ಜೈಪುರ, ಜು.3: ನಿನ್ನೆ ಸಂಭವಿಸಿದ ಬಾಲಿವುಡ್ ಡ್ರೀಮ್ ಗರ್ಲ್ ಹೇಮಾಮಾಲಿನಿ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಪುರ ಪೊಲೀಸರು ಕಾರು ಚಾಲಕನನ್ನು ಬಂಧಿಸಿದ್ದಾರೆ. ಚಾಲಕನನ್ನು ತೀವ್ರ ತನಿಖೆಗೆ ಗುರಿಪಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಟಿ ಹೇಮಾಮಾಲಿನಿ ರಾಜಸ್ಥಾನದ ಕರೋಟಿ ಜಿಲ್ಲೆಯಲ್ಲಿರುವ ಬಾಲಾಜಿ ದೇವಸ್ಥಾನಕ್ಕೆ ಭೇಟಿ ನೀಡಿ ವಾಪಸ್ಸಾಗುತ್ತಿದ್ದರು. ತೀವ್ರವಾಗಿ ಗಾಯಗೊಂಡಿರುವ ಹೇಮಾಮಾಲಿನಿ ಅವರನ್ನು ಜೈಪುರದ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮುಖದ ಮೇಲಿನ ಗಾಯಗಳಿಗೆ ಹೊಲಿಗೆಗಳನ್ನು ಹಾಕಲಾಗಿದೆ ಎಂದು ಹೇಳಿರುವ ವೈದ್ಯರು ಸದ್ಯ ಹೇಮಾಮಾಲಿನಿಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ನಟಿ ಹಾಗೂ ಬಿಜೆಪಿ ಸಂಸದೆ ಹೇಮಾಮಾಲಿನಿ ಅವರು ನಿನ್ನೆ ರಾತ್ರಿ ಮೆಹಂದಿಪುರದ ಬಾಲಾಜಿ ದೇವಾಲಯದಿಂದ ತಮ್ಮ ಮರ್ಸಿಡಿಸ್ ಬೆಂಚ್ ಕಾರಿನಲ್ಲಿ ವಾಪಸ್ಸಾಗುತ್ತಿದ್ದರು. ಈ ಸಂದರ್ಭ ಎದುರಿನಿಂದ ಬಂದ ಆಲ್ಟೋ ಕಾರಿಗೆ ಇವರ ಕಾರು ಡಿಕ್ಕಿ ಹೊಡೆದಿದೆ. ಇದರಿಂದಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರ ಪೈಕಿ ಮೂರು ವರ್ಷದ ಮಗು ಮೃತಪಟ್ಟಿದ್ದು, ಮತ್ತೊಬ್ಬ ಪುರುಷ, ಮಹಿಳೆ ಗಾಯಗೊಂಡಿದ್ದಾರೆ. ಅವರನ್ನೂ ಕೂಡ ಆಸ್ಪತ್ರೆಗೆ ದಾಖಲಿಸಲಾಗಿದೆ.