ಉಡುಪಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಲಾರಿಗೆ ಮೀನು ಲಾರಿಯೊಂದು ಢಿಕ್ಕಿಯಾಗಿ ಓರ್ವ ಮೃತಪಟ್ಟು ಇನ್ನಿಬ್ಬರು ಗಂಭೀರ ಗಾಯಗೊಂಡ ಘಟನೆ ಉಡುಪಿಯ ಉದ್ಯಾವರದಲ್ಲಿ ಶುಕ್ರವಾರ ನಡೆದಿದೆ.
ಮೃತವ್ಯಕ್ತಿಯನ್ನು ಗೌಡಪ್ಪ(51) ಎಂದು ಗುರುತಿಸಲಾಗಿದ್ದು, ಕಾಂತರಾಜು ಮತ್ತು ಪುಟ್ಟರಾಜು ಎನ್ನುವವರಿಗೆ ಗಾಯಗಳಾಗಿದೆ. ಇವರೆಲ್ಲರೂ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನವರೆನ್ನಲಾಗಿದೆ.
ಕಬ್ಬು ಸಾಗಿಸುವ ಲಾರಿಯಲ್ಲಿ ಬಂದಿದ್ದ ಮೂವರು ಕಬ್ಬನ್ನು ಇಳಿಸಿದ ಬಳಿಕ ಉದ್ಯಾವರದ ಹಲಿಮಾ ಸಾಬ್ಜು ಸಭಾಂಗಣದ ಎದುರಿಗೆ ಲಾರಿ ನಿಲ್ಲಿಸಿ ಲಾರಿಯ ಹಿಂಬದಿಯಲ್ಲಿ ನಿಂತಿದ್ದರು. ಈ ವೇಳೆ ಅತ್ಯಂತ ವೇಗವಾಗಿ ಬಂದ ಮೀನು ಲಾರಿ ಇವರಿಗೆ ಢಿಕ್ಕಿಯಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸಮಾಜ ಸೇವಕ ನಿತ್ಯಾನಂದ ಒಳಕಾಡು ಸಹಾಯಕ್ಕೆ ಧಾವಿಸಿದರು. ಉಡುಪಿ ಜಿಲ್ಲಾ ಎಸ್ಪಿ ಕೆ. ಅಣ್ಣಾಮಲೈ ಹಾಗೂ ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಕಾಪು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.