ಮಂಗಳೂರು, ಎ.23: ಉಳ್ಳಾಲ ಮೊಗವೀರಪಟ್ಣದ ಮೀನುಗಾರ ರಾಜು ಕೋಟ್ಯಾನ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಮುಹಮ್ಮದ್ ಆಸಿಫ್(22) ಎಂಬಾತನನ್ನು ಉಳ್ಳಾಲ ಠಾಣಾ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಇನ್ನೋರ್ವ ಆರೋಪಿ ಸೊಹೈಲ್ ಎಂಬಾತ ನ್ಯಾಯಾಲಯಕ್ಕೆ ಶರಣಾಗಿದ್ದಾನೆ. ಈ ಮೂಲಕ ಎಲ್ಲಾ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಎಪ್ರಿಲ್ 12ರಂದು ಕೋಟೆಪುರ ಫ್ಯಾಕ್ಟರಿ ಸಮೀಪ ರಾಜು ಕೋಟ್ಯಾನ್ ಮೃತದೇಹ ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಮುಹಮ್ಮದ್ ಅಸ್ವೀರ್ ಅಲಿಯಾಸ್ ಅಚ್ಚು(19), ಅಬ್ದುಲ್ ಮುತ್ತಲೀಬ್ ಅಲಿಯಾಸ್ ಮುತ್ತು(20), ಮುಹಮ್ಮದ್ ಆಸಿಫ್(22), ಸೊಹೈಲ್(19) ಹಾಗೂ ಇಬ್ಬರು 17 ವರ್ಷದ ಬಾಲಾಪರಾಧಿಗಳನ್ನು ಪ್ರಕರಣದಲ್ಲಿ ಆರೋಪಿಗಳನ್ನಾಗಿ ಬಂಧಿಸಲಾಗಿದೆ.
ಬಂಧಿತರೆಲ್ಲರೂ ಉಳ್ಳಾಲ ಪರಿಸರದಲ್ಲಿ ಬ್ಯಾನರ್ ಹರಿಯುವುದು ಮತ್ತಿತರ ದುಷ್ಕೃತ್ಯಗಳಲ್ಲಿ ತೊಡಗಿಕೊಂಡವರೆಂದು ತಿಳಿದುಬಂದಿದೆ. ಪ್ರಧಾನ ಆರೋಪಿ ಆಸೀಫ್ ಈ ಹಿಂದೆ ಕಂಡಕ್ಟರ್ ಒಬ್ಬನ ಮೇಲೆ ಹಲ್ಲೆಗೈದಿದ್ದ ಪ್ರಕರಣದಲ್ಲಿ ಆರೋಪಿಯಾಗಿದ್ದ. ಉಳ್ಳಾಲ ಎಸ್.ಐ. ಭಾರತಿ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.