ನವದೆಹಲಿ: ಉತ್ತರ ಪ್ರದೇಶ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿಗೆ ತೀವ್ರ ಮುಖಭಂಗವಾಗಿದ್ದು ಗೋರಖ್ಪುರ ಹಾಗೂ ಫುಲ್ಪುರಗಳಲ್ಲಿ ಗೆಲುವು ಸಮಾಜವಾದಿ ಪಕ್ಷದ ಪಾಲಾಗಿದೆ.
19 ವರ್ಷಗಳಿಂದ ಬಿಜೆಪಿ ವಶದಲ್ಲಿದ್ದ, ಯೋಗಿ ಆದಿತ್ಯನಾಥ ಅವರ ಭದ್ರಕೋಟೆ ಎನಿಸಿದ್ದ ಗೋರಖ್ಪುರ ಸಮಾಜವಾದಿ ಪಕ್ಷಕ್ಕೆ ಸೇರಿದೆ. ಸಮಾಜವಾದಿ ಪಕ್ಷ (ಎಸ್ಪಿ) ಹಾಗೂ ಬಹುಜನ ಸಮಾಜ ಪಕ್ಷ (ಬಿಎಸ್ಪಿ)ದ ರಾಜಕೀಯ ಸಮೀಕರಣದ ಮೈತ್ರಿಯಿಂದಾಗಿ ಬಿಜೆಪಿಗೆ ಸೋಲಾಗಿದೆ.
ಗೋರಖ್ಪುರದಲ್ಲಿ 25ನೇ ಸುತ್ತಿನ ಮತ ಎಣಿಕೆ ಹೊತ್ತಿಗೆ ಸಮಾಜವಾದಿ ಪಕ್ಷದ ಪ್ರವೀಣ್ಕುಮಾರ್ ನಿಶಾದ್ ಬಿಜೆಪಿಯ ಉಪೇಂದ್ರ ದತ್ತ ಶುಕ್ಲಾ ವಿರುದ್ಧ 22, 594 ಮತಗಳ ಅಂತರದಿಂದ ಮುನ್ನಡೆ ಸಾಧಿಸಿ 3, 77, 146 ಮತ ಗಳಿಸಿದ್ದಾರೆ. ಇನ್ನು ಉಪೇಂದ್ರ ದತ್ತ 3,54,192 ಮತಗಳನ್ನು ಪಡೆದಿದ್ದರು.
ಇನ್ನು ಫುಲ್ಪುರದಲ್ಲಿ 28ನೇ ಸುತ್ತಿನ ಮತ ಎಣಿಕೆ ಹೊತ್ತಿಗೆ ಸಮಾಜವಾದಿಯ ಪ್ರತಾಪ್ ಸಿಂಗ್ ಪಟೇಲ್ ಬಿಜೆಪಿಯ ಕೌಶಲೇಂದ್ರ ಸಿಂಗ್ ಪಟೇಲ್ ಅವರನ್ನು 47, 351 ಮತಗಳ ಅಂತರದಿಂದ ಮಣಿಸಿ 3, 05, 172 ವೋಟುಗಳನ್ನು ಹೊಂದಿದ್ದರು. ಕೌಶಲೇಂದ್ರ ಸಿಂಗ್ ಪಟೇಲ್ ಅವರು 2, 57, 821 ಮತ ಗಳಿಸಿದ್ದರು. ಈ ಕ್ಷೇತ್ರದಲ್ಲಿ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಆಯ್ಕೆಯಾಗಿದ್ದರು.
ಎರಡೂ ಕ್ಷೇತ್ರದ ಗೆಲುವಿನ ನಂತರ ಸಮಾಜವಾದಿ ಪಕ್ಷದ ಮುಖಂಡರು ಭರ್ಜರಿ ವಿಜಯೋತ್ಸವ ಆಚರಿಸಿದ್ದಾರೆ.
ಎಸ್ಪಿ ಮತ್ತು ಬಿಎಸ್ಪಿಗೆ ಅಭಿನಂದನೆಗಳು
ಉತ್ತರಪ್ರದೇಶದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಆಯ್ಕೆಯಾಗಿದ್ದ ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿದೆ. ಈ ಐತಿಹಾಸಿಕ ವಿಜಯಕ್ಕಾಗಿ ಎಸ್ಪಿ ಮತ್ತು ಬಿಎಸ್ಪಿಗೆ ಅಭಿನಂದನೆಗಳು. ಬಿಜೆಪಿಯೇತರ ಪಕ್ಷಗಳ ಒಗ್ಗಟ್ಟು ಪ್ರಮುಖ ಪಾತ್ರ ವಹಿಸಿದೆ. ಕರ್ನಾಟಕದಲ್ಲಿ ಅಭಿವೃದ್ಧಿ ಕುರಿತು ಕಡಿಮೆ ಭಾಷಣ ಮಾಡುವುದು ಒಳಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ನಲ್ಲಿ ಕುಟುಕಿದ್ದಾರೆ.
BJP has suffered humiliating loss in the Lok Sabha seats held by the CM & DyCM of UP. Congratulations to SP & BSP for this historic victory. Unity among the non-BJP parties has played a key role.
Perhaps Yogi Adityanath should spend less time lecturing Karnataka on development.
— Siddaramaiah (@siddaramaiah) March 14, 2018
ಫಲಿತಾಂಶ ಅನಿರೀಕ್ಷಿತ. ಈ ಬಗ್ಗೆ ಪರಾಮರ್ಶೆ ಮಾಡಲಾಗುವುದು. ರಾಜ್ಯದ ಹಾಗೂ ದೇಶದ ಅಭಿವೃದ್ಧಿಗೆ ಮಾರಕವಾಗಿರುವ ಎಸ್ಪಿ ಮತ್ತು ಬಿಎಸ್ಪಿಯ ರಾಜಕೀಯ ಮೈತ್ರಿಯನ್ನು 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಹಣಿಯಲು ತಂತ್ರಗಾರಿಕೆ ಹೆಣೆಯಲಾಗುವುದು.
| ಯೋಗಿ ಆದಿತ್ಯನಾಥ್, ಉತ್ತರಪ್ರದೇಶ ಮುಖ್ಯಮಂತ್ರಿ
Comments are closed.