ಇಸ್ಲಾಮಾಬಾದ್/ ಶ್ರೀನಗರ: ಪಾಕಿಸ್ತಾನ ಮೂಲದ ಜೈಷೆ ಮೊಹಮ್ಮದ್ ಉಗ್ರರು ಸೇನಾ ಶಿಬಿರದ ಮೇಲೆ ದಾಳಿ ಮಾಡಿದ ಹಿನ್ನೆಲೆಯಲ್ಲಿ ಭಾರತ ಯಾವುದೇ ಸರ್ಜಿಕಲ್ ದಾಳಿಗೆ ಮುಂದಾದರೆ ತಕ್ಕ ಪರಿಣಾಮ ಎದುರಿಸಬೇಕಾದೀತು ಎಂದು ಪಾಕಿಸ್ತಾನ ಎಚ್ಚರಿಕೆ ನೀಡಿದೆ.
ಜಮ್ಮುವಿನ ಸುಂಜುವಾನ್ ಸೇನಾ ಶಿಬಿರದ ಮೇಲೆ ಉಗ್ರರು ಶನಿವಾರ ದಾಳಿ ನಡೆಸಿ ಐವರು ಯೋಧರನ್ನು ಬಲಿ ತೆಗೆದುಕೊಂಡಿದ್ದರು. ಅಲ್ಲದೆ ಇತರ 10 ಮಂದಿ ಗಾಯಗೊಂಡಿದ್ದರು.
ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಹೊಂದಿದ್ದ ಜೈಷೆ ಮೊಹಮ್ಮದ್ ಉಗ್ರರು ಸೇನಾ ಶಿಬಿರಕ್ಕೆ ದಾಳಿಯಿಟ್ಟಿದ್ದಾರೆ ಎಂದು ಭಾರತ ಹೇಳಿದೆ. ಆದರೆ ಸೂಕ್ತ ತನಿಖೆಯಿಲ್ಲದೆ ತನ್ನ ಮೇಲೆ ಆರೋಪ ಹೊರಿಸಿದರೆ ಸುಮ್ಮನಿರಲಾಗದು ಎಂದು ಪಾಕ್ ಹೇಳಿದೆ.
‘ಪ್ರತಿ ಬಾರಿ ಉಗ್ರರ ದಾಳಿ ನಡೆದಾಗಲೂ ಪಾಕ್ ಮೇಲೆ ಗೂಬೆ ಕೂರಿಸುವುದು ಭಾರತದ ಚಾಳಿಯಾಗಿದೆ’ ಎಂದು ಪಾಕ್ ವಿದೇಶಾಂಗ ಸಚಿವಾಲಯ ಆರೋಪಿಸಿದೆ.
ಕಾಶ್ಮೀರದಲ್ಲಿ ಸಶಸ್ತ್ರ ಬಂಡಾಯವನ್ನು ಹತ್ತಿಕ್ಕಲು ಭಾರತ ಅತ್ಯಂತ ಕ್ರೂರವಾಗಿ ನಡೆದುಕೊಳ್ಳುತ್ತಿದ್ದು, ಅದನ್ನು ಮುಚ್ಚಿಹಾಕಲು ನಮ್ಮ ಮೇಲೆ ಆರೋಪ ಮಾಡುತ್ತಿದೆ ಎಂದು ಪಾಕ್ ಹೇಳಿಕೊಂಡಿದೆ.
Comments are closed.