ಕನ್ನಡ ವಾರ್ತೆಗಳು

ಉಳ್ಳಾಲ ಕೊಲೆಯತ್ನ ಪ್ರಕರಣ : ಎರಡೂ ಪ್ರಕರಣಗಳ ನಾಲ್ಕು ಆರೋಪಿಗಳ ಸೆರೆ

Pinterest LinkedIn Tumblr

Ullala_accused_arest_1

ಮಂಗಳೂರು / ಉಳ್ಳಾಲ, ಎಪ್ರಿಲ್.29 : ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 3 ದಿನಗಳ ಹಿಂದೆ ನಡೆದ ಎರಡೂ ( ಚೂರಿ ಇರಿತ, ತಲವಾರು ಹಲ್ಲೆ) ಕೊಲೆ ಯತ್ನ ಪ್ರಕರಣಗಳಲ್ಲಿ ಭಾಗಿಯಾದ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಎರಡೂ ಕೊಲೆ ಯತ್ನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ತೊಕ್ಕೊಟ್ಟು ಕೃಷ್ಣನಗರ ನಿವಾಸಿ ರಾಹುಲ್.ಆರ್ (20), ತೊಕ್ಕೊಟ್ಟು ಕಾಪಿಕಾಡ್ ನಿವಾಸಿ ಪವನ್ ರಾಜ್ (20), ಕೋಟೆಕಾರ್ ಸಮೀಪದ ಪಿಲಾರ್ ಲಕ್ಷ್ಮಿಗುಡ್ಡೆ ನಿವಾಸಿ ಪಿ.ಯು.ವಿದ್ಯಾರ್ಥಿ ಎಡ್ವಿನ್ ರಾಹುಲ್ ಡಿ’ಸೋಜ ಯಾನೆ ಪುಚ್ಚೆ ರಾಹುಲ್ (18) ಹಾಗೂ ಕೋಟೆಕಾರ್ ಸಮೀಪದ ಕುಂಪಲ ನಿವಾಸಿ ಡಿಪ್ಲೋಮ ವಿದ್ಯಾರ್ಥಿ ಕಾರ್ತಿಕ್ ( 19) ಬಂಧಿತ ಆರೋಪಿಗಳು.

ಏಪ್ರಿಲ್ 25ರಂದು ಬೆಳಿಗ್ಗೆ ಬಸ್ತಿಪಡ್ಪುನಲ್ಲಿ ನಡೆದ ಇಬ್ರಾಹಿಂ ನಫ್ಸಾನ್ ಕೊಲೆ ಯತ್ನ ಹಾಗೂ ಅದೇ ದಿನ ರಾತ್ರಿ ತೊಕ್ಕೊಟ್ಟಿನಲ್ಲಿ ನಾಲ್ವರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ 2 ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳ ಮಾಹಿತಿಯನ್ನು ಪಡೆದುಕೊಂಡ ಸಿಸಿಬಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ಈ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳನ್ನು ಬಿ.ಸಿ ರೋಡ್ ಬಸ್ಸು ನಿಲ್ದಾಣದ ಬಳಿ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಅಯುಕ್ತ ಚಂದ್ರಶೇಖರ್ ತಿಳಿಸಿದ್ದಾರೆ.

Ullala_accused_arest_2 Ullala_accused_arest_3

ಶುಕ್ರವಾರ ತಮ್ಮ ಕಚೇರಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಆರೋಪಿಗಳ ಪೈಕಿ ಪವನ್ ರಾಜ್ ಎಂಬಾತನು ಈ ಹಿಂದೆ 2015 ನೇ ಇಸವಿಯಲ್ಲಿ ತೊಕ್ಕೊಟ್ಟು ಚೆಂಬುಗುಡ್ಡೆ ಬಳಿ ಲಾನ್ಸಿ ಡಿ ಸೋಜಾ ಎಂಬಾತನ ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿ ಸುಮಾರು 3 ತಿಂಗಳ ಹಿಂದೆ ನ್ಯಾಯಾಲಯದಿಂದ ಜಾಮೀನ ಮೇಲೆ ಬಿಡುಗಡೆಗೊಂಡಿದ್ದನು. ಇನ್ನೋರ್ವ ಆರೋಪಿ ಕಾರ್ತಿಕ್ ಎಂಬಾತನು 2015 ನೇ ಇಸವಿಯಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದರೋಡೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದವನು ಸುಮಾರು 2 ತಿಂಗಳ ಹಿಂದೆ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದನು ಎಂದು ತಿಳಿಸಿದರು.

ಸಿ.ಸಿ.ಬಿ ಘಟಕದ ಇನ್ಸಪೆಕ್ಟರ್ ವೆಲೆಂಟೈನ್ ಡಿಸೋಜ, ಪಿ.ಎಸ್.ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.

ಘಟನೆ ಸಂಪೂರ್ಣ ವಿವರ :

ಸೋಮವಾರ ಬೆಳಗ್ಗಿನ ವೇಳೆ ಕೋಟೆಪುರ ನಿವಾಸಿ ಮುಹಮ್ಮದ್ ಎಂಬವರ ಪುತ್ರ ಇಬ್ರಾಹೀಂ ನಫ್ಸಾನ್ (26) ಮೀನಿನ ವ್ಯಾಪಾರಕ್ಕೆಂದು ದಕ್ಕೆಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಅವರು ಬಸ್ತಿಪಡ್ಪು ತಲುಪುತ್ತಿದ್ದಂತೆ ಆರು ಮಂದಿ ಯುವಕರಿದ್ದ ತಂಡ ಅವರನ್ನು ಅಡ್ಡಗಟ್ಟಿ ಮಾರಕಾಯುಧಗಳಿಂದ ಹಲ್ಲೆ ನಡೆಸಿ ಗಸ್ತು ನಿರತ ಪೊಲೀಸರು ಸ್ಥಳಕ್ಕಾಗಮಿಸಿದಾಗ ಆರು ಮಂದಿ ಆರೋಪಿಗಳು ಮಾರಕಾಯುಧಗಳನ್ನು ಬಿಟ್ಟು ಪರಾರಿಯಾಗಿದ್ದರು.

ದಾಳಿಯಿಂದ ಬ್ರಾಹೀಂ ನಫ್ಸಾನ್ ಕೈ, ಮುಖ ಮತ್ತು ಬೆನ್ನಿಗೆ ಗಂಭೀರ ಪ್ರಮಾಣದ ಗಾಯಗಳಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಇಬ್ರಾಹೀಂ ನಫ್ಸಾನ್‌ರನ್ನು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಘಟನೆ ನಡೆದ ದಿನ ರಾತ್ರಿ ಉಳ್ಳಾಲದಲ್ಲಿ ಮತ್ತೆ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದು, ಸೋಮವಾರ ತಡರಾತ್ರಿ ವೇಳೆ ಕ್ಯಾಟರಿಂಗ್ ಕೆಲಸ ಮುಗಿಸಿ ಮನೆಗೆ ಬೈಕಿನಲ್ಲಿ ಹಿಂತಿರುಗುತ್ತಿದ್ದ ಮೂರು ಮಂದಿಯ ಮೇಲೆ ತಲವಾರು ದಾಳಿ ನಡೆಸಿದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಈ ದಾಳಿಯಲ್ಲಿ ಓರ್ವ ಗಂಭೀರ ಗಾಯಗೊಂಡು, ಇಬ್ಬರು ಅಲ್ಪಸ್ವಲ್ಪ ಗಾಯಗೊಂಡಿದ್ದು, ಗಾಯಾಳುಗಳು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪಿಲಾರು ನಿವಾಸಿ ಸಫ್ವಾನ್ (20) ಗಂಭೀರವಾಗಿ ಗಾಯಗೊಂಡವರು. ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇವರ ಜತೆಗಿದ್ದ ಅದೇ ಊರಿನವರೇ ಆದ ನಿಝಾಮ್(19), ಸಲೀಂ(24) ಸ್ವಲ್ಪ ಗಾಯಗೊಂಡು ತೊಕ್ಕೊಟ್ಟು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮದಕ ಸಮೀಪ ಮದುವೆ ಸಮಾರಂಭದಲ್ಲಿ ಕ್ಯಾಟರಿಂಗ್ ಕೆಲಸದಲ್ಲಿ ಪಾಲ್ಗೊಂಡಿದ್ದ ಸಫ್ವಾನ್, ನಿಝಾಮ್ ಮತ್ತು ಸಲೀಂ ಅವರು ಕ್ಯಾಟರಿಂಗ್ ವಾಹನವನ್ನು ತೊಕ್ಕೊಟ್ಟು ಟಿ.ಸಿ.ರೋಡಿನಲ್ಲಿ ನಿಲ್ಲಿಸಲು ತಡರಾತ್ರಿ ವೇಳೆ ಆಗಮಿಸಿದ್ದರು. ಅಲ್ಲಿ ವಾಹನ ನಿಲ್ಲಿಸಿ ಬೈಕಿನಲ್ಲಿ ಮೂರು ಮಂದಿಯೂ ಜತೆಯಾಗಿ ತೆರಳುವ ತೊಕ್ಕೊಟ್ಟು ಒಳಪೇಟೆಯ ಓವರ್ ಬ್ರಿಡ್ಜ್ ಸಮೀಪ ಅಡಗಿಕುಳಿತ ಸುಮಾರು ಐದು ಮಂದಿ ದುಷ್ಕರ್ಮಿಗಳ ತಂಡ ಚಲಿಸುತ್ತಿದ್ದ ಬೈಕಿನತ್ತ ತಲವಾರು ಬೀಸಿ ಹತ್ಯೆಗೆ ಯತ್ನಿಸಿದ್ದ ಬಗ್ಗೆ ದೂರು ದಾಖಲಾಗಿತ್ತು.

ಈ ವೇಳೆ ಬೈಕ್ ಚಲಾಯಿಸುತ್ತಿದ್ದ ನಿಝಾಮ್ ಹಾಗೂ ಹಿಂಬದಿ ಕುಳಿತಿದ್ದ ಸಲೀಂ ಇಬ್ಬರೂ ದಾಳಿಯಿಂದ ತಪ್ಪಿಸಿಕೊಂಡರೆ ನಡುವೆ ಕುಳಿತಿದ್ದ ಸಫ್ವಾನ್ ಮೇಲೆ ತಂಡ ತಲವಾರಿನಿಂದ ಹೊಟ್ಟೆಭಾಗಕ್ಕೆ ಏಟಾಗಿದ್ದು, ಆದರೂ ತಿವಿದ ಹೊಟ್ಟೆಯ ಭಾಗವನ್ನು ಕೈಯಲ್ಲೇ ಹಿಡಿದುಕೊಂಡ ಸಫ್ವಾನ್ ಒಂದು ಕಿ.ಮೀ. ದೂರದ ಕಾಪಿಕಾಡು ವರೆಗೂ ಓಡಿ ತಪ್ಪಿಸಿಕೊಂಡು, ಅಲ್ಲಿಂದ ಗೆಳೆಯರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದರು. ತಡರಾತ್ರಿಯಾದರೂ ಗೆಳೆಯನ ಕರೆಗೆ ಸ್ಪಂಧಿಸಿದ ಸಮದ್ ಮತ್ತು ನಝ್ರತ್ ಎಂಬವರು ಕೂಡಲೇ ಇಬ್ಬರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿಗಳಾದ ಕೆ.ಎಮ್ ಶಾಂತರಾಜು ( ಕಾನೂನು ಮತ್ತು ಸುವವ್ಯಸ್ಥೆ) ಹಾಗೂ ಡಾ. ಸಂಜೀವ ಎಮ್. ಪಾಟೀಲ್ ( ಅಪರಾಧ ಮತ್ತು ಸಂಚಾರಿ ವಿಭಾಗ) ಉಪಸ್ಥಿತರಿದ್ದರು.

Write A Comment