ಪುದುಕೊಟ್ಟಯ್ (ತ.ನಾಡು): ಸಾಂಪ್ರದಾಯಿಕ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ತಮಿಳುನಾಡು ಆರೋಗ್ಯ ಸಚಿವ ಸಿ. ವಿಜಯ ಭಾಸ್ಕರ್ ಅವರಿಗೆ ಸೇರಿದ ಹೋರಿಯೊಂದು ಮರಕ್ಕೆ ಗುದ್ದಿ ಮೃತಪಟ್ಟಿದೆ. ಸ್ಪರ್ಧೆಯಲ್ಲಿ 66 ಜನರು ಗಾಯಗೊಂಡಿದ್ದಾರೆ.
ಭಾನುವಾರ ಪುದುಕೊಟ್ಟಯ್ ಜಿಲ್ಲೆಯ ತಿರುನಲ್ಲೂರ್ನಲ್ಲಿ ಆಯೋಜಿಸಿದ್ದ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ‘ಕೊಂಬನ್’ (ಹೋರಿ) ಪಾಲ್ಗೊಂಡಿತ್ತು. ‘ಕೊಂಬನ್’ ಸ್ಪರ್ಧಾ ಸ್ಥಳಕ್ಕೆ ವೇಗವಾಗಿ ನುಗ್ಗಿದಾಗ ಪ್ರವೇಶ ದ್ವಾರದಲ್ಲೇ ಇದ್ದ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ತೀವ್ರವಾಗಿ ಗಾಯಗೊಂಡ ಹೋರಿ ಕ್ಷಣ ಮಾತ್ರದಲ್ಲಿ ಕುಸಿದು ಬಿತ್ತು. ಪಶು ವೈದ್ಯರ ತಂಡ ತಕ್ಷಣವೇ ಶುಶ್ರೂಷೆಗೆ ಮುಂದಾದರೂ ಅಷ್ಟರಲ್ಲೇ ಅದು ಅಸುನೀಗಿತ್ತು.
ಕುಟುಂಬ ಸದಸ್ಯನಂತಿದ್ದ ಹೋರಿ
ಈ ಹೋರಿನನ್ನು ಪೊಂಗಲ್ ಹಬ್ಬಕ್ಕೂ ಮುನ್ನ ಖರೀದಿಸಿ ತಂದಿದ್ದೆವು. ಕೊಂಬನ್ ನಮ್ಮ ಮನೆಯ ಸದಸ್ಯನಂತಿತ್ತು. ಈ ಕೊಂಬನ್ ಮೊದಲು ಹಲವು ಜಲ್ಲಿಕಟ್ಟು ಸ್ಪರ್ಧೆಗಳಲ್ಲಿ ಭಾಗವಹಿಸಿತ್ತು. ಕೊಂಬನ್ ಸಾವನ್ನು ನಾವು ನಂಬಲು ಸಾಧ್ಯವಾಗುತ್ತಿಲ್ಲ. ನಮ್ಮ ಕುಟುಂಬ ಅತೀವ ದುಃಖದಲ್ಲಿದೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.
ಪುದುಕೊಟ್ಟಯ್ ಜಿಲ್ಲೆಯ ಇಲ್ಲುಪುರ ಗ್ರಾಮದಲ್ಲಿ ಸಚಿವರ ಕುಟುಂಬಸ್ಥರಿಗೆ ಸೇರಿದ ಜಮೀನಿನಲ್ಲಿ ಕೊಂಬನ್ ಪಾರ್ಥಿವ ಶರೀರವನ್ನು ಸಂಸ್ಕಾರ ಮಾಡಲಾಯಿತು.
Comments are closed.