ರಾಷ್ಟ್ರೀಯ

ಬಾಹ್ಯಾಕಾಶದಲ್ಲೀಗ ಭಾರತ ಸೂಪರ್ ಪವರ್‌: ಬಾಹ್ಯಾಕಾಶದಲ್ಲೇ ಲೈವ್ ಸ್ಯಾಟೆಲೈಟ್ ಹೊಡೆದುರುಳಿಸಿದ ಭಾರತ: ಪ್ರಧಾನಿ ಮೋದಿ ಘೋಷಣೆ

Pinterest LinkedIn Tumblr

ಹೊಸದಿಲ್ಲಿ: ಕೆಳಸ್ತರದ ಕಕ್ಷೆಯಲ್ಲಿ ಸುತ್ತುವ ಉಪಗ್ರಹವೊಂದನ್ನು ಭಾರತವಿಂದು ಯಶಸ್ವಿಯಾಗಿ ಹೊಡೆದುರುಳಿಸಿದೆ. ಈ ಮೂಲಕ ಶತ್ರುದೇಶಗಳ ಉಪಗ್ರಹಗಳನ್ನು ನಾಶಪಡಿಸುವ ಸಾಮರ್ಥ್ಯವನ್ನು ಭಾರತ ಗಳಿಸಿಕೊಂಡಿದ್ದು, ‘ಸೂಪರ್ ಪವರ್‌’ಗಳ ಸಾಲಿಗೆ ಸೇರಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು.

ಟಿವಿ, ರೇಡಿಯೋ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ‘ಪ್ರತಿಯೊಂದು ದೇಶದ ಪ್ರಗತಿಯ ಹಾದಿಯಲ್ಲಿ ಅತ್ಯಂತ ಹೆಮ್ಮೆಯ ಹಾಗೂ ಐತಿಹಾಸಿಕ ಕ್ಷಣಗಳು ಕೆಲವೇ ಸಲ ಮಾತ್ರ ಬರುತ್ತವೆ. ಅವು ತಲೆಮಾರಿಗಳ ವರೆಗೆ ಮಹತ್ವದ ಪರಿಣಾಮ ಬೀರುತ್ತವೆ. ಅಂತಹ ಒಂದು ಹೆಮ್ಮೆಯ ಕ್ಷಣ ನಮ್ಮ ಪಾಲಿಗಿಂದು ಬಂದಿದೆ’ ಎಂದು ಪ್ರಕಟಿಸಿದರು.

‘ಉಪಗ್ರಹ ನಾಶಕ ಕ್ಷಿಪಣಿ (ಎ-ಸ್ಯಾಟ್) ಉಡಾವಣೆ ಪ್ರಯೋಗವನ್ನು ಭಾರತ ಯಶಸ್ವಿಯಾಗಿ ನಡೆಸಿದೆ. #ಮಿಷನ್‌ಶಕ್ತಿ ಯಶಸ್ಸಿನಲ್ಲಿ ಭಾಗಿಯಾದ ಎಲ್ಲರಿಗೂ ಅಭಿನಂದನೆಗಳು’ ಎಂದು ಪ್ರಧಾನಿ ನಂತರ ಟ್ವೀಟ್ ಮಾಡಿದರು.

ನಾವು ನಡೆಸಿರುವ ಈ ಪ್ರಯೋಗ ಯಾರ ವಿರುದ್ಧವೂ ಅಲ್ಲ. ನಾಶಪಡಿಸಿದ ಉಪಗ್ರಹ ಪೂರ್ವನಿರ್ಧರಿತ ಗುರಿಯಾಗಿತ್ತು. ಅದು 300 ಕಿ.ಮೀ ದೂರದ ಕಕ್ಷೆಯಲ್ಲಿ ಸುತ್ತುವ ಉಪಗ್ರಹವಾಗಿತ್ತು ಎಂದು ಪ್ರಧಾನಿ ತಿಳಿಸಿದರು.

ನಾಶಪಡಿಸಿದ ಉಪಗ್ರಹ ಯಾರಿಗೆ ಸೇರಿದ್ದು ಎಂಬುದನ್ನು ಪ್ರಧಾನಿ ಬಹಿರಂಗಪಡಿಸಲಿಲ್ಲ. ಈ ಪ್ರಯೋಗದ ಮೂಲಕ ಭಾರತ ಯಾವುದೇ ಅಂತಾರಾಷ್ಟ್ರೀಯ ಒಪ್ಪಂದ ಅಥವಾ ಕಾನೂನಿನ ಉಲ್ಲಂಘನೆ ಮಾಡಿಲ್ಲ ಎಂದು ಪ್ರಧಾನಿ ಸ್ಪಷ್ಟಪಡಿಸಿದರು.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಮಿಶನ್ ಶಕ್ತಿ ಯೋಜನೆಯ ರೂವಾರಿ. ಇದರ ಸಂಪೂರ್ಣ ಯಶಸ್ಸು ಡಿಆರ್‌ಡಿಓ ವಿಜ್ಞಾನಿಗಳಿಗೆ ಸಲ್ಲುತ್ತದೆ. ಇದು ದೇಶದ ಭದ್ರತೆಯನ್ನು ಒಟ್ಟಾರೆಯಾಗಿ ಬಲಿಷ್ಠಗೊಳಿಸುವ ಯೋಜನೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ಈ ಸಾಧನೆ ಬೇರೆ ಯಾವುದೇ ದೇಶದ ವಿರುದ್ಧವಲ್ಲ, ಬದಲಿಗೆ ನಮ್ಮ ರಕ್ಷಣೆಗಾಗಿ ಅಷ್ಟೆ. ಈ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಇಂದು ನಡೆಸಿದ ಈ ಪರೀಕ್ಷೆಯಿಂದ ಯಾವುದೇ ರೀತಿಯಲ್ಲಿ ಅಂತಾರಾಷ್ಟ್ರೀಯ ಕಾನೂನು ಅಥವಾ ಒಪ್ಪಂದಗಳ ಉಲ್ಲಂಘನೆಯಾಗಿಲ್ಲ. ಈ ಪ್ರಯೋಗದೊಂದಿಗೆ ಭಾರತವಿಂದು ಮತ್ತಷ್ಟು ಸುಭದ್ರ ಮತ್ತು ಸುರಕ್ಷಿತ ದೇಶವಾಗಿದೆ ಎಂದು ಮೋದಿ ತಿಳಿಸಿದರು.

ಈ ಕ್ಷೇತ್ರದಲ್ಲಿ ಶಾಂತಿ ಮತ್ತು ಸುರಕ್ಷೆಯ ವಾತಾವರಣ ಮೂಡಿಸುವುದಕ್ಕಾಗಿ ಬಲಿಷ್ಠ ಭಾರತದ ನಿರ್ಮಾಣ ಅಗತ್ಯವಿದೆ. ನಮ್ಮ ಉದ್ದೇಶ ಯುದ್ಧದ ವಾತಾವರಣ ಸೃಷ್ಟಿಸುವುದಲ್ಲ. ಭಾರತ ಅಂತಾರಾಷ್ಟ್ರೀಯ ಕ್ಷೇತ್ರದಲ್ಲಿ ಮಾಡುವ ಸಾಧನೆಗಳು ಭಾರತದ ಅಭಿವೃದ್ಧಿಗಾಗಿಯೇ ಹೊರತು ಬೇರೆಯವರ ಮೇಲೆ ದಾಳಿಗಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನುದ್ದೇಶಿಸಿ ಭಾಷಣ ಮಾಡುತ್ತ ಈ ಮಹತ್ವದ ಘೋಷಣೆ ಮಾಡಿದರು.

ಮಧ್ಯಾಹ್ನ 11:45ರಿಂದ 12 ಗಂಟೆ ಒಳಗೆ ಮಹತ್ವದ ಘೋಷಣೆ ಮಾಡಲಿರುವುದಾಗಿ ಪ್ರಧಾನಿ ಮೋದಿ ಅವರೇ ಸ್ವತಃ ಟ್ವೀಟ್ ಮೂಲಕ ದೇಶದ ಜನತೆಗೆ ಮುನ್ಸೂಚನೆ ನೀಡಿದ್ದರು. ಟಿವಿ., ರೇಡಿಯೋ, ಸಾಮಾಜಿಕ ಜಾಲತಾಣಗಳ ಮೂಲಕ ಎಲ್ಲರೂ ನಿರೀಕ್ಷಿಸುತ್ತಿರಿ ಎಂದೂ ಮೋದಿ ಸಂಕೇತ ನೀಡಿದ್ದರು. ಇಡೀ ಜಗತ್ತೇ ತುದಿಗಾಲಲ್ಲಿ ನಿಂತಿತ್ತು. ಕೊನೆಗೆ 12.10ಕ್ಕೆ ಮೋದಿ ಈ ಘೋಷಣೆ ಮಾಡಿದ್ದರು.

Comments are closed.