ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಮೆಹಬೂಬಾ ಮುಫ್ತಿ ಅವರನ್ನು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಗುರುವಾರ ಇಲ್ಲಿ ಘೋಷಿಸಿತು. ಶ್ರೀನಗರದಲ್ಲಿ ಈದಿನ ಸಂಜೆ ನಡೆದ ನಿರ್ಣಾಯಕ ಶಾಸಕಾಂಗ ಪಕ್ಷ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಯಿತು.
ಅಧಿಕಾರಕ್ಕಾಗಿ ಹಕ್ಕು ಪ್ರತಿಪಾದನೆ ಮಾಡುವ ಮುನ್ನ ಸಂವಿಧಾನಬದ್ಧವಾಗಿ ರಾಜ್ಯ ಶಾಸಕಾಂಗ ಪಕ್ಷದ ನಾಯಕರಾಗಿ ಅವರನ್ನು ಆಯ್ಕೆ ಮಾಡುವ ಆವಶ್ಯಕತೆ ಇರುವುದರಿಂದ ಪಕ್ಷವು ಸರ್ವಾನುಮತದಿಂದ ಮೆಹಬೂಬಾ ಮುಫ್ತಿ ಅವರನ್ನು ರಾಜ್ಯ ಶಾಸನಸಭೆಯ ನಾಯಕಿ ಎಂಬುದಾಗಿ ಆಯ್ಕೆ ಮಾಡಿತು.
ಶಾಸಕಾಂಗ ಪಕ್ಷದ ನಿರ್ಣಾಯಕ ಸಭೆ ಆರಂಭವಾಗುವುದಕ್ಕೆ ಮುನ್ನ ಮೆಹಬೂಬಾ ಅವರು ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಬಿಜ್ಬೆಹರಾದಲ್ಲಿ ತಮ್ಮ ತಂದೆ ಮಾಜಿ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಅವರ ಸಮಾಧಿಗೆ ಭೇಟಿ ನೀಡಿದರು.