ಮಂಗಳೂರು, ಮೇ 24: ದ.ಕ ಜಿಲ್ಲಾ ನೂತನ ಎಸ್ಪಿಯಾಗಿ ನಿಯುಕ್ತಿಗೊಂಡ ಭೂಷಣ್ ಗುಲಾಬ್ರಾವ್ ಬೊರಸೆ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು. ನೂತನ ಎಸ್ಪಿ ಬೊರಸೆಯವರಿಗೆ ನಿರ್ಗಮನ ಎಸ್ಪಿ ಡಾ.ಎಸ್ ಡಿ ಶರಣಪ್ಪ ಅವರು ಅಧಿಕಾರ ಹಸ್ತಾಂತರಿಸಿದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಎಸ್ಪಿ ಭೂಷಣ್ ಗುಲಾಬ್ರಾವ್ ಬೊರಸೆ ಅವರು, ಜಿಲ್ಲೆಯಲ್ಲಿ ಉಂಟಾಗುವ ಯಾವೂದೇ ಕುಂದುಕೊರತೆಗಳನ್ನು ನನ್ನ ಗಮನಕ್ಕೆ ತರಲು ವಾಟ್ಸ್ ಆ್ಯಪ್ ಸಂಖ್ಯೆಯನ್ನು ನೀಡಲಾಗುವುದು. ಇದರ ಮೂಲಕ ಜಿಲ್ಲೆಯ ಜನರು ನೇರವಾಗಿ ತಮ್ಮ ದೂರುಗಳನ್ನು, ಹಾಗೂ ಅದಕ್ಕೆ ಸಂಬಂಧಪಟ್ಟ ಪೊಟೋಗಳನ್ನು ಕಳುಹಿಸಿದರೆ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಮಂಡ್ಯದಲ್ಲಿ ಎಸ್ಪಿಯಾಗಿದ್ದ ಸಂದರ್ಭದಲ್ಲಿ ವಾರಸುದಾರರಿಲ್ಲದೆ ಇರುವ ವಾಹನಗಳನ್ನು ಪತ್ತೆ ಹಚ್ಚಲು ಮಾಡಿದ್ದ ಸಾಪ್ಟ್ವೇರನ್ನು ಇನ್ನಷ್ಟು ಅಭಿವೃದ್ದಿಪಡಿಸಿ ರಾಜ್ಯದಲ್ಲಿ ಅಳವಡಿಸಲು ಪೊಲೀಸ್ ಇಲಾಖೆ ಚಿಂತಿಸಿದೆ ಎಂದು ಹೇಳಿದರು. ನಿರ್ಗಮನ ಎಸ್ಪಿ ಡಾ.ಎಸ್.ಡಿ. ಶರಣಪ್ಪ ಮಾತನಾಡಿ, ಜಿಲ್ಲೆಯಲ್ಲಿ ಉತ್ತಮ ಕಾರ್ಯ ಮಾಡಿದ್ದು ಅದನ್ನು ಮುಂದಿನ ಸ್ಥಳದಲ್ಲೂ ಮುಂದುವರಿಸಲಾಗುವುದು ಎಂದರು.
ಭೂಷಣ್ ಗುಲಾಬ್ ರಾವ್ ಬೊರಸೆ ಮೂಲತ ಮಹಾರಾಷ್ಟ್ರದ ಭೂಲೆ ಜಿಲ್ಲೆಯವರು. 2009 ರ ಐಪಿಎಸ್ ಬ್ಯಾಚ್ನಿಂದ ಬಂದ ಇವರು ನಿರ್ಗಮನ ಎಸ್ಪಿ ಶರಣಪ್ಪ ಅವರ ಬ್ಯಾಚ್ಮೇಟ್ ಆಗಿದ್ದಾರೆ. 2009ರಲ್ಲಿ ಗುಲ್ಬರ್ಗದಲ್ಲಿ ಎಎಸ್ಪಿಯಾಗಿ, ಮಂಡ್ಯದಲ್ಲಿ 3 ವರ್ಷ ಎಸ್ಪಿಯಾಗಿ, ಬೆಂಗಳೂರು ಸಿಐಡಿಯ ಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದರು. ಪುಣೆ ವಿಶ್ವವಿದ್ಯಾನಿಲಯದಲ್ಲಿ ಮೆಕ್ಯಾನಿಕಲ್ ಇಂಜಿನಿಯರ್, ಎನ್ಐಟಿ ಜೆಮ್ಶೆಡ್ಪುರದಲ್ಲಿ ಎಂಟೆಕ್ ಪದವಿಯನ್ನು ಪೂರೈಸಿದ್ದಾರೆ.
Comments are closed.