ರಾಷ್ಟ್ರೀಯ

ಬಾಹ್ಯಾಕಾಶದಲ್ಲಿ ಉಪಗ್ರಹ ನಾಶಕ ಕ್ಷಿಪಣಿ ಮೂಲಕ ಭಾರತ ಹೊಡೆದುರುಳಿಸಿದ ಉಪಗ್ರಹ ಯಾವ ದೇಶದ್ದು ಗೊತ್ತೇ?

Pinterest LinkedIn Tumblr

ಹೊಸದಿಲ್ಲಿ: ಎ -ಸ್ಯಾಟ್ (ಆ್ಯಂಟಿ-ಸ್ಯಾಟಲೈಟ್) ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸುವ ಮೂಲಕ ಭಾರತವು ಮಾ.27ರಂದು ಬುಧವಾರ ಅಂತರಿಕ್ಷದಲ್ಲಿ ಸೂಪರ್ ಪವರ್ ರಾಷ್ಟ್ರಗಳ ಸಾಲಿಗೆ ಸೇರಿತು ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಮಧ್ಯಾಹ್ನ ಘೋಷಣೆ ಮಾಡಿದರು.

ಬುಧವಾರ ಬೆಳಗ್ಗೆ 11.16ಕ್ಕೆ ಈ ಉಪಗ್ರಹ ನಾಶಕ ಕ್ಷಿಪಣಿ ಮತ್ತೊಂದು ಉಪಗ್ರಹವನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಈ ಘೋಷಣೆ ಮಾಡಲಾಗಿತ್ತು. ಆದರೆ, ಕ್ಷಿಪಣಿಗೆ ಗುರಿಯಾದ ಉಪಗ್ರಹ ಯಾವುದು ಎಂಬ ಬಗ್ಗೆ ಸಾಕಷ್ಟು ಕುತೂಹಲವಿದೆ. ಅದಕ್ಕೆ ಉತ್ತರ ಇಲ್ಲಿದೆ.

ಎ-ಸ್ಯಾಟ್ ಹೊಡೆದುರುಳಿಸಿದ್ದ ಉಪಗ್ರಹವು ಬೇರಾವುದೇ ದೇಶದ್ದಲ್ಲ, ಭಾರತದ್ದೇ. ಪ್ರಧಾನಿ ನರೇಂದ್ರ ಮೋದಿಯವರು, ಈ ಪರೀಕ್ಷೆಯಲ್ಲಿ ಯಾವುದೇ ಅಂತಾರಾಷ್ಟ್ರೀಯ ಕಾನೂನುಗಳನ್ನು ನಾವು ಉಲ್ಲಂಘಿಸಿಲ್ಲ ಎಂದು ಸ್ಪಷ್ಟಪಡಿಸಿದ್ದುದು ಕೂಡ ಇದೇ ಕಾರಣಕ್ಕೆ. ಶತ್ರು ಉಪಗ್ರಹವನ್ನಷ್ಟೇ ಹೊಡೆದುರುಳಿಸಲು ಇರುವ ಈ ಕ್ಷಿಪಣಿಯು ಪುಡಿ ಮಾಡಿದ್ದು, ಭಾರತವು ಸೇವೆ ರದ್ದುಗೊಳಿಸಿದ್ದ ಹಳೆಯ ಉಪಗ್ರಹವೊಂದನ್ನು. ಅದು ಭೂಮಿಯಿಂದ 300 ಕಿ.ಮೀ. ಎತ್ತರದಲ್ಲಿ ಸಮೀಪದ ಭೂ ಕಕ್ಷೆಯಲ್ಲಿ ಸುತ್ತುತ್ತಿತ್ತು. ಇಡೀ ಕಾರ್ಯಾಚರಣೆಗೆ ಬೇಕಾಗಿದ್ದು ಕೇವಲ 3 ನಿಮಿಷ ಮಾತ್ರ.

ದೂರದರ್ಶನ ಮೂಲಕ ಪ್ರಸಾರ ಮಾಡಲಾದ ಭಾಷಣದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು “ಮಿಶನ್ ಶಕ್ತಿ” ಎಂದು ಕರೆದ ಈ ಕಾರ್ಯಾಚರಣೆಗೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮುಖ್ಯಸ್ಥ ಜಿ.ಸತೀಶ್ ರೆಡ್ಡಿ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ರಾಷ್ಟ್ರೀಯ ಭದ್ರತಾ ಮಂಡಳಿಯ ಇತರ ಅಧಿಕಾರಿಗಳು ಸಹಕರಿಸಿದ್ದರು.

ಒಡಿಶಾದ ಬಾಲಸೋರ್‌ನಲ್ಲಿರುವ ಡಿಆರ್‌ಡಿಒ ಪರೀಕ್ಷಾ ಕೇಂದ್ರದಿಂದ ಕ್ಷಿಪಣಿಯನ್ನು ಹಾರಿಬಿಡಲಾಗಿತ್ತು. ಎ-ಸ್ಯಾಟ್ ಕ್ಷಿಪಣಿಯ ಪರೀಕ್ಷೆ ವೇಳೆ ಸತೀಶ್ ರೆಡ್ಡಿ ಅವರು ಬಾಲಸೋರ್‌ನಲ್ಲೇ ಇದ್ದು ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದರು.

ಅಮೆರಿಕ, ರಷ್ಯಾ ಹಾಗೂ ಚೀನಾ ಬಳಿಕ ಭಾರತವು ಶತ್ರು ಉಪಗ್ರಹಗಳನ್ನು ಪತ್ತೆ ಹಚ್ಚಿ ಹೊಡೆದುರುಳಿಸುವ ಸಾಮರ್ಥ್ಯವಿರುವ ರಾಷ್ಟ್ರಗಳ ಸಾಲಿಗೆ ಸೇರಿದ ನಾಲ್ಕನೇ ದೇಶವೆನಿಸಿತು.

ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟರ್ ಖಾತೆಯಲ್ಲಿ ಮಧ್ಯಾಹ್ನ 11.45-12.00 ನಡುವೆ ಮಹತ್ವದ ಘೋಷಣೆಯೊಂದನ್ನು ಮಾಡಲಾಗುತ್ತದೆ ಎಂದು ಹೇಳಿದ ತಕ್ಷಣ ಇಡೀ ದೇಶವೇ ಈ ಘೋಷಣೆಗಾಗಿ ತುದಿಗಾಲಲ್ಲಿ ಕಾಯುತ್ತಿತ್ತು. ಆದರೆ, ಪರೀಕ್ಷೆ ಯಶಸ್ವಿಯಾಗಿರುವ ಕುರಿತು ದೃಢೀಕರಣ ಬಂದಿರುವುದು ತಡವಾಗಿದ್ದುದರಿಂದ ಘೋಷಣೆಯೂ ಹತ್ತು ನಿಮಿಷ ತಡವಾಗಿದ್ದು, 12.10ರ ವೇಳೆಗೆ ಪ್ರಧಾನಿ ದೂರದರ್ಶನ ಹಾಗೂ ಯೂಟ್ಯೂಬ್ ಚಾನೆಲ್ ಮೂಲಕ ಕಾಣಿಸಿಕೊಂಡು, ದೇಶದ ಹೆಮ್ಮೆಯ ಕ್ಷಣಗಳನ್ನು ವಿವರಿಸಿದರು.

Comments are closed.