒಕ್ಕಲೆಬ್ಬಿಸುವ ಆದೇಶವನ್ನು ಹಿಂಪಡೆಯಲು ತಾವು ಒತ್ತಾಯಿಸುತ್ತಿದ್ದೇವೆ. ಆದ್ದರಿಂದ ಬಡ ರೈತರ , ನಿವೇಶನ ರಹಿತರ ಬೇಡಿಕೆಗಳನ್ನು ಈಡೇರಿಸಲು ಕೂಡಲೇ ಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ವಿವಿಧ ನಾಯಕರುಗಳು ಮಾತನಾಡಿ, ಬಗರ್ ಹುಕುಂ ಸಾಗುವಾಳಿದಾರರನ್ನು ರಾಜ್ಯ ಸರಕಾರ , ಭೂ ಒತ್ತುವರಿದಾರರ ಸಾಲಿಗೆ ಸೇರಿಸಬಾರದು, ಅರಣ್ಯ ಪ್ರದೇಶದಲ್ಲಿ ಸಕ್ರಮವಲ್ಲದ ಕೃಷಿ ಚಟುವಟಿಕೆಯನ್ನು ನಡೆಸುತ್ತಾ ಬಂದವರನ್ನು ಎತ್ತಂಗಡಿ ಮಾಡಬಾರದು,ಯಾವುದೇ ದಾಖಲೆಗಳàಲ್ಲದೇ ಅರಣ್ಯ ಪ್ರದೇಶದಲ್ಲಿ ಕೃಷಿ ಸಾಗುವಳಿ ಮಾಡಿಕೊಂಡು ಬಂದಿರುವ 11 ಲಕ್ಷ ರೈತರನ್ನು ಒಕ್ಕೆಲ್ಲೆಬ್ಬಿಸುವ ಆದೇಶವನ್ನು ತಕ್ಷಣ ಹಿಂಪಡೆಯಬೇಕು, ಬಡ ನಿವೇಶನ ರಹಿತ ಅರ್ಜಿದಾರ ಅಂತಿಮ ಪಟ್ಟಿಯನ್ನು ಗ್ರಾಮವಾರು ಸಂಪೂರ್ಣಗೊಳಿಸಿ ಭೂಮಿ ಹಕ್ಕುಪತ್ರ ಮಂಜೂರು ಮಾಡಬೇಕು ಮೊದಲಾದ ಅನೇಕ ಬೇಡಿಕೆಗಳ ಬಗ್ಗೆ ಕ್ರಮತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ (ಎ.ಐ.ಕೆ.ಎಸ್) ಕುಂದಾಪುರ ತಾಲೂಕು ಸಮಿತಿ ಅಧ್ಯಕ್ಷ ದಾಸ ಭಂಡಾರಿ, ಕಾರ್ಯದರ್ಶಿ ಮಹಾಬಲ ವಡೇರಹೋಬಳಿ, ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘ ಕುಂದಾಪುರ ತಾಲೂಕು ಸಮಿತಿ ಅಧ್ಯಕ್ಷ ರಾಜೀವ ಪಡುಕೋಣೆ, ಕಾರ್ಯದರ್ಶಿ ವೆಂಕಟೇಶ ಕೋಣಿ, ಸಮಿತಿಯ ಸದಸ್ಯರು ಹಾಗೂ ಕಾರ್ಮಿಕರು ಉಪಸ್ಥಿತರಿದ್ದರು.