ಮಂಗಳೂರು: ರಾಜ್ಯ ಬಂದರುಗಳ ಸಮಗ್ರ ಅಭಿವೃದ್ಧಿಗೆ ಹೊಸ ಬಂದರು ನೀತಿ ಜಾರಿಗೆ ತರಲಾಗಿದ್ದು, ಕರ್ನಾಟಕದ 11 ಕಿರು ಬಂದರುಗಳ ಪೈಕಿ 5 ಬಂದರನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಮಾಡಲು ತೀರ್ಮಾನಿಸಲಾಗಿದೆ ಎಂದು ರಾಜ್ಯ ಬಂದರು ಸಚಿವ ಬಾಬುರಾವ್ ಚಿಂಚನಸೂರ್ ಹೇಳಿದರು.
ಮಂಗಳೂರಿನ ಹಳೆ ಬಂದರು ಇಲಾಖೆಯಲ್ಲಿ ಶುಕ್ರವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಕ್ಷದ್ವೀಪ ಸಮೂಹ ಸಂಸ್ಥೆಯವರಿಗೆ ವ್ಯವಹಾರಕ್ಕಾಗಿ 50 ಕೋಟಿ ರೂ. ಅಂದಾಜು ವೆಚ್ಚದಲ್ಲಿ ‘ಡೆಡಿಕೇಟೆಡ್ ಜೆಟ್ಟಿ’ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ. ಹೊನ್ನಾವರ ಪೋರ್ಟ್ ಲಿ. ನಿರ್ಮಾಣಕ್ಕೆ ಹೈದ್ರಾಬಾದ್ ಸಂಸ್ಥೆಯವರಿಗೆ 5 ಮಿಲಿಯನ್ ಟನ್ ಸರಕು ಸಾಮರ್ಥಯದ ವ್ಯವಹಾರಗಳಿಗೆ 511.30 ಕೋಟಿ. ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಲು ಬಂದರು ಭೂಮಿ ಗುತ್ತಿಗೆ ನೀಡಲಾಗಿದೆ ಎಂದರು.
ಮಂಕಿಯಲ್ಲಿ ಮೆ| ರೇಣುಕಾ ಶುಗರ್ ಬೆಳಗಾಂ ಅವರಿಗೆ 46 ಕೋಟಿ ರೂ. ವೆಚ್ಚದಲ್ಲಿ 2 ಮಿಲಿಯನ್ ಟನ್ ಸರಕು ಸಾಮರ್ಥಯದ ಜೆಟ್ಟಿ ಅಭಿವೃದ್ಧಿಗೆ 75,000 ಚ.ಮೀ. ಭೂಮಿ ನೀಡಲಾಗಿದೆ. ಪಾವಿನಕುರ್ವೆ ಬಸವರಾಜ ದುರ್ಗ ದ್ವೀಪದಲ್ಲಿ ಕ್ಯಾಪ್ಟಿವ್ ಬಂದರು ನಿರ್ಮಾಣ ಪ್ರಸ್ತಾವನೆ ಹಂತದಲ್ಲಿದ್ದು, ತದಡಿ ಬಂದರನ್ನು ಅಭಿವೃದ್ಧಿಪಡಿಸುವ ಸಲುವಾಗಿ ಈಗಾಗಲೇ ಅದಾನಿ ಲಿ. ಅವರ ಜತೆಗೆ ಚರ್ಚಿಸಲಾಗಿದೆ. ಬೇಲಿಕೇರಿ ಬಂದರನ್ನು ಖಾಸಗಿಯವರಾದ ಮೆ| ಆಶ್ರಯಾ ಲಿ. ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸುವ ಸಲುವಾಗಿ ಮುಖ್ಯಮಂತ್ರಿ ಜತೆ ಚರ್ಚಿಸಲಾಗಿದೆ. ಪಾವಿನಕುರ್ವೆ ಬಸವರಾಜ ದುರ್ಗ ದ್ವೀಪದಲ್ಲಿ ಕ್ಯಾಪ್ಟಿವ್ ಬಂದರು ನಿರ್ಮಾಣ ಪ್ರಸ್ತಾವನೆ ಹಂತದಲ್ಲಿದೆ ಎಂದು ಅವರು ಹೇಳಿದರು.
ಕಡಲ್ಕೊರೆತ ತಡೆಗಟ್ಟಲು ಎಡಿಬಿ ಯೋಜನೆಯಡಿ ಒಟ್ಟು 8 ವರ್ಷಗಳಲ್ಲಿ 911 ಕೋಟಿ ರೂ. ವೆಚ್ಚ ಮಾಡಲು ತೀರ್ಮಾನಿಸಲಾಗಿದ್ದು, ಉಳ್ಳಾಲ ಯೋಜನೆ 4 ವರ್ಷಗಳ (2011-15) ಅವಧಿ ಹೊಂದಿದೆ. ಉಳ್ಳಾಲ ಉಪಯೋಜನೆಗಳ ಒಟ್ಟು ಮೊತ್ತ 223.32 ಕೋಟಿ ರೂ.ಗಳಾಗಿವೆ ಎಂದರು.
2014-15ನೇ ಸಾಲಿನಲ್ಲಿ ಬಂದರು ಇಲಾಖೆಯ ಆಯ-ವ್ಯಯದಲ್ಲಿ ಒಟ್ಟು 122.40 ಕೋಟಿ ರೂ. ಅಂದಾಜಿನಲ್ಲಿ ವಿವಿಧ ಕಾಮಗಾರಿಗಳಾದ ಟಗ್, 200 ಘ.ಮೀ. ಸಾಮರ್ಥಯದ ಡ್ರೆಜ್ಜಿಂಗ್, ವಾಣಿಜ್ಯ ಧಕ್ಕೆ ವಿಸ್ತರಣೆ/ಅಭಿವೃದ್ಧಿ, ಬ್ರೇಕ್ವಾಟರ್ ನಿರ್ಮಾಣದ ಪ್ರಸ್ತಾವನೆಗಳಿವೆ. 2014-15ನೇ ಸಾಲಿಗೆ 36.63 ಕೋಟಿ ರೂ. ಅನುದಾನ ಕಲ್ಪಿಸಲಾಗಿದೆ. ಇದರಲ್ಲಿ ಕಾರವಾರ ಜಿಲ್ಲೆಗೆ 22.43 ಕೋಟಿ ರೂ., ದ.ಕ. ಜಿಲ್ಲೆಗೆ 4.50 ಕೋಟಿ ರೂ., ಉಡುಪಿಗೆ 4 ಕೋಟಿ ರೂ. ಹಾಗೂ ಒಳನಾಡು ಜಲಸಾರಿಗೆ ಅಭಿವೃದ್ಧಿಗೆ 5.70 ಕೋಟಿ ರೂ. ಅನುದಾನ ಕಲ್ಪಿಸಲಾಗಿದೆ ಎಂದರು.
ಶಾಶ್ವತ ತಡೆಗೋಡೆ ನಿರ್ಮಾಣ..
ದ.ಕ. ಜಿಲ್ಲೆಯ ಹಳೆಬಂದರಿನ ಹಂತದ ವಾಣಿಜ್ಯ ದಕ್ಕೆ ನಿರ್ಮಾಣ (ಉಳಿಕೆ ಕಾಮಗಾರಿ) 308.43 ಲಕ್ಷ ರೂ.ಗಳಲ್ಲಿ ಪ್ರಗತಿಯಲ್ಲಿದೆ. ಬಂದರು ವಾಣಿಜ್ಯ ಧಕ್ಕೆ ಮುಂಭಾಗದಲ್ಲಿ ಹೂಳೆತ್ತುವ ಕಾಮಗಾರಿ 100 ಲಕ್ಷ ರೂ.ಗಳಲ್ಲಿ ಟೆಂಡರ್ ಹಂತದಲ್ಲಿದೆ. ಬೆಂಗ್ರೆಯಲ್ಲಿ ಶಾಶ್ವತ ತಡೆಗೋಡೆ 300 ಲಕ್ಷ ರೂ.ಗಳಲ್ಲಿ ಪ್ರಾರಂಭಿಸಲಾಗಿದೆ. ಬೈಕಂಪಾಡಿ ಹೊಸಬೆಟ್ಟು ಹತ್ತಿರ ಶಾಶ್ವತ ತಡೆಗೋಡೆ ನಿರ್ಮಾಣ 275 ಲಕ್ಷ ರೂ.ಗಳಲ್ಲಿ ಪ್ರಗತಿಯಲ್ಲಿದ್ದು, ಸಸಿಹಿತ್ಲು ಹತ್ತಿರ ಶಾಶ್ವತ ತಡೆಗೋಡೆ ನಿರ್ಮಾಣ 300 ಲಕ್ಷ ರೂ.ಗಳಲ್ಲಿ ಪ್ರಾರಂಭವಾಗಲಿದೆ ಎಂದು ಬಾಬುರಾವ್ ಚಿಂಚನಸೂರ್ ಹೇಳಿದರು.
ಉಡುಪಿಯ ಕಾಪುವಿನಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ 3 ಕೋಟಿ ರೂ. ವೆಚ್ಚದ ಕಾಮಗಾರಿ ಪ್ರಾರಂಭಗೊಳ್ಳಲಿದೆ. ಮಲ್ಪೆ ಕಮರ್ಷಿಯಲ್ ಜಟ್ಟಿ ವಿಸ್ತರಣೆ ಹಾಗೂ ಅಭಿವೃದ್ಧಿಗೆ 5.90 ಕೋಟಿ ರೂ., ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ 2 ಕೋಟಿ ರೂ., ಕುಂದಾಪುರ ವ್ಯಾಪ್ತಿಯ ಶಾಶ್ವತ ತಡೆಗೋಡೆ ನಿರ್ಮಾಣಕ್ಕಾಗಿ 2 ಕೋಟಿ ರೂ., ಬೈಂದೂರಿನಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣಕ್ಕಾಗಿ 2 ಕೋಟಿ ರೂ.ಗಳ ವೆಚ್ಚದ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದರು.




