ಅಹ್ಮದಾಬಾದ್, ಜು.3: ಇದೊಂದು ಭಾರೀ ವಂಚನೆ ಪ್ರಕರಣ. ಬ್ಯಾಂಕ್ ಒಂದಕ್ಕೆ ಬರೋಬ್ಬರಿ 2,200 ಕೋಟಿ ರೂ.ಗಳ ವಂಚನೆ ಮಾಡಿರುವ ಜೂಂ ಡೆವಲಪರ್ಸ್ ಒಡೆತನಕ್ಕೆ ಸೇರಿದ ಕ್ಯಾಲಿಫೋರ್ನಿಯಾದಲ್ಲಿ 1,000 ಕೋಟಿ ರೂ. ಮೌಲ್ಯದ ಜಮೀನನ್ನು ಜಾರಿ ನಿರ್ದೇಶನಾಲಯದ (ಇಡಿ) ಅಹ್ಮದಾಬಾದ್ನಲ್ಲಿರುವ ವಲಯ ಘಟಕ ಮುಟ್ಟುಗೋಲು ಹಾಕಿಕೊಂಡಿದೆ.
ಅಕ್ರಮ ಹಣಕಾಸು ವ್ಯವಹಾರ ತಡೆ ಕಾಯ್ದೆ (ಪಿಎಂಎಲ್ನ) ಅಡಿ ಜಾರಿ ನಿರ್ದೇಶನಾಲಯ ಜೂಂ ಡೆವಲಪರಸ್ ಗೆ ಸೇರಿರುವ 1,200 ಎಕರೆ ಭೂಮಿಯನ್ನು ಗುರುವಾರ ಬೆಳಗ್ಗೆ ಮುಟ್ಟುಗೋಲು ಹಾಕಿಕೊಂಡಿದೆ. ಇದು ದೇಶದ ಅತಿ ದೊಡ್ಡ ಬ್ಯಾಂಕ್ ವಂಚನೆ ಪ್ರಕರಣವಾಗಿದೆ. ಈ ಮೊದಲು ಎಲ್ಲಿಯೂ ಇಂತಹ ಪ್ರಮಾಣದಲ್ಲಿ ಬ್ಯಾಂಕ್ ವಂಚನೆ ನಡೆದ ಬಗ್ಗೆ ಮಾಹಿತಿಯಿಲ್ಲ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
ಇಂದೋರ್ ನಮ್ಮ ಅಹ್ಮದಾಬಾದ್ನ ವಲಯಕ್ಕೆ ಬರುವುದರಿಂದ ನಾವು ಈ ಪ್ರಕರಣವನ್ನು ಕೈಗೆತ್ತಿಕೊಂಡಿದ್ದೇವೆ. ಈ ಹಿಂದೆ ಇಷ್ಟೊಂದು ದೊಡ್ಡದಾದ ಯಾವುದೇ ಪ್ರಕರಣ ನಮ್ಮ ಬಳಿ ಬಂದಿರಲಿಲ್ಲ. ಅದರಲ್ಲೂ ಅಮೆರಿಕದಲ್ಲಿನ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುತ್ತಿರುವುದೂ ಕೂಡ ಇದೇ ಮೊದಲು ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಪ್ರಕರಣದಲ್ಲಿ ಕೆಲವು ಬ್ಯಾಂಕ್ಗಳು ಸಾಲ ಮಂಜೂರಾತಿ ನೀಡಿದ ಬಗ್ಗೆ ಅನುಮಾನಗಳು ಉಂಟಾಗಿದ್ದು ಕೇಂದ್ರೀಯ ತನಿಖಾ ದಳ (ಸಿಬಿಐ) ಕೂಡ ಪ್ರತ್ಯೇಕವಾಗಿ ಈ ಪ್ರಕರಣದ ತನಿಖೆ ನಡೆಸುತ್ತಿದೆ ಎಂದು ಅವರು ಹೇಳಿದ್ದಾರೆ. ವಿಜಯ ಚೌಧರಿ ಎಂಬ ವ್ಯಕ್ತಿಯ ನೇತೃತ್ವದ ಜೂಂ ಡೆವಲಪರ್ಸ್ನ ಪ್ರೈವೇಟ್ ಲಿಮಿಟೆಡ್ ಕಂಪೆನಿಯು ಇಂದೋರ್ ಮತ್ತು ಮುಂಬೈಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಪ್ರಸ್ತುತ ಈ ವ್ಯವಹಾರದ ಕಿಂಗ್ಪಿನ್ ವಿಜಯ್ ಚೌಧರಿ ತಲೆ ತಪ್ಪಿಸಿಕೊಂಡಿದ್ದಾನೆ. ಒಟ್ಟಾರೆ ವಿವಿಧ ಬ್ಯಾಂಕ್ಗಳಿಂದ 2,200 ಕೋಟಿ ರೂ.ಗಳ ಸಾಲ ಪಡೆದಿದ್ದು ಯುರೋಪ್ನಲ್ಲಿ ತನ್ನ ಬಿಸಿನೆಸ್ ನಡೆಸುತ್ತಿದ್ದಾನೆ ಎಂದು ಅವರು ತಿಳಿಸಿದ್ದಾರೆ.
ಆದರೆ ಅವರು ಇದುವರೆಗೂ ಯಾವುದೇ ಯೋಜನೆ ಆರಂಭಿಸಿಲ್ಲ. ಹಣ ಮಾತ್ರ ನಗದು ಮಾಡಿಕೊಂಡಿದ್ದಾನೆ. ಕಂಪೆನಿಯ ನಿರ್ದೇಶಕರಲ್ಲೊಬ್ಬರಾದ ಶಾರದಾ ಕಾಬ್ರಾ ಎಂಬುವವರನ್ನು ಬಂಧಿಸಲಾಗಿದೆ. ಚೌಧರಿಗೂ ಬಂಧನ ವಾರೆಂಟ್ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.