ಬಂಟ್ವಾಳ: ಕಟ್ಟಿ ಹಾಕಿದ್ದ ದನವನ್ನು ಕಳವುಗೈದು ಕಸಾಯಿ ಕಾನೆಗೆ ಅಕ್ರಮವಾಗಿ ಪಿಕಪ್ ನಲ್ಲಿ ಸಾಗಾಟ ಮಾಡುತ್ತಿರುವುದನ್ನು ಬಂಟ್ವಾಳದ ತುಂಬೆ ಜಂಕ್ಷನ್ ನಲ್ಲಿ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಗುರುವಾರ ತಡರಾತ್ರಿ ಪತ್ತೆ ಹಚ್ಚಿ ಬಂಟ್ವಾಳ ನಗರ ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದ್ದು ಈ ಸಂಬಂಧ ಓರ್ವನನ್ನು ಬಂಧಿಸಲಾಗಿದ್ದರೆ ಮೂವರು ಸ್ಥಳದಿಂದ ಪರಾರಿಯಾಗಿದ್ದಾರೆ. ಇದೇ ವೇಳೆ ಬಂಧಿತ ಆರೋಪಿ ಧರ್ಮನಿಂದನೆ ಗೈದಿದ್ದಾರೆಂಬ ಆರೋಪದಲ್ಲಿ ಹಿಂದೂಪರ ಸಂಘಡನೆಯು ಮೂವರ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾನೆ.
ಬಂಧಿತನನ್ನು ಪಿಕಪ್ ಚಾಲಕ ಐವನ್ ಡಿ ಸೋಜ ಎಂದು ಹೆಸರಿಸಲಾಗಿದ್ದು ತಸ್ಲಿಂ,ಬಶೀರ್,ಅಶೋಕ ಎಂಬವರು ಪರಾರಿಯಾದ ಆರೋಪಿಗಳಾಗಿದ್ದಾರೆಂದು ತಿಳಿದು ಬಂದಿದೆ.ವಗ್ಗದಿಂದ ಪಿಕಪ್ ವಾಹನದಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸಲಾಗಿದ್ದು ಈ ಬಗ್ಗೆ ಮಾಹಿತಿ ಪಡೆದ ಹಿಂದೂಪರ ಸಂಘಟನೆಯ ಕಾರ್ಯಕರ್ತರು ತುಂಬೆ ಜಂಕ್ಷನ್ ನಲ್ಲಿ ವಾಹನವನ್ನು ತಡೆದು ಪರಿಶೀಲಿಸಿದಾಗ ೨ದನ ಹಾಗೂ ಮೂರು ಕರುಗಳನ್ನು ಹಿಂಸಾತ್ಮಕವಾಗಿ ತುಂಬಿಸಿರುವುದು ಪತ್ತೆಯಾಗಿದೆ.
ಈ ಸಂದರ್ಭದಲ್ಲಿ ಚಾಲಕನನ್ನು ವಾಹನದಲ್ಲೇ ಬಿಟ್ಟು ಸ್ಥಳದಿಂದ ಇತರ ಮೂವರು ಪರಾರಿಯಾಗಿದ್ದಾರೆ. ಈ ದನಗಳನ್ನು ವಗ್ಗದಿಂದ ಕಳವುಗೈದು ಮಂಗಳೂರಿನ ಕಸಾಯಿಕಾನೆಗೆ ಸಾಗಿಸುತ್ತಿರುವುದನ್ನು ಆರೋಪಿ ಒಪ್ಪಿಕೊಂಡಿದ್ದಾನೆ.ಇದೇವೇಳೆ ಈ ವಾಹನವನ್ನು ಹಿಂಬಾಲಿಸಿಕೊಂಡು ಬಂದ ಅಕ್ರಮ ಜಾನುವಾರು ಸಾಗಾಟಗಾರರ ಪೈಕಿ ಇದ್ದ ಬೈಕೊಂದನ್ನು ಕೂಡಾ ಪಿಕಪ್,ಜಾನುವಾರಿನೊಂದಿಗೆ ಪೊಲೀಸರು ವಶಪಡಿಸಿದ್ದಾರೆ.ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.