ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಹಾರಾಷ್ಟ್ರದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಏಪ್ರಿಲ್ 25ರಂದು ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳಾದ ದೀಪಕ್ ಮತ್ತು ರಮೇಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಬಸ್ ವೊಂದರಲ್ಲಿ ಮಹಾರಾಷ್ಟ್ರದ ಯುವತಿಯನ್ನು ಪರಿಚಯ ಮಾಡಿಕೊಂಡ ದೀಪಕ್, ಆಕೆಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಆಕೆಯ ಬಳಿ ಸಾಲ ಮಾಡಿದ್ದ. ಆದರೆ, ಆರು ತಿಂಗಳು ಕಳೆದರೂ ಸಾಲ ಮರುಪಾವತಿ ಮಾಡಿರಲಿಲ್ಲ. ಕೆಲಸ ಸಿಗದೆ ಕಂಗಲಾಗಿದ್ದ ಯುವತಿ ತನ್ನ ಹಣವನ್ನು ವಾಪಸ್ ಕೇಳಿದ್ದಾಳೆ.
ಆಗ ದೀಪಕ್ ಹಣ ನೀಡುವುದಾಗಿ ತಿಳಿಸಿ ತನ್ನ ಸ್ನೇಹಿತನ ಮನೆಗೆ ಬಾ ಎಂದು ಕರೆದಿದ್ದಾನೆ. ಆಕೆ ಹಣ ಸ್ವೀಕರಿಸಲು ಮನೆಗೆ ತೆರಳಿದ್ದಾಗ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ. ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.